ಚಿಕ್ಕಮಗಳೂರಲ್ಲಿ ದತ್ತ ಜಯಂತಿ: ನೂರಾರು ಮಾಲಾಧಾರಿಗಳಿಂದ ಬೈಕ್ ಜಾಥಾ

By Girish GoudarFirst Published Dec 22, 2023, 9:30 PM IST
Highlights

ಜಯಂತಿ ಹಿನ್ನೆಲೆ ಚಿಕ್ಕಮಗಳೂರು ನಗರ ಕೇಸರಿಮಯಗೊಳ್ಳುತ್ತಿದೆ. ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಬೃಹತ್ ಕಟೌಟ್‌ಗಳು, ಕೇಸರಿ ಧ್ವಜ, ಬಂಟಿಂಗ್‌ಗಳು ರಾರಾಜಿಸುತ್ತಿದ್ದು, ಅದ್ಧೂರಿ ಸಿದ್ಧತೆಗಳು ನಡೆದಿವೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.22): ವಿಶ್ವಹಿಂದೂ ಪರಿಷತ್-ಬಜರಂಗದಳದ ವತಿಯಿಂದ ನಡೆಯುವ ದತ್ತ ಜಯಂತಿ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ನೂರಾರು ಮಾಲಾಧಾರಿಗಳು ಬೈಕ್ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.

Latest Videos

ನಗರದ ಆರ್ಜಿ ರಸ್ತೆಯ ಶ್ರೀರಾಮ ದೇವಸ್ಥಾನದಿಂದ ಹೊರಟ ಬೈಕ್ ರ್ಯಾಲಿಯು ಜಾಲಿ ಫ್ರೇಂಡ್ಸ್ ಸರ್ಕಲ್ ಮೂಲಕ ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ, ಬೇಲೂರು ರಸ್ತೆ, ಹೊಸಮನೆ ಮೂಲಕ ಬೋಳರಾಮೇಶ್ವರ ಸ್ವಾಮಿ ದೇವಸ್ಥಾನಕ್ಕೆ  ತಲುಪಿ ಅಲ್ಲಿಮದ ಸರ್ಕಾರಿ ಬಸ್ ನಿಲ್ದಾಣ, ಐಜಿ ರಸ್ತೆ ಮೂಲಕ ಮತ್ತೆ ಶ್ರೀರಾಮ ದೇವಸ್ಥಾನ ತಲುಪಿತು.ನೂರಾರು ಬೈಕ್‌ಗಳಲ್ಲಿ ಭಗಾಧ್ವಜಗಳನು ಹಿಡಿದು ದತ್ತಪೀಠ ನಮ್ಮದು ಎಂದು ಘೋಷಣೆ ಕೂಗಿದ ಮಾಲಾಧಾರಿಗಳು ಪೀಠವನ್ನು ಸಂಪೂರ್ಣ ಹಿಂದೂ ಪೀಠವಾಗಿಸಬೇಕು ಎಂದು ಆಗ್ರಹಿಸಿದರಲ್ಲದೆ, ನಾಳೆಯಿಂದ ಆರಂಭವಾಗುವ ದತ್ತ ಜಯಂತಿ ಉತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಸಾರ್ವಜನಿಕರನ್ನು ಕೋರಿದರು. ವಿಶ್ವಹಿಂದೂ ಪರಿಷತ್-ಬಜರಂಗದಳ ಪ್ರಮುಖರು ಸಹ ಬೈಕ್ ಜಾಥಾದಲ್ಲಿ ಪಾಲ್ಗೊಂಡರು.

ಡಿ.26ರಂದು ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಶ್ರೀರಾಮಸೇನೆ ಪ್ಲಾನ್!

ನಗರ ಕೇಸರಿಮಯ

ಇದೇ ವೇಳೆ ದತ್ತ ಜಯಂತಿ ಹಿನ್ನೆಲೆ ನಗರ ಕೇಸರಿಮಯಗೊಳ್ಳುತ್ತಿದೆ. ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಬೃಹತ್ ಕಟೌಟ್‌ಗಳು, ಕೇಸರಿ ಧ್ವಜ, ಬಂಟಿಂಗ್‌ಗಳು ರಾರಾಜಿಸುತ್ತಿದ್ದು, ಅದ್ಧೂರಿ ಸಿದ್ಧತೆಗಳು ನಡೆದಿವೆ.

ಎಫ್ ಐ ಆರ್ ದಾಖಲು : 

ದತ್ತ ಜಯಂತಿ ಉತ್ಸವಕ್ಕೆ ಬಂಟಿಂಗ್ ಕಟ್ಟಲು ಅಡ್ಡಿ ಪಡಿಸಿ, ಮಾಲಾಧಾರಿಗಳ ಮೇಲೆ ಹಲ್ಲೆಗೆ ಮುಂದಾದ ನಾಲ್ವರು ದುಷ್ಕರ್ಮಿಗಳ ವಿರುದ್ಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಹಾಂದಿ ಗ್ರಾಮದ ಸಬ್ದರ್ ಅಹಮದ್, ಶಾಹಿದ್ ಅಹಮದ್, ಜೀಶಾನ್, ಇದ್ರೀಸ್ ಅಹಮದ್ ವಿರುದ್ಧ ದೂರು ದಾಖಲಾಗಿದ್ದು, ಈ ನಾಲ್ವರು ಗುರುವಾರ ರಾತ್ರಿ ಇತರರೊಂದಿಗೆ ಗುಂಪುಕಟ್ಟಿಕೊಂಡು ಬಂದು ಹಾಂದಿಯ ಅಂಬೇಡ್ಕರ್ ವೃತ್ತದಲ್ಲಿ ಮಾಲಾಧಾರಿಗಳು ಬಂಟಿಂಗ್ ಕಟ್ಟುವಾಗ ಅಡ್ಡಿಪಡಿಸಿದ್ದಲ್ಲದೆ, ಬಂಟಿಂಗ್ ಬ್ಯಾನರ್ ಕಟ್ಟಬಾರದು ಎಂದು ಬೆದರಿಕೆ ಹಾಕಿ, ಹಲ್ಲೆಗೂ ಮುಂದಾಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಂಜುನಾಥ, ಸುನಿಲ್, ಸಂತು ಇತರರಿಗೆ ಆರೋಪಿಗಳು ಪೊಲೀಸರೆದುರೇ ಕತ್ತಿ ತೋರಿಸಿ, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರು ನೀಡಲಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಸಿಆರ್ಪಿಸಿ ೧೫೭ ರಡಿ ಪ್ರಕರಣ ದಾಖಲಿಸಿದ್ದಾರೆ.

4000 ಪೊಲೀಸ್ ಸಿಬ್ಬಂದಿ

ವಿಶ್ವಹಿಂದೂ ಪರಿಷತ್-ಬಜರಂಗಳದ ವತಿಯಿಂದ ಡಿಸೆಂಬರ್ 24 ರಿಂದ 26 ರ ವರೆಗೆ ನಡೆಯುವ ದತ್ತಜಯಂತಿ ಉತ್ಸವದ ಬಂದೋ ಬಸ್ತ್ಗಾಗಿ ಸುಮಾರು 4000 ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಆಮಟೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್ ಪಿ  7 ಮಂದಿ ಎಎಸ್ಪಿಗಳು, 30 ಮಂದಿ ಡಿವೈಎಸ್ಪಿಗಳು,60 ಮಂದಿ ವೃತ್ತ ನಿರೀಕ್ಷಕರುಗಳನ್ನು ನೇಮಿಸಿಕೊಳ್ಳಲಾಗುವುದು. ಇದರೊಂದಿಗೆ 20 ಕೆಎಸ್ಆರ್ಪಿ ಕಾರ್ಯಪಡೆ, 25 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗುವುದು ಎಂದರು.

ಹಳಬರಿಗೆ ಆಧ್ಯತೆ

ಹಿಂದೆ ದತ್ತ ಜಯಂತಿ ಬಂದೋಬಸ್ತ್ನಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳನ್ನು ಶೇ.80 ರಷ್ಟು ನೇಮಿಸಿಕೊಳ್ಳಲಾಗುವುದು. ವಾತಾವರಣ ಮತ್ತು ಜನ ಸಂಪರ್ಕ ಇರುತ್ತದೆ ಎನ್ನುವುದು ಇದಕ್ಕೆ ಕಾರಣ ಎಂದರು.

ಸೌಲಭ್ಯಕ್ಕೆ ವಿಶೇಷ ಕಾಳಜಿ

ಎಲ್ಲಾ ಸಿಬ್ಬಂದಿಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವ ವಿಚಾರದಲ್ಲಿ ಈ ಬಾರಿ ವಿಶೇಷ ಕಾಳಜಿ ವಹಿಸಲಾಗಿದೆ. ಉತ್ತಮ ಊಟದ ವ್ಯವಸ್ಥೆ, ವಸತಿಗಾಗಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಟೆಲ್ಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಬಿಸಿನೀರು, ಹಾಸಿಗೆ ಇನ್ನಿತರೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಹಿರಿಯ ಅಧಿಕಾರಿಗಳು ಬರುತ್ತಿದ್ದಾರೆ ಅವರ ಮಾರ್ಗದರ್ಶನದಲ್ಲಿ ಸಿಬ್ಬಂಧಿಗಳನ್ನು ನಾಳೆಯಿಂದಲೇ ನಿಯೋಜಿಸಲಾಗುವುದು ಎಂದು ಹೇಳಿದರು. 

28  ಚೆಕ್‌ಪೋಸ್ಟ್‌

ನಮ್ಮ ಜಿಲ್ಲೆಯಲ್ಲಿ 28  ಚೆಕ್ಪೋಸ್ಟ್ಗಳನ್ನು ತೆರೆಯಲಾಗುತ್ತಿದೆ. ಇವೆಲ್ಲವೂ ಬೇರೆ ಜಿಲ್ಲೆಯ ಗಡಿ ಭಾಗದಲ್ಲಿ ಮತ್ತು ಜಿಲ್ಲೆಯ ಒಳಭಾಗದಲ್ಲಿದ್ದು, ಎಲ್ಲಾ ಚೆಕ್ ಪೋಸ್ಟ್ಗಳಿಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಸ್ಥಳಿಯ ಸಿಬ್ಬಂಧಿಗಳನ್ನು ನೇಮಿಸಲಾಗುತ್ತಿದೆ. ಡಿಸೆಂಬರ್ 24ರಿಂದ ಈ ಚೆಕ್ ಪೋಸ್ಟ್ಗಳು ಕಾರ್ಯಾರಂಭ ಮಾಡಲಿವೆ ಎಂದರು.ಭಕ್ತಾಧಿಗಳು, ಮಾಲಾಧಾರಿಗಳು ಎಷ್ಟು ಮಂದಿ ಎಲ್ಲಿಂದ ಬರುತ್ತಾರೆ. ಎನ್ನುವ ಮಾಹಿತಿ ಪಡೆಯುವುದು ಮತ್ತು ಗಿರಿಯಲ್ಲಿ ಕೈಗೊಳ್ಳಬಹುದಾದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

36 ವಿಶೇಷ ದಂಡಾಧಿಕಾರಿಗಳು

ಜಿಲ್ಲೆಯಲ್ಲಿ ಒಟ್ಟು 36 ಮಂದಿ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಲಾಗುವುದು. ನಮ್ಮ ಮನವಿ ಮೇರೆಗೆ ಜಿಲ್ಲಾಧಿಕಾರಿಗಳು ಈ ಅಧಿಕಾರಿಗಳನ್ನು ನೇಮಿಸಿದ್ದಾರೆ. ದತ್ತಪೀಠ, ಚೆಕ್ಪೋಸ್ಟ್ಗಳು, ಸೂಕ್ಷ್ಮ ಪ್ರದೇಶಗಳು, ಮೆರವಣಿಗೆ ಇನ್ನಿತರೆ ಕಡೆಗಳಲ್ಲಿ ಇವರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ವಿಶೇಷ ಬಂದೋಬಸ್ತ್

ಈ ಬಾರಿ ವಿಶೇಷವಾಗಿ ಐಡಿ ಪೀಠ ಬಂದೋಬಸ್ತ್ ಮಾಡಲಾಗುತ್ತಿದೆ. ಆರಂಭದಿಂದ ಕೊನೆಯ ದಿನದ ವರೆಗೆ ಪ್ರತ್ಯೇಕ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ೪೫ ವರ್ಷದ ಒಳಗಿನ ಸಿಬ್ಬಂದಿಗಳಿಗೆ ಪ್ರಾಮುಖ್ಯತೆ ನೀಡಿ ಅಂತವರನ್ನು ಮಾತ್ರ ಗಿರಿಯಲ್ಲಿ ಬಂದೋಬಸ್ತ್ಗೆ ನಿಯೋಜಿಸಲಾಗುವುದು. ಆ ಎಲ್ಲಾ ಸಿಬ್ಬಂಧಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದರು.

ವೀಕೆಂಡ್, ಕ್ರಿಸ್‌ಮಸ್‌ ಪ್ಲಾನ್ ಮಾಡಿದವರಿಗೆ ನಿರಾಸೆ: 5 ದಿನ ಪ್ರವಾಸಿ ತಾಣಗಳಿಗೆ ನಿರ್ಬಂಧ

ಕೋವಿಡ್ ಮಾರ್ಗಸೂಚಿ ಪಾಲನೆ 

ಇದೇ ವೇಳೆ ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರದಿಂದ ಹೊಸದಾಗಿ ಮಾರ್ಗಸೂಚಿಗಳು ಬಂದಿವೆ. ಬಂದೋಬಸ್ತ್ ಸಂದರ್ಭದಲ್ಲಿ ಅದನ್ನೂ ಪಾಲಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಅಂತರ ಕಾಪಾಡಿಕೊಳ್ಳುವುದು ಇನ್ನಿತರೆ ಕ್ರಮಗಳನ್ನು ಅನುಸರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಬಂದೋಬಸ್ತ್

ಈ ಬಾರಿ ಚಿಕ್ಕಮಗಳೂರು ನಗರ ಮತ್ತು ದತ್ತ ಪೀಠದಲ್ಲಿ ಪ್ರತ್ಯೇಕ ಬಂದೋ ಬಸ್ತ್ ಮಾಡುವುದರಿಂದ ಹಾಗೂ ತಾಲ್ಲೂಕು ಕೇಂದ್ರಗಳು, ಗ್ರಾಮೀಣ ಪ್ರದೇಶಗಳ ಮಾರ್ಗದಲ್ಲಿ ಕೆಲವು ಸೂಕ್ಷ್ಮ ಪ್ರದೇಶಗಳು ಇರುವುದರಿಂದ ಜಿಲ್ಲೆಯಾದ್ಯಂತ ಬಂದೋ ಬಸ್ತ್ ಮಾಡಲಾಗುತ್ತಿದೆ.

click me!