ನಾನು, ಸಿದ್ದು ಬೇರೆಯಲ್ಲ - ನಾವಿಬ್ಬರೂ ಒಂದೇ: ರೇವಣ್ಣ

By Kannadaprabha NewsFirst Published Aug 30, 2019, 10:28 AM IST
Highlights

ನಾನು ಮತ್ತು ಸಿದ್ದರಾಮಯ್ಯ ಬೇರೆ ಅಲ್ಲ. ಇಬ್ಬರೂ ಒಂದೇ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಓಲೈಕೆಗೆ ಮುಂದಾಗಿದ್ದಾರೆ. 

ಹಾಸನ [ಆ.30]: ಒಂದೆಡೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೌಹಾರುತ್ತಿದ್ದರೆ, ಮತ್ತೊಂದೆಡೆ ದೇವೇಗೌಡರ ಪುತ್ರ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಸಿದ್ದರಾಮಯ್ಯ ಪರ ಒಲವು ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಬೇರೆಯಲ್ಲ ನಾನು ಬೇರೆಯಲ್ಲ, ನಾವಿಬ್ಬರೂ ಒಂದೇ ಎಂದಿದ್ದಾರೆ. ರೇವಣ್ಣರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡರು ದೂರುತ್ತಿದ್ದರೆ, ರೇವಣ್ಣ ಹಾಗೂ ಕುಮಾರಸ್ವಾಮಿಯಿಂದಲೇ ಸರ್ಕಾರ ಬಿದ್ದು ಹೋಯಿತು ಎಂದು ಸಿದ್ದರಾಮಯ್ಯ ಟೀಕಿಸುತ್ತಿದ್ದಾರಲ್ಲ ಎಂದು ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಸಿದ್ದರಾಮಯ್ಯ ಹಾಗೂ ನಾನು ಬೇರೆಯಲ್ಲ, ನಾವಿಬ್ಬರು ಒಂದೇ. ಈ ಬಗ್ಗೆ ನಾನೇ ತಲೆ ಕೆಡಿಸಿಕೊಂಡಿಲ್ಲ, ನೀವೇಕೆ ತಲೆಕೆಡೆಸಿಕೊಳ್ಳುತ್ತೀರಿ?. ಈ ಕುರಿತು ಆಮೇಲೆ ಮಾತನಾಡುತ್ತೇನೆ. ಜಾತ್ಯಾತೀತ ಶಕ್ತಿಗಳು ಒಂದಾಗಿ ಹೋರಾಟ ಮಾಡಬೇಕೆಂಬುದಷ್ಟೇ ಈಗ ಮುಖ್ಯ ಎಂದು ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂತಿಮವಾಗಿ ಸತ್ಯ ತಿಳಿಯಲಿದೆ:  ಜಂತಕಲ್‌ ಮೈನಿಂಗ್‌ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೆಸರನ್ನು ಎಫ್‌ಐಆರ್‌ನಲ್ಲಿ ಕೈ ಬಿಟ್ಟಿರುವ ವಿಚಾರ ನನಗೆ ತಿಳಿದಿಲ್ಲ. ಅಂತಿಮವಾಗಿ ಸತ್ಯ ತಿಳಿಯದೇ ಇರುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

click me!