ಬೆಂಗಳೂರು: ಹಳೇ ಲವ್ವರ್ ಜೊತೆ ಓಡಾಡಿದ್ದಕ್ಕೆ ಹೊಸ ಪ್ರೇಮಿಯಿಂದ ಗ್ಯಾಂಗ್ ಅಟ್ಯಾಕ್!

Published : May 29, 2026, 12:03 PM IST
Bengaluru Shantinagar gang attack

ಸಾರಾಂಶ

ಬೆಂಗಳೂರಿನ ಶಾಂತಿನಗರದಲ್ಲಿ ಕಾರು ಚಾಲಕನ ಮೇಲೆ ನಡೆದ ಗ್ಯಾಂಗ್ ಹಲ್ಲೆ ಪ್ರಕರಣವು ಪ್ರೇಮ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ತನ್ನ ಪ್ರೇಯಸಿ, ಆಕೆಯ ಮಾಜಿ ಪ್ರೇಮಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದನ್ನು ಸಹಿಸದ ಹಾಲಿ ಪ್ರೇಮಿ, ತನ್ನ ಸ್ನೇಹಿತರೊಂದಿಗೆ ಸೇರಿ ಈ ದಾಳಿ ನಡೆಸಿದ್ದಾನೆ. ವೈರಲ್ ಆದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಶಾಂತಿನಗರದಲ್ಲಿ ಇತ್ತೀಚೆಗೆ ಕಾರು ಚಾಲಕನ ಮೇಲೆ ನಡೆದಿದ್ದ ಭೀಕರ ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಈಗ ರೋಚಕ ಪ್ರೇಮ ಕಥೆಯ ಟ್ವಿಸ್ಟ್ ಸಿಕ್ಕಿದೆ. ಯುವತಿಯೊಬ್ಬಳು ತನ್ನ ಮಾಜಿ ಪ್ರೇಮಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದನ್ನು ಸಹಿಸದ ಆಕೆಯ ಹಾಲಿ ಪ್ರೇಮಿ, ತನ್ನ ಪಟಾಲಂನೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ವಿಲ್ಸನ್ ಗಾರ್ಡನ್ ಪೊಲೀಸರು, ಸದ್ಯ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಸಿಟಿವಿ ವೈರಲ್ ಬೆನ್ನಲ್ಲೇ ತನಿಖೆ ಚುರುಕು

ಕಳೆದ ಮೇ 22ರಂದು ಮುಂಜಾನೆ ಶಾಂತಿನಗರದ ಮುಖ್ಯರಸ್ತೆಯೊಂದರಲ್ಲಿ ಈ ಗ್ಯಾಂಗ್ ನಿಂದ ಗೂಂಡಾಗಿರಿ ನಡೆದಿತ್ತು. ಸಾರ್ವಜನಿಕ ರಸ್ತೆಯಲ್ಲೇ ಸುಮಾರು 6 ರಿಂದ 7 ಜನರ ಗ್ಯಾಂಗ್‌ ಪ್ರಾಣಹಾನಿ ಮಾಡುವ ಉದ್ದೇಶದಿಂದ ಕಾರಿನಲ್ಲಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿ ಮನಬಂದಂತೆ ಥಳಿಸಿತ್ತು. ಈ ಹಲ್ಲೆಯ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು.

ತನಿಖೆಯಲ್ಲಿ ಹೊರಬಂತು ಇಬ್ಬರ 'ಲವ್ ಕಹಾನಿ'!

ಪೊಲೀಸರು ಹಲ್ಲೆಗೊಳಗಾದ ಚಾಲಕ ಅರ್ಫಾನ್‌ನನ್ನು ವಿಚಾರಣೆ ಒಳಪಡಿಸಿದಾಗ ಮತ್ತು ಸಿಸಿಟಿವಿ ಮೂಲಗಳನ್ನು ಜಾಲಾಡಿದಾಗ ಇದರ ಹಿಂದಿನ ಅಸಲಿ ಪ್ರೇಮ ಪುರಾಣ ಬಯಲಾಗಿದೆ. ಹಲ್ಲೆಗೊಳಗಾದ ಅರ್ಫಾನ್ ಎಂಬ ಯುವಕ ಈ ಹಿಂದೆ ಯುವತಿಯೊಬ್ಬಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು. ಅರ್ಫಾನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ನಂತರ ಆ ಯುವತಿ ಮಂಜು ಎಂಬಾತನೊಂದಿಗೆ ಹೊಸದಾಗಿ ಪ್ರೇಮಪಾಶದಲ್ಲಿ ಬಿದ್ದಿದ್ದಳು. ಸದ್ಯ ಇವರಿಬ್ಬರ ಲವ್ವಿ-ಡವ್ವಿ ಜೋರಾಗಿಯೇ ನಡೆದಿತ್ತು. ಆದರೆ, ಇತ್ತೀಚೆಗೆ ಹಾಲಿ ಪ್ರೇಮಿ ಮಂಜುಗೆ ಗೊತ್ತಿಲ್ಲದಂತೆ ಯುವತಿಯು ತನ್ನ ಹಳೇ ಲವ್ವರ್ ಅರ್ಫಾನ್‌ನನ್ನು ಮತ್ತೆ ಭೇಟಿಯಾಗಲು ಶುರು ಮಾಡಿದ್ದಳು. ಮೇ 22ರ ಮುಂಜಾನೆ ಯುವತಿ ಹಾಗೂ ಅರ್ಫಾನ್ ಇಬ್ಬರೂ ಶಾಂತಿನಗರದ ಬಳಿ ಕಾರಿನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು.

ಪಟಾಲಂ ಕರೆತಂದು ಅಟ್ಯಾಕ್ ಮಾಡಿದ ಹಾಲಿ ಪ್ರೇಮಿ!

ತನ್ನ ಗರ್ಲ್‌ಫ್ರೆಂಡ್ ತನಗೆ ತಿಳಿಸದೆ ಮಾಜಿ ಪ್ರೇಮಿ ಅರ್ಫಾನ್ ಜೊತೆ ಕಾರಿನಲ್ಲಿ ಸುತ್ತಾಡುತ್ತಿರುವ ವಿಷಯ ಹೇಗೋ ಮಂಜುಗೆ ತಿಳಿದಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಮಂಜು, ಅರ್ಫಾನ್‌ಗೆ ಬುದ್ಧಿ ಕಲಿಸಲು ನಿರ್ಧರಿಸಿ ತನ್ನ ರೌಡಿ ಪಟಾಲಂ ಅನ್ನು ಕರೆದುಕೊಂಡು ಸ್ಥಳಕ್ಕೆ ಧಾವಿಸಿದ್ದಾನೆ. ಶಾಂತಿನಗರದ ಬಳಿ ಅರ್ಫಾನ್ ಚಲಾಯಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ 6 ರಿಂದ 7 ಜನರ ಮಂಜು ಗ್ಯಾಂಗ್, ಅರ್ಫಾನ್‌ನನ್ನು ಕಾರಿನಿಂದ ಕೆಳಕ್ಕೆ ಎಳೆದು ರಸ್ತೆಯಲ್ಲೇ ಕ್ರೂರವಾಗಿ ಹಲ್ಲೆ ನಡೆಸಿದೆ.

ಓರ್ವನ ಬಂಧನ; ಕಾರು ಜಪ್ತಿ

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ವಿಲ್ಸನ್ ಗಾರ್ಡನ್ ಪೊಲೀಸರು, ಹಲ್ಲೆಕೋರರ ಗ್ಯಾಂಗ್‌ನಲ್ಲಿದ್ದ ಓರ್ವ ಆರೋಪಿಯನ್ನು ಈಗಾಗಲೇ ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೆ, ಅರ್ಫಾನ್ ಮೇಲೆ ದಾಳಿ ಮಾಡಲು ಮತ್ತು ಸ್ಥಳಕ್ಕೆ ಬರಲು ಹಲ್ಲೆಕೋರರು ಬಳಸಿದ್ದ ಕಾರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಐಪಿಸಿ/ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮಂಜು ಹಾಗೂ ಆತನ ಇನ್ನುಳಿದ ಪಟಾಲಂ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ನಗರದ ಹೃದಯಭಾಗದಲ್ಲಿ ಮುಂಜಾನೆ ಹೊತ್ತಿನಲ್ಲೇ ನಡೆದ ಈ ಗ್ಯಾಂಗ್ ಅಟ್ಯಾಕ್ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

PREV
Read more Articles on
click me!

Recommended Stories

Karnataka's Yuvan Nidhi: ಯುವ ನಿಧಿ ಅನುದಾನ ಗೃಹಲಕ್ಷ್ಮೀಗೆ ವರ್ಗಾವಣೆ? 3ತಿಂಗಳಿನಿಂದ ಪದವೀಧರರಿಗೆ ತಲುಪದ ನಿರುದ್ಯೋಗ ಭತ್ಯೆ!
ರಾಮನಗರಕ್ಕೆ 5ನೇ ಬಾರಿಮುಖ್ಯಮಂತ್ರಿ ಹುದ್ದೆ ಭಾಗ್ಯ? ಮೊದಲ ಐವರು ಯಾರು?