Bhatkal: ಮುರಿನ್‌ಕಟ್ಟೆ ಧ್ವಂಸ ಪ್ರಕರಣ, ಹಿಂದೂ ಸಂಘಟನೆಗಳಿಂದ ನಾಳೆ ಭಟ್ಕಳ ಬಂದ್‌

Published : Jun 04, 2026, 08:53 PM IST
Bhatkal Murin Katte

ಸಾರಾಂಶ

ಭಟ್ಕಳದ ಐತಿಹಾಸಿಕ ಮುರಿನಕಟ್ಟೆ ಧ್ವಂಸ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ಶುಕ್ರವಾರ ಬಂದ್‌ಗೆ ಕರೆ ನೀಡಿವೆ. ಬೃಹತ್ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಮದ್ಯ ಮಾರಾಟ ನಿಷೇಧಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.

ಕಾರವಾರ/ಭಟ್ಕಳ (ಜೂ.4): ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಐತಿಹಾಸಿಕ ಮುರಿನಕಟ್ಟೆ ಧ್ವಂಸ ಪ್ರಕರಣದ ವಿವಾದ ದಿನದಿಂದ ದಿನಕ್ಕೆ ದೊಡ್ಡ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ನಾಳೆ (ಶುಕ್ರವಾರ) ಭಟ್ಕಳ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹಿಂದೂ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಭಟ್ಕಳದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸ್ಥಳೀಯ ಆಟೋ ಚಾಲಕರು ಹಾಗೂ ವರ್ತಕರು (ಅಂಗಡಿ ಮಾಲೀಕರು) ಬಂದ್‌ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದು, ನಾಳೆ ದಿನವಿಡೀ ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಬಂದ್ ಯಶಸ್ವಿಗೊಳಿಸಲು ಹಿಂದೂ ಕಾರ್ಯಕರ್ತರು ಭಟ್ಕಳದ ಹಳ್ಳಿ ಹಳ್ಳಿಗಳಲ್ಲಿ ಈಗಾಗಲೇ ಸರಣಿ ಸಭೆಗಳನ್ನು ನಡೆಸಿ ಸಾರ್ವಜನಿಕರ ಬೆಂಬಲ ಕೋರಿದ್ದಾರೆ.

ಮಧ್ಯಾಹ್ನ 3ಕ್ಕೆ ಬೃಹತ್ ಪ್ರತಿಭಟನೆ: 10 ಸಾವಿರ ಜನ ಸೇರುವ ಸಾಧ್ಯತೆ

ಕಳೆದ ವಾರವಷ್ಟೇ ಭಾರತೀಯ ಜನತಾ ಪಾರ್ಟಿ (BJP) ನಡೆಸಿದ್ದ ಪ್ರತಿಭಟನೆಗಿಂತಲೂ ಮಿಗಿಲಾದ ಬೃಹತ್ ಜನಾಕ್ರೋಶ ಪ್ರದರ್ಶನಕ್ಕೆ ಹಿಂದೂ ಸಂಘಟನೆಗಳು ಮಾಸ್ಟರ್ ಪ್ಲಾನ್ ರೂಪಿಸಿವೆ. ನಾಳೆ ಮಧ್ಯಾಹ್ನ 3 ಗಂಟೆಗೆ ಭಟ್ಕಳ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಲಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಜನಸ್ತೋಮ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು

ಮುರಿನಕಟ್ಟೆ ಧ್ವಂಸ ಪ್ರಕರಣದ ಬಳಿಕ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿರುವ ಎಲ್ಲಾ 'ಸುಳ್ಳು ಮೊಕದ್ದಮೆಗಳನ್ನು' ತಕ್ಷಣವೇ ಹಿಂಪಡೆಯಬೇಕು. ಭಟ್ಕಳ ಭಾಗದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ದಮನಕಾರಿ ನೀತಿಗಳು ಮರುಕಳಿಸದಂತೆ ಸೂಕ್ತ ರಕ್ಷಣೆ ನೀಡಬೇಕು ಎನ್ನುವ ಬೇಡಿಕೆ ಇಡಲಾಗಿದೆ.

ಡಿಸಿ ಲಕ್ಷ್ಮಿ ಪ್ರಿಯಾ ಆದೇಶ: ಹದ್ದಿನ ಕಣ್ಣಿಟ್ಟ ಪೊಲೀಸ್ ಪಡೆ

ಭಟ್ಕಳ ಬಂದ್ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ನಾಳೆ ಭಟ್ಕಳ ತಾಲೂಕಿನಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಪರಿಸ್ಥಿತಿ ಕೈಮೀರದಂತೆ ತಡೆಯಲು ಭಟ್ಕಳದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಪೊಲೀಸರೊಂದಿಗೆ ಹೆಚ್ಚುವರಿ ಪೊಲೀಸ್ ಪಡೆ ಹಾಗೂ ವಿಶೇಷ ಪೊಲೀಸ್ ತುಕಡಿಗಳನ್ನು (KSRP/DAR) ಸೂಕ್ಷ್ಮ ಪ್ರದೇಶಗಳಲ್ಲಿ ಮೊಕ್ಕಾಂ ಹೂಡುವಂತೆ ಮಾಡಲಾಗಿದ್ದು, ಇಡೀ ಭಟ್ಕಳ ಸದ್ಯ ಪೊಲೀಸರ ಹದ್ದಿನ ಕಣ್ಣಿನ ಕಾವಲಿನಲ್ಲಿದೆ.

 

PREV
Read more Articles on
click me!

Recommended Stories

ಮನೆಗೆ ಆಸರೆಯಾಗಿದ್ದ ಗಂಡನ ಸಾವಾಗಿ ಒಂದು ತಿಂಗಳು; ಕೂಲಿ ಮಾಡಿ ಸಾಕಲಾಗದೆ ತಾಯಿಯೇ ಎರಡೂ ಕಂದಮ್ಮಗಳನ್ನ ಕೊಂದಳು!
ತುಮಕೂರಿನಲ್ಲಿ ಇನ್ನೋವಾ-ಓಮ್ನಿ ಮುಖಾಮುಖಿ ಡಿಕ್ಕಿ: ಟೆಕ್ಕಿ ರವಿ ಕುಟುಂಬದ ಮೂವರು ಸ್ಥಳದಲ್ಲೇ ದುರ್ಮರಣ!