ಸಿದ್ದರಾಮಯ್ಯ ಕೇವಲ ರಾಜಕೀಯಕ್ಕಾಗಿ ಮಾತನಾಡೋದನ್ನ ಬಿಡಬೇಕು: ಪ್ರತಾಪ್ ಸಿಂಹ

By Suvarna NewsFirst Published Aug 1, 2021, 1:18 PM IST
Highlights

*  ಬೊಮ್ಮಾಯಿ ಮನೆಯಲ್ಲಿದ್ದುಕೊಂಡೇ ಅಧಿಕಾರ ನಡೆಸುವುದನ್ನು ಕಂಡಿದ್ದಾರೆ
*  ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ 
*  ಶೀಘ್ರದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ಮೈಸೂರಿಗೂ ಲಭ್ಯ 
 

ಮೈಸೂರು(ಆ.01): ಮೋದಿ ಸರ್ಕಾರದ ಆರಂಭದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿತ್ತು. ಆಗಲೇ ಮೈಸೂರು ಕೂಡ ಸ್ಮಾರ್ಟ್ ಸಿಟಿ ಯೋಜನೆಗೆ ಸೇರಬೇಕಿತ್ತು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸ್ಥಳೀಯವಾಗಿ ನರ್ಮ್ ಹಣ ಬಳಕೆ ಮಾಡಿಕೊಂಡಿರಲಿಲ್ಲ‌. ಪರಿಣಾಮ ಸ್ಮಾರ್ಟ್ ಸಿಟಿ ಯೋಜನೆ ಮೈಸೂರಿನ ಕೈ ತಪ್ಪಿತ್ತು.  ಆದರೆ ಈಗ ಮತ್ತೊಮ್ಮೆ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದೇನೆ‌. ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ಮೈಸೂರಿಗೂ ಲಭ್ಯವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.  

ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರದ ಬಳಿ ರಾಜ್ಯದ ಪಾಲು ಕೇಳಲಾರರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ‌ದ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಬೊಮ್ಮಾಯಿಯವರು ಮನೆಯಲ್ಲಿದ್ದುಕೊಂಡೇ ಅಧಿಕಾರ ನಡೆಸುವುದನ್ನು ಕಂಡಿದ್ದಾರೆ. ಅವರ ತಂದೆ ಸಹ ಮುಖ್ಯಮಂತ್ರಿ ಆಗಿದ್ದವರು. ಸ್ವತಃ ಬಸವರಾಜ ಬೊಮ್ಮಾಯಿ ಚಾಣಾಕ್ಷ ರಾಜಕಾರಣಿಯಾಗಿದ್ದಾರೆ. ಗೃಹ ಸಚಿವರಾಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರು ಎಲ್ಲವನ್ನೂ ಚೆನ್ನಾಗಿ ನಡೆಸಿಕೊಂಡು ಹೋಗಲಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. 

ಮೈಸೂರು : ಕೇಂದ್ರ ಸರ್ಕಾರದ ಬಳಿ ಪ್ರತಾಪ ಸಿಂಹ ಮನವಿ

ಕೇಂದ್ರದಿಂದ ರಾಜ್ಯದ ಪಾಲಿನ ಹಣ ಬರುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಸಿಂಹ, ಸಿದ್ದರಾಮಯ್ಯಗೆ ಎಲ್ಲಾ ಗೊತ್ತಿದ್ದೂ ರಾಜಕೀಯಕ್ಕಾಗಿ ಮಾತನಾಡುತ್ತಾರೆ. ಹಾಗಾಗಿ ಆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಸಿದ್ದರಾಮಯ್ಯನವರು 13 ಬಾರಿ ಬಜೆಟ್ ಮಂಡನೆ ಮಾಡಿರುವವರು. ಅವರಿಗೆ ಎಲ್ಲವೂ ಗೊತ್ತು. ಹೈವೆ ಕೆಲಸಕ್ಕೆ 95 ಸಾವಿರ ಕೋಟಿ ಹಣ ಕೊಟ್ಟಿರುವುದು ಮೋದಿ ಸರ್ಕಾರ. ಬೆಂಗಳೂರು ಮೈಸೂರು ಹೈವೆ ಅಭಿವೃದ್ಧಿಗಾಗಿ 8,096 ಕೋಟಿ ಹಣ ಕೊಟ್ಟಿದೆ. ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡುತ್ತಿರುವುದು ಮೋದಿ ಸರ್ಕಾರ. ರಾಜ್ಯಕ್ಕೆ ಅಗತ್ಯವಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಾ ಬಂದಿದೆ. ಸಿದ್ದರಾಮಯ್ಯ ಕೇವಲ ರಾಜಕೀಯಕ್ಕಾಗಿ ಮಾತನಾಡುವುದನ್ನು ಬಿಡಬೇಕು ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ಕಿಡಿ‌ ಕಾರಿದ್ದಾರೆ. 
 

click me!