Council Election Karnataka : 'ಬಿಜೆಪಿ ಬೆಂಬಲಿತರ ಮತವೂ ಕಾಂಗ್ರೆಸ್‌ಗೆ'

By Kannadaprabha NewsFirst Published Dec 8, 2021, 3:10 PM IST
Highlights
  • ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯದಿಂದಾಗಿ ಗ್ರಾಮೀಣ ಭಾಗದ ಅಭಿವೃದ್ಧಿ ನಿಂತ ನೀರಾಗಿದೆ
  •  ಮತದಾರರು ಪಕ್ಷ ಭೇದ ಮರೆತು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ 

ತೀರ್ಥಹಳ್ಳಿ (ಡಿ.08): ಬಿಜೆಪಿ (BJP) ಸರ್ಕಾರದ ಆಡಳಿತದ ವೈಫಲ್ಯದಿಂದಾಗಿ ಗ್ರಾಮೀಣ ಭಾಗದ (Rural Area) ಅಭಿವೃದ್ಧಿ ನಿಂತ ನೀರಾಗಿದೆ. ಗ್ರಾಪಂ ಸದಸ್ಯರಿಗೆ (Gram Panchayat Members) ಜನಪರವಾಗಿ ಕೆಲಸ ಮಾಡುವ ಅವಕಾಶವೇ ಇಲ್ಲವಾಗಿದೆ. ಈ ಹಿನ್ನೆಲೆ ಮತದಾರರು ಪಕ್ಷ ಭೇದ ಮರೆತು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದು ಕಾಂಗ್ರೆಸ್‌ (Congress) ಮುಖಂಡ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ (Madhu Bangarappa) ವಿಶ್ವಾಸ ವ್ಯಕ್ತಪಡಿಸಿದರು.  ಮಂಗಳವಾರ ಪಟ್ಟಣದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಗ್ರಾಪಂ ಸದಸ್ಯರು ಚುನಾಯಿತರಾಗಿ ಒಂದು ವರ್ಷ ಕಳೆದಿದ್ದರೂ ನರೇಗಾ ಅನುದಾನ ಸೇರಿದಂತೆ ರಾಜ್ಯದ ಬಿಜೆಪಿ (BJP) ಸರ್ಕಾರ ಅಗತ್ಯ ಅನುದಾನವನ್ನು ಬಿಡುಗಡೆ ಮಾಡದ ಕಾರಣ ಸದಸ್ಯರಿಗೆ ಕೆಲಸವೇ ಇಲ್ಲದಂತಾಗಿದೆ. ಹೀಗಾಗಿ, ಬಿಜೆಪಿ ಈ ಚುನಾವಣೆಯಲ್ಲಿ (Election) ಮತ ಕೇಳುವ ನೈತಿಕತೆಯನ್ನೇ ಕಳೆದುಕೊಂಡಿದೆ. ಕಸ ವಿಲೇವಾರಿಗೂ ಜನರೇ ಶುಲ್ಕ ನೀಡೋದಾದ್ರೆ ಸರ್ಕಾರದ ಸ್ವಚ್ಛ ಭಾರತ್‌ ಯೋಜನೆ ಮತ್ತು ರಾಜ್ಯ ಸರ್ಕಾರದ ಹೊಣೆಗಾರಿಕೆ ಏನು ಎಂದು ಪ್ರಶ್ನಿಸಿದರು.

ವ್ಯವಹಾರದ ಮೂಲಕವೇ ರಚನೆ ಆಗಿರುವ ಈ ಸರ್ಕಾರದ ಜನವಿರೋಧಿ ನೀತಿಯಿಂದಾಗಿ ಜನರು ರೋಸಿಹೋಗಿದ್ದಾರೆ. ಈಚೆಗೆ ವಿಧಾನಸಭೆಗೆ (Assembly) ನಡೆದ ಉಪಚುನಾವಣೆಯಲ್ಲಿ ಸಿಎಂ ಕ್ಷೇತ್ರದಲ್ಲೇ ಆ ಪಕ್ಷದ ಅಭ್ಯರ್ಥಿ ಪರಾಭವಗೊಂಡಿರುವುದು ಇದಕ್ಕೆ ಉತ್ತಮ ಉದಾಹರಣೆ. ಈ ಚುನಾವಣೆಯಲ್ಲೂ ಎಲ್ಲೆಡೆ ಕಾಂಗ್ರೆಸ್‌ (Congress) ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಪ್ರಸನ್ನ ಕುಮಾರ್‌ ಸದನದಲ್ಲಿ ಜಿಲ್ಲೆಯ ಜನರ ಧ್ವನಿಯಾಗಿ ನಿಲ್ಲಬಲ್ಲ ಸಮರ್ಥರು ಎಂಬ ಕಾರಣಕ್ಕೆ ನೂರಕ್ಕೆ ನೂರು ಜೆಡಿಎಸ್‌ (JDS) ಮಾತ್ರವಲ್ಲದೇ ಬಿಜೆಪಿ ಬೆಂಬಲಿತರ ಮತವೂ ಪಕ್ಷದ ಅಭ್ಯರ್ಥಿ ಪರವಾಗಿ ಬೀಳುವ ಭರವಸೆ ಇದೆ ಎಂದು ಹೇಳಿದರು.

ಮುಖಂಡರಾದ ಆರ್‌.ಎಂ.ಮಂಜುನಾಥ ಗೌಡ, ಕೆಪಿಸಿಸಿ (KPCC) ಸದಸ್ಯ ಜಿ.ಎಸ್‌.ನಾರಾಯಣ ರಾವ್‌, ಎರಡು ಘಟಕಗಳ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್‌ ಹಾಗೂ ಮುಡುಬಾ ರಾಘವೇಂದ್ರ, ಯುವ ಕಾಂಗ್ರೆಸ್‌ (Congress) ಅಧ್ಯಕ್ಷ ಅಮರನಾಥ ಶೆಟ್ಟಿ, ಪಪಂ ಅದ್ಯಕ್ಷೆ ಶಬನಂ, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಪಿ.ವಿ.ಮಹಾಬಲೇಶ್‌, ಡಿ.ಲಕ್ಷ್ಮಣ್‌, ಟಿ.ಎಲ್‌. ಸುಂದರೇಶ್‌, ಶಾಂತವೀರ ನಾಯ್‌್ಕ ಮುಂತಾದವರು ಇದ್ದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಪರವಾದ ವಾತಾವರಣ : 

ಶಿವಮೊಗ್ಗ (Shivamogga) ವಿಧಾನ ಪರಿಷತ್ತು ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಪರವಾದ ವಾತಾವರಣವಿದೆ. ಅಭ್ಯರ್ಥಿ ಆರ್‌.ಪ್ರಸನ್ನ ಕುಮಾರ್‌ ಸುಲಭವಾಗಿ ಜಯಗಳಿಸುತ್ತಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ (madhu Bangarappa) ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ತಾಲೂಕುಗಳಾದ ಚನ್ನಗಿರಿ, ಹೊನ್ನಾಳ್ಳಿ, ಬಸವಪಟ್ಟಣದಲ್ಲೂ ಕಾಂಗ್ರೆಸ್‌ (congress) ಪರವಾದ ಅಲೆಯಿದ್ದು, ಬಿಜೆಪಿಯ ಸದಸ್ಯರು ಸಹ ಪ್ರಸನ್ನಕುಮಾರ್‌ ಅವರಿಗೆ ಮತ ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಿಸುವ ನಿರೀಕ್ಷೆ ಇದೆ ಎಂದರು.

ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಅಧಿಕಾರ ಮೊಟಕುಗೊಳಿಸುವ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನ ನಡೆಸಿದೆ. ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ವೇತನ ಪಾವತಿ ಮಾಡಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಕಸ ವಿಲೇವಾರಿ ವಾಹನದ ಅಗತ್ಯ ಇರಲಿಲ್ಲ. ಆದರೆ, ಕಮೀಷನ್‌ ಹೊಡೆಯುವ ಉದ್ದೇಶದಿಂದ ಯೋಜನೆ ಜಾರಿಗೆ ತಂದು ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು.

ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿರುವ ಪ್ರಸನ್ನ ಕುಮಾರ್‌ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿ. ವಿಧಾನ ಪರಿಷತ್ತು ಸದಸ್ಯರಾಗಿ ಅವರು ಜನಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸಮಸ್ಯೆ ವಿರುದ್ಧ ವಿಧಾನ ಪರಿಷತ್‌ನಲ್ಲಿ ಪ್ರಸನ್ನಕುಮಾರ್‌ ಅತ್ಯಂತ ಸಮರ್ಥವಾಗಿ ಧ್ವನಿ ಎತ್ತುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆ, ನಗರ ಪಾಲಿಕೆ ಸದಸ್ಯರು ಪ್ರಸನ್ನಕುಮಾರ್‌ ಅವರಿಗೆ ಮತ ನೀಡುವ ಮೂಲಕ ಸ್ಥಳೀಯ ಸಂಸ್ಥೆಗಳ ಹಕ್ಕನ್ನು ಮೊಟಕು ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್‌.ಜಯಂತ್‌, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್‌, ಅನಿತಾಕುಮಾರಿ, ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಮಾಜಿ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಪ್ರಮುಖರಾದ ಮಹಾಬಲ ಕೌತಿ, ಶಾಂತವೀರ ನಾಯ್‌್ಕ, ದಿನೇಶ್‌ ಎಸ್‌.ಪಿ., ವೆಂಕಟೇಶ್‌ ಮೆಳವರಿಗೆ, ಲೋಕೇಶ್‌ ಗಾಳಿಪುರ, ಕೆ.ಹೊಳೆಯಪ್ಪ, ಮಂಜುನಾಥ್‌ ಇನ್ನಿತರರು ಹಾಜರಿದ್ದರು.

click me!