Chikkamagaluru: ಕಾಫಿ ತೋಟದ ಹಾದಿಯಲ್ಲಿ ಸಾಗಿದ ಬೈಕ್ ರ್ಯಾಲಿ!

By Govindaraj SFirst Published May 15, 2022, 11:39 PM IST
Highlights

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕಾಫಿ ತೋಟದ ಹಾದಿಯಲ್ಲಿ ಬೈಕ್ ರ್ಯಾಲಿ ನಡೆಯಿತು. ಚಿಕ್ಕಮಗಳೂರಿನ ಅಲ್ಲಂಪುರದ ಆಸು ಪಾಸಿನ ಕಾಫಿ ತೋಟದಲ್ಲಿ ಬೈಕ್ ಸವಾರರು ಮೋಟಾರ್ ಬೈಕ್‌ಗಳ ರ್ರೂಂ.. ರ್ರೂಂ... ಕಲರವ ರ್ಯಾಲಿ ಪ್ರಿಯರನ್ನು ಮಂತ್ರ ಮುಗ್ದರನ್ನಾಗಿಸಿತು.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.15): ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಇಂದು ಕಾಫಿ ತೋಟದ ಹಾದಿಯಲ್ಲಿ ಬೈಕ್ ರ್ಯಾಲಿ (Bike Rally) ನಡೆಯಿತು. ಚಿಕ್ಕಮಗಳೂರಿನ ಅಲ್ಲಂಪುರದ ಆಸು ಪಾಸಿನ ಕಾಫಿ ತೋಟದಲ್ಲಿ ಬೈಕ್ ಸವಾರರು ಮೋಟಾರ್ ಬೈಕ್‌ಗಳ (Motor Bikes) ರ್ರೂಂ.. ರ್ರೂಂ... ಕಲರವ ರ್ಯಾಲಿ ಪ್ರಿಯರನ್ನು ಮಂತ್ರ ಮುಗ್ದರನ್ನಾಗಿಸಿತು.

Latest Videos

ಕಾಫಿ ತೋಟದ ಹಾದಿಯಲ್ಲಿ ಸಾಗಿದ ಬೈಕ್ ರ್ಯಾಲಿ: ದಿ ಮೋಟಾರ್ ಸ್ಫೋರ್ಟ್ಸ್ ಆಫ್ ಚಿಕ್ಕಮಗಳೂರು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಎಂಆರ್‌ಎಫ್ ಮೋಗ್ರಿಪ್ ನ್ಯಾಷನಲ್ ರ್ಯಾಲಿ ಚಾಂಪಿಯನ್‌ಶಿಪ್-2 ಡಬ್ಲ್ಯುನ ಮೊದಲನೇ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳು ಹಚ್ಚ ಹಸುರಿನ ತೋಟದ ನಡುವಿನ ಕಚ್ಛಾ ರಸ್ತೆಯನ್ನು ಶರವೇಗದಲ್ಲಿ ಸೀಳಿಕೊಂಡು ಮುನ್ನುಗ್ಗಿ ರೋಮಾಂಚನಗೊಳಿಸಿದರು. ಏರು ತಿಟ್ಟಿನ ಸವಾಲಿನ ಮಾರ್ಗವನ್ನು ಕಣ್ಣು ಮಿಟುಕಿ ಬಿಡುವುದರೊಳಗಾಗಿ ದಾಟುತ್ತಿದ್ದ ಸವಾರರ ಚಾಕಚಕ್ಯತೆಯನ್ನು ಕಂಡು ಪ್ರೇಕ್ಷಕರು ಬೆರಗಾದರು. 

ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೇಕಾಬಿಟ್ಟಿ ದಾಂಧಲೆ: ಆನೆಗಳ ಭಯಕ್ಕೆ ತೋಟದ ಕಡೆ ತೆರಳದ ಕಾರ್ಮಿಕರು

ಸ್ಪರ್ಧಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚಲೆಂದೇ ಸಿದ್ಧಪಡಿಸಿದ ವಿಶೇಷ ಸ್ಟೇಜ್‌ಗಳಲ್ಲಿ ಸಿನಿಮೀಯ ರೀತಿಯಲ್ಲಿ ಬೈಕ್‌ಗಳನ್ನು ನೂರಾರು ಮೀಟರ್ ದೂರಕ್ಕೆ ಜಿಗಿಸಿ ಮಿಂಚಿ ಮರೆಯಾಗುತ್ತಿದ್ದ ಸವಾರರು ಪರಸ್ಪರ ತೀವ್ರ ಪೈಪೋಟಿ ನೀಡಿದರು. ಅಲ್ಲಂಪುರದ ಸೆವೆನ್ ಇವನ್ ರೆಸಾರ್ಟ್‌ನಿಂದ ಇಂದು ಬೆಳಗ್ಗೆ ಹೊರಟ ಸ್ಪರ್ಧಿಗಳು ಹತ್ತಿರದ ವಸಂತ್ ಕೂಲ್ ಎಸ್ಟೇಟ್‌ನಿಂದ ರ್ಯಾಲಿ ಆರಂಭಿಸಿದರು. ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಹಸಿರಿನಿಂದ ನಳನಳಿಸುತ್ತಿರುವ ಕಾಫಿ ತೋಟದ ನಡುವೆ ಹಾದು ಹೋದ ಕಡಿದಾದ ಕಚ್ಛಾ ರಸ್ತೆಯಲ್ಲಿ ಪ್ರತಿ ಸ್ಪರ್ಧಿಗಳು 138 ಕಿ.ಮೀ. ದೂರವನ್ನು ಕ್ರಮಿಸಿದರು. ಒಟ್ಟು 8 ಸ್ಟೇಜ್‌ಗಳ ಪೈಕಿ 29 ಕಿ.ಮೀ. ಮಾರ್ಗವನ್ನು ಸ್ಪೆಷಲ್ ಸ್ಟೇಜ್ ಎಂದು ಪರಿಗಣಿಸಲಾಗಿತ್ತು. ಈ ಮಾರ್ಗದಲ್ಲಿ ಸವಾರರು ಹಲವು ಸವಾಲುಗಳನ್ನು ದಾಟಿ ಗುರಿಯತ್ತ ಮುನ್ನುಗಿದ್ದರು.

ಬೈಕ್ ರ್ಯಾಲಿಯಲ್ಲಿ ಮಹಿಳೆ ಸವಾರರ ಕಮಾಲ್: ಬೈಕ್ ರ್ಯಾಲಿಯಲ್ಲಿ ಎಮ್‌ಆರ್‌ಎಫ್ , ಸುಜ್ಹಕಿ, ಹೀರೋ, ಯಮಹಾ ಕಂಪನಿಯ ಬೈಕ್ಗಳು ಅಖಾಡದಲ್ಲಿ ಇದ್ದವು. ಒಟ್ಟು 9 ವಿವಿಧ ವಿಭಾಗಗಳಲ್ಲಿ ರ್ಯಾಲಿ ನಡೆಯಿತು. ಸೂಪರ್ ಬೈಕ್ ಪ್ರೋ ಎಕ್ಸ್ಪರ್ಟ್, ಸೂಪರ್ ಬೈಕ್ ಎಕ್ಸ್ಪರ್ಟ್, ಸೂಪರ್ ಸ್ಫೋರ್ಟ್‌ನಲ್ಲಿ 5 ವಿವಿಧ ವಿಭಾಗಗಳು ಹಾಗೂ ಲೇಡೀಸ್ ಕ್ಲಾಸ್ ವಿಭಾಗಗಳಿದ್ದವು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಒಟ್ಟು 13 ಮಹಿಳಾ ಬೈಕ್ ರೈಡ್ಸ್ ಭಾಗವಹಿಸಿ ಗಮನ ಸೆಳೆದರು. ಪುರುಷ ಸವಾರರ ಪೈಕಿ ಶಿವಮೊಗ್ಗ ಟಿವಿಎಸ್ ರೇಸಿಂಗ್‌ನ ಆರ್.ಇ.ರಾಜೇಂದ್ರ, ಬೆಂಗಳೂರಿನ ಆರ್.ನಟರಾಜ್, ಮೈಸೂರಿನ ಅಬ್ದುಲ್ ತನ್ವೀರ್, ಹೀರೋ ರೇಸಿಂಗ್ನ ಯುವರಾಜ್ ಮತ್ತು ಸತ್ಯರಾಜ್, ಬೆಂಗಳೂರಿನ ನರೇನ್, ಸಚಿನ್, ಕೊಯಮತ್ತೂರಿನ ವೇಣು ರಮೇಶ್ ಕುಮಾರ್, ತಮಿಳುನಾಡಿನ ಶರತ್ ಮೋಹನ್, ಜಾವಾ ರೇಸಿಂಗ್‌ನ ಹೇಮಂತ್‌ಗೌಡ ಮತ್ತು ಭರತ್  ತೀವ್ರ ಪೈಪೋಟಿ ನೀಡಿದರು. 

Chikkamagaluru: ಕಾಫಿನಾಡಿನಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಆಟೋ ಕ್ರಾಸ್ ರ್ಯಾಲಿ

ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ಟಿವಿಎಸ್ ರೇಸಿಂಗ್ನ ಐಶ್ವರ್ಯ ಪಿಚ್ಚೈ, ಸತಾರದ ತನಿಕ ಶ್ಯಾನಭಾಗ್, ಮಂಗಳೂರಿನ ಬಿ.ಅಪೂರ್ವ, ತಮಿಳುನಾಡಿನ ರಿಹಾನಾ, ತ್ರಿಶೂರ್ನ ಸಿ.ಸಿ.ಸ್ನೇಹಾ ಹಾಗೂ ಪುಣೆಯ ಅನಮ್ ಹಶೀಮ್ ಭಾಗವಹಿಸಿದರು. ಚಿಕ್ಕಮಗಳೂರು ಜಿಲ್ಲೆಯಿಂದ ಅಸದ್ ಖಾನ್, ದಿಲೀಪ್ ರಾಜ್, ಫ್ರಾನ್ಸಿಸ್, ಶ್ರೀಕಾಂತ್ ಮೊದಲಾ, ಸ್ಕೂಟರ್ ಕ್ಲಾಸ್‌ನಲ್ಲಿ ಕಾರ್ತಿಕ್, ಶಮಿನ್ ಖಾನ್, ಸುಬ್ರಮಣ್ಯ, ಆದಿಲ್, ಪ್ರಭಾಕರನ್ ಸ್ಪರ್ಧಿಸಿದರು. ರ್ಯಾಲಿಯ ಮುಂದಿನ ಸುತ್ತುಗಳು ಮೇ. 22 ರಂದು ಮಂಗಳೂರು, ಜುಲೈ 17 ರಂದು ಕೊಯಂಬತ್ತೂರು, ಆಗಸ್ಟ್ 14ರಂದು ಬೆಂಗಳೂರು, ಡಿಸೆಂಬರ್ 4 ರಂದು ಪುಣೆ ಹಾಗೂ ಡಿಸೆಂಬರ್ 18 ರಂದು ನಾಸಿಕ್‌ನಲ್ಲಿ ನಡೆಯಲಿದೆ. ದಿ ಮೋಟಾರ್ ಸ್ಫೋರ್ಟ್ಸ್‌ ಕ್ಲಬ್ ಚಿಕ್ಕಮಗಳೂರುನ ಅಧ್ಯಕ್ಷ ಜಯಂತ್ ಪೈ, ಕಾರ್ಯದರ್ಶಿ ಅಭಿಜಿತ್ ಪೈ, ಸದಸ್ಯರುಗಳಾದ ಸಂಮೃದ್ಧ್ ಪೈ, ರ್ಯಾಲಿ ಸಂಯೋಜಕರುಗಳಾದ ದಿಲೀಪ್ ಜೈನ್, ಗಾಲ್ಫ್ ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ್ ಇತರರು ಇದ್ದರು.

click me!