
ಬೆಂಗಳೂರು (ಮೇ 29): ಬೆಂಗಳೂರಿನ ಹೃದಯಭಾಗದಲ್ಲಿರುವ ಸರ್ಕಾರಿ ಆಸ್ತಿಗಳಿಗೂ ಈಗ ರಕ್ಷಣೆಯಿಲ್ಲದಂತಾಗಿದೆ. ಸಾರ್ವಜನಿಕರ ಆಸ್ತಿಯನ್ನು ಕಾಯಬೇಕಾದ ವ್ಯವಸ್ಥೆಯ ಕಣ್ಣೆದುರೇ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ 'ಮೈಸೂರು ಡಿಸ್ಚಾರ್ಜ್ಡ್ ಪ್ರಿಸನರ್ಸ್ ಏಡ್ ಸೊಸೈಟಿ'ಗೆ (Mysore Discharged Prisoners' Aid Society) ಸೇರಿದ ಆಸ್ತಿಯ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಈ ಆಸ್ತಿಯು ನೇರವಾಗಿ ಕಾರಾಗೃಹ ಇಲಾಖೆಯ ಅಧೀನಕ್ಕೆ ಒಳಪಡುತ್ತದೆ. ಆದರೆ, ಕಳೆದ ಒಂದು ವರ್ಷದಿಂದ ಈ ಅಮೂಲ್ಯವಾದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಾನೂನುಬಾಹಿರವಾಗಿ ತಮ್ಮ ವಶಕ್ಕೆ ಪಡೆದುಕೊಂಡು ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ಆಸ್ತಿ ಅತಿಕ್ರಮಣ ಪ್ರಕರಣದಲ್ಲಿ ಮುಖ್ಯವಾಗಿ ಇಬ್ಬರ ಹೆಸರು ಕೇಳಿಬಂದಿದೆ. ಅನಿಲ್ ಎಂಬ ವಕೀಲರು ಹಾಗೂ ಖಲಿಂ ಎಂಬ ವ್ಯಕ್ತಿ ಈ ಜಾಗವನ್ನು ಕಬ್ಜ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಕೀಲ ಅನಿಲ್ ಅವರು ಯಾವುದೇ ಅನುಮತಿ ಪಡೆಯದೇ ಕಟ್ಟಡದ ಮೊದಲ ಮಹಡಿಯನ್ನು ಅತಿಕ್ರಮಣ ಮಾಡಿಕೊಂಡಿದ್ದರೆ, ಖಲಿಂ ಎಂಬ ವ್ಯಕ್ತಿ ಹಳೆಯ ಸಾಮಗ್ರಿಗಳನ್ನು (Scrap materials) ತಂದು ಹಾಕಿ ಇಡೀ ಆವರಣವನ್ನು ತನ್ನ ಸ್ವಂತ ಸೊತ್ತಿನಂತೆ ಬಳಸಿಕೊಳ್ಳುತ್ತಿದ್ದಾನೆ ಎಂಬ ದೂರು ಕೇಳಿಬಂದಿದೆ.
ಈ ಸಂಬಂಧ ಶ್ರೀಶೈಲ್ ಎಸ್. ಮೇಟಿ ಎಂಬುವವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀನದಲ್ಲಿರುವ ಸ್ವತ್ತನ್ನು ಅಕ್ರಮವಾಗಿ ಪ್ರವೇಶಿಸಿ, ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ವಿನಂತಿಸಲಾಗಿದೆ.
ದೂರನ್ನು ಗಂಭೀರವಾಗಿ ಪರಿಗಣಿಸಿರುವ ಉಪ್ಪಾರಪೇಟೆ ಪೊಲೀಸರು, ಆರೋಪಿಗಳಾದ ಅನಿಲ್ ಮತ್ತು ಖಲಿಂ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸರ್ಕಾರಿ ಆಸ್ತಿಯನ್ನು ಅತಿಕ್ರಮಣ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಗರದ ಪ್ರಮುಖ ಜಾಗದಲ್ಲಿರುವ ಇಲಾಖೆಯ ಆಸ್ತಿಗೆ ಅತಿಕ್ರಮಣದಾರರು ಲಗ್ಗೆ ಇಟ್ಟಿದ್ದರೂ, ಇಲಾಖೆಯ ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಕೋಟಿ ಕೋಟಿ ಬೆಲೆಬಾಳುವ ಈ ಜಾಗವನ್ನು ಖಾಸಗಿ ವ್ಯಕ್ತಿಗಳ ಕೈಯಿಂದ ಮುಕ್ತಗೊಳಿಸಿ, ಸರ್ಕಾರದ ವಶಕ್ಕೆ ಪಡೆಯಲು ಕಾರಾಗೃಹ ಇಲಾಖೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.