ಮಂಗಳೂರು: ರಾಜಕೀಯ ಪ್ರವೇಶದ ಗುಟ್ಟು ಬಿಚ್ಚಿಟ್ರು ನಳಿನ್‌ ..!

By Kannadaprabha NewsFirst Published Aug 30, 2019, 10:53 AM IST
Highlights

ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ರಾಜಕೀಯ ಪ್ರವೇಶದ ಹಿನ್ನೆಲೆ ಏನು..? ಅವರನ್ನು ರಾಜಕೀಯ ಪ್ರವೇಶಿಸುವಂತೆ ಒತ್ತಾಯಿಸಿದವರು ಯಾರು..? ಸ್ಪರ್ಧೆ ಮಾಡೋದೇ ಇಲ್ಲ ಅಂತ ಪಟ್ಟು ಹಿಡಿದಿದ್ದ ನಳಿನ್ ಕುಮಾರ್ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ಹೇಗೆ ಅನ್ನೋದನ್ನು ತಿಳಿಯಲು ಈ ಸುದ್ದಿ ಓದಿ.

ಮಂಗಳೂರು(ಆ.30): ಸಂಸದ ನಳಿನ್‌ ಕುಮಾರ್ ಕಟೀಲ್ ಅವರು ತಾವು ರಾಜಕೀಯ ಪ್ರವೇಶಿಸಿದ ಸಂದರ್ಭ, ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಚುನಾವಣೆಗೆ ಸ್ಪರ್ಧಿಸೋದೆ ಇಲ್ಲ ಅಂದಿದ್ರು. ಅವರು ರಾಜಕೀಯ ಪ್ರವೇಶ ಮಾಡಿದ ಕಾರಣವನ್ನು ಮಂಗಳೂರಿನಲ್ಲಿ ಬಿಚ್ಚಿಟ್ಟಿದ್ದಾರೆ.

ಆರ್‌ಎಸ್‌ ಪ್ರಚಾರಕನಾದ ಬಳಿಕ ನಾನು ಧರ್ಮಜಾಗರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. 2008ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಡಿ.ವಿ.ಸದಾನಂದ ಗೌಡರು ಕರೆದು ಮೂಡುಬಿದಿರೆಯಿಂದ ಸ್ಪರ್ಧಿಸುವಂತೆ ಸೂಚನೆ ನೀಡಿದ್ದರು. ಆದರೆ ನಾನು ಪಕ್ಷ ಸಂಘಟನೆಯಲ್ಲಿ ಮುಂದುವರಿಯುವುದಾಗಿ ನಯವಾಗಿಯೇ ನಿರಾಕರಿಸಿದೆ. 2009ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಡಿ.ವಿ ಅವರು ಮತ್ತೊಮ್ಮೆ ಹೇಳಿದರು. ಅದನ್ನೂ ನಿರಾಕರಿಸಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಘದ ಒತ್ತಡವೇ ರಾಜಕೀಯ ಪ್ರವೇಶಕ್ಕೆ ಕಾರಣ:

ಆದರೆ ನನ್ನ ಮೇಲೆ ಒತ್ತಡ ಹೆಚ್ಚಾದಾಗ ನಾನು ಒಂದು ವಾರ ಅಜ್ಞಾತವಾಗಿ ಇದ್ದೆ. ಕೊನೆಗೆ ಸಂಘಪರಿವಾರದ ಮುಖಂಡರು, ಇದು ಸಂಘದ ಸೂಚನೆ ಪಾಲಿಸಲೇ ಬೇಕು ಎಂದು ಹೇಳಿದ ಕಾರಣ ನಾನು ನಿರುಪಾಯನಾಗಿ ಕಟ್ಟುಬಿದ್ದು ಒಪ್ಪಿಕೊಂಡೆ. ಅಲ್ಲಿಂದ ಇಲ್ಲಿವರೆಗೆ ಸಂಘಪರಿವಾರ ಹಾಕಿಕೊಟ್ಟಹಾದಿಯಲ್ಲೇ ಮುಂದುವರಿಯುತ್ತಿದ್ದೇನೆ ಎಂದು ನಳಿನ್‌ ಕುಮಾರ್‌ ಅವರು ತಾನು ರಾಜಕೀಯಕ್ಕೆ ಧುಮುಕಿದ ಗುಟ್ಟನ್ನು ಬಿಚ್ಚಿಟ್ಟರು.

'ಯಾರವ ನಳಿನ್ ಅಂತ ಕೇಳಿದ್ರು':

ನಾನು ಯಾವತ್ತೂ ಯಾವುದೇ ಸ್ಥಾನಮಾನವನ್ನು ಬಯಸಿಲ್ಲ. ನಾನು ಲೋಕಸಭೆಗೆ ಸ್ಪರ್ಧಿಸಿದಾಗ, ಈ ನಳಿನ್‌ ಕುಮಾರ್‌ ಯಾರೆಂದು ಯಾರಿಗೂ ತಿಳಿದಿರಲಿಲ್ಲ. ನನ್ನ ವಿರುದ್ಧ ಸ್ಪರ್ಧಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಕೂಡಾ ‘ಯಾರವ ನಳಿನ್‌ ಕುಮಾರ್‌’ ಎಂದು ಕೇಳಿದ್ದರು. ಜನತೆ ನನ್ನನ್ನು ಸ್ವೀಕರಿಸಿ ಪ್ರೀತಿಸಿದರು. ಹಾಗಾಗಿ ಮತದಾರರು ಹಾಗೂ ಕಾರ್ಯಕರ್ತರನ್ನು ಮರೆಯಲಾರೆ. ಜಿಲ್ಲೆಯ ಋುಣ ಎಂದಿಗೂ ನನ್ನಲ್ಲಿ ಇದೆ ಎಂದು ನಳಿನ್‌ ಕುಮಾರ್‌ ಹೇಳಿದರು.

ಮಂಗಳೂರು: ಬಂಟ್ವಾಳ ಕ್ಷೇತ್ರಕ್ಕೆ 25 ಕೋಟಿ ರು. ಬಿಡುಗಡೆಗೆ ಆದೇಶ

click me!