
ಬೆಂಗಳೂರು (ಮಾ.29): ಮಿನರ್ವ ವೃತ್ತದಿಂದ (Minerva Circle) ಹಡ್ಸನ್ ವೃತ್ತದವರೆಗಿನ (Hudson Circle) ಸ್ಟೀಲ್ ಬ್ರಿಡ್ಜ್ ಯೋಜನೆ ನೆನೆಗುದಿಗೆ ಬಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ಇದೀಗ ಮತ್ತೊಂದು ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಿನರ್ವ ವೃತ್ತ, ರವೀಂದ್ರ ಕಲಾಕ್ಷೇತ್ರ, ಪುಟ್ಟಣ್ಣಚೆಟ್ಟಿಪುರಭವನ (ಟೌನ್ಹಾಲ್), ಎಲ್ಐಸಿ ಕಚೇರಿ, ಹಲಸೂರು ಗೇಟ್ ಪೊಲೀಸ್ ಠಾಣೆ, ಹಡ್ಸನ್ ವೃತ್ತದಲ್ಲಿ ಉಂಟಾಗುತ್ತಿರುವ ಸಂಚಾರಿ ದಟ್ಟಣೆ ತಪ್ಪಿಸುವ ಹಿನ್ನೆಲೆಯಲ್ಲಿ 2018ರಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಮುಂದಾಗಿತ್ತು.
ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿತ್ತು. ಇದೀಗ ಪರ್ಯಾಯವಾಗಿ ಮತ್ತೊಂದು ಯೋಜನೆ ಸಿದ್ಧಪಡಿಸುವುದಕ್ಕೆ ಮುಂದಾಗಿರುವ ಬಿಬಿಎಂಪಿ ಪ್ರಸಕ್ತ ಆಯವ್ಯಯದಲ್ಲಿ ಘೋಷಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ನವನಗರೋತ್ಥಾನ ಅನುದಾನದಡಿ 200-250 ಕೋಟಿ ರು. ವೆಚ್ಚದಲ್ಲಿ ಮೇಲ್ಸೇತುವೆ ಯೋಜನೆ ಅನುಷ್ಠಾನಗೊಳಿಸುವ ಕುರಿತು ಈಗಾಗಲೇ ನಗರದ ಶಾಸಕರೊಂದಿಗೆ ಚರ್ಚೆ ನಡೆಸಲಾಗಿದೆ. ಜೆ.ಸಿ.ರಸ್ತೆಯಿಂದ ಕಸ್ತೂರಿ ಬಾ ರಸ್ತೆವರೆಗೆ ಒಟ್ಟು 1.7 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ.
Bengaluru: ಈಜಿಪುರ ಫ್ಲೈಓವರ್ ಗುತ್ತಿಗೆದಾರರ ವಿರುದ್ಧ ಕೇಸ್ ದಾಖಲಿಸಿ: ಹೈಕೋರ್ಟ್
ವಾಹನ ಸವಾರರು ಮಿನರ್ವ ವೃತ್ತ, ರವೀಂದ್ರ ಕಲಾಕ್ಷೇತ್ರ, ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ಹಾಲ್), ಎಲ್ಐಸಿ ಕಚೇರಿ, ಹಲಸೂರು ಗೇಟ್ ಪೊಲೀಸ್ ಠಾಣೆ, ಹಡ್ಸನ್ ವೃತ್ತ ಹಾಗೂ ಕಾರ್ಪೋರೇಷನ್ ವೃತ್ತ ಸೇರಿ ಒಟ್ಟು 7 ಟ್ರಾಫಿಕ್ ಸಿಗ್ನಲ್ಗಳು ತಪ್ಪಲಿವೆ. ಕೇವಲ 2-5 ನಿಮಿಷದಲ್ಲಿ ಮಿನರ್ವ ವೃತ್ತದಿಂದ ಕೆ.ಜಿ. ರಸ್ತೆ ಅಥವಾ ಕಸ್ತೂರಿಬಾ ಗಾಂಧಿ ರಸ್ತೆಗೆ ಹೋಗಬಹುದಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೆ.ಸಿ.ರಸ್ತೆಯಲ್ಲಿ ವಾಹನ ದಟ್ಟಣೆ ಹಾಗೂ ಅಪಘಾತ ಪ್ರಕರಣ ತಗ್ಗಿಸಲು ಮೇಲ್ಸೇತುವೆ ನಿರ್ಮಾಣದ ಬಗ್ಗೆ ಪಾಲಿಕೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಯೋಜನೆಯಿಂದ ವಾಹನ ಸವಾರರಿಗೆ ಜಂಕ್ಷನ್ಗಳು ಸಿಗ್ನಲ್ ಫ್ರೀ ಆಗಲಿವೆ. ಸರ್ಕಾರದಿಂದ ಯೋಜನೆಗೆ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ.
- ಎಂ. ಲೋಕೇಶ್, ಮುಖ್ಯ ಎಂಜಿನಿಯರ್ ಬಿಬಿಎಂಪಿ ನಗರ ಯೋಜನೆ ವಿಭಾಗ
ಕರ್ನಾಟಕದಲ್ಲಿ 60 ಕಿ.ಮೀ. ಒಳಗೆ 28 ಟೋಲ್ ಬೂತ್: ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀ. ಅಂತರದೊಳಗಿರುವ ಹೆಚ್ಚುವರಿ ಟೋಲ್ಗಳನ್ನು (Toll) ಮುಂದಿನ ಮೂರು ತಿಂಗಳೊಳಗಾಗಿ ಮುಚ್ಚಲಾಗುವುದೆಂಬ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿಕೆ ಕಾರ್ಯರೂಪಕ್ಕೆ ಬಂದರೆ, ರಾಜ್ಯದಲ್ಲೂ ಹಲವು ಟೋಲ್ಗೇಟ್ಗಳು ಸ್ಥಗಿತ ಅಥವಾ ವಿಲೀನಗೊಳ್ಳುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಹಾದುಹೋಗುವ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) 28 ಟೋಲ್ಗಳ ನಡುವಿನ ಅಂತರ 60 ಕಿ.ಮೀ.ಗಳಿಗಿಂತ ಕಡಿಮೆ ಇದೆ.
Namma Bengaluru: ಮಾನ್ಯತಾ ಬಳಿ ತ್ರಿಪಥ ಮೇತುವೆ ಲೋಕಾರ್ಪಣೆ, ಹೇಗಿದೆ?
ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ 4, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ತಲಾ 3, ಬೆಂಗಳೂರು, ತುಮಕೂರು, ಗದಗ, ಉಡುಪಿ, ತುಮಕೂರು, ಹಾಸನ, ಮೈಸೂರು, ಕಲಬುರಗಿಗಳಲ್ಲಿ ತಲಾ 2, ಹಾವೇರಿ, ದಾವಣಗೆರೆ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ತಲಾ 1 ಟೋಲ್ಗಳು 60 ಕಿ.ಮೀ. ವ್ಯಾಪ್ತಿಯೊಳಗಿವೆ. ರಾಜ್ಯ ರಾಜಧಾನಿ ಬೆಂಗಳೂರು(Bengaluru) ಮತ್ತು ಪಕ್ಕದ ತುಮಕೂರು ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನವಯುಗ-ನೆಲಮಂಗಲ-ಕ್ಯಾತ್ಸಂದ್ರ-ತರೂರು ಟೋಲ್ಗೇಟ್ಗಳಲ್ಲಿ ಎಲ್ಲ ಟೋಲ್ಗೇಟ್ಗಳ ನಡುವಿನ ಅಂತರ 60 ಕಿ.ಮೀ.ಗಳಿಗಿಂತ ಕಡಿಮೆಯೇ ಇದೆ. ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಮತ್ತು ಟಿ.ನರಸೀಪುರ ಟೋಲ್ಗೇಟ್ಗಳ ನಡುವಿನ ಅಂತರ ಕೇವಲ 41 ಕಿ.ಮೀ. ಗಡ್ಕರಿ ಮಾತಿನಂತೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾದರೆ ಇವುಗಳಲ್ಲಿ ಕೆಲ ಟೋಲ್ಗಳು ವಿಲೀನ ಅಥವಾ ಮುಚ್ಚುವ ನಿರೀಕ್ಷೆಗಳಿವೆ.