ಬೆಂಗಳೂರು ಕೂಲಿ ಕಾರ್ಮಿಕರು ವಾಸವಿದ್ದ ಶೆಡ್‌ನಲ್ಲಿ ಬೆಂಕಿ ಅವಘಢ; ಇಬ್ಬರು ಕಂದಮ್ಮಗಳು ಸಜೀವ ದಹನ!

Published : May 11, 2026, 06:42 PM IST
Benhaluru Shed fire two children death

ಸಾರಾಂಶ

ಬೆಂಗಳೂರಿನ ನಾರಾಯಣಪುರದಲ್ಲಿ ತಾತ್ಕಾಲಿಕ ಶೆಡ್‌ಗೆ ಬೆಂಕಿ ತಗುಲಿ ಇಬ್ಬರು ಮಕ್ಕಳು ಸಜೀವ ದಹನವಾದ ದಾರುಣ ಘಟನೆ ನಡೆದಿದೆ. ರಾಯಚೂರು ಮೂಲದ ಕೂಲಿ ಕಾರ್ಮಿಕರ ಮಕ್ಕಳಾದ ಅರ್ಜುನ್ ಮತ್ತು ಆಶಾ ಮೃತಪಟ್ಟಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಬೆಂಗಳೂರು (ಮೇ 11): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಎದೆಯೊಡೆಯುವಂತಹ ದುರಂತವೊಂದು ಸಂಭವಿಸಿದೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪುರದಲ್ಲಿ ವಾಸವಿದ್ದ ತಾತ್ಕಾಲಿಕ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಇಬ್ಬರು ಪುಟ್ಟ ಮಕ್ಕಳು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಮಕ್ಕಳ ದಾರುಣ ಅಂತ್ಯ:

ಈ ಭೀಕರ ಅಗ್ನಿ ಅವಘಡದಲ್ಲಿ ಐದು ವರ್ಷದ ಅರ್ಜುನ್ ಮತ್ತು ಮೂರು ವರ್ಷದ ಆಶಾ ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೂಲತಃ ರಾಯಚೂರು ಜಿಲ್ಲೆಯವರಾದ ಈ ಮಕ್ಕಳು, ಪೋಷಕರೊಂದಿಗೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಇಂದು ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಈ ಅವಘಡ ಸಂಭವಿಸಿದ್ದು, ಒಂದು ಮಗು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದರೆ, ಮತ್ತೊಂದು ಮಗು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದೆ.

ಘಟನೆಯ ಹಿನ್ನೆಲೆ:

ರಾಯಚೂರು ಮೂಲದ ದುರ್ಗಪ್ಪ ಮತ್ತು ಸಾವಿತ್ರಿ ದಂಪತಿ ಕಳೆದ ಆರು ತಿಂಗಳಿಂದ ನಾರಾಯಣಪುರದ ಈ ಶೆಡ್‌ಗಳಲ್ಲಿ ವಾಸವಾಗಿದ್ದರು. ಇವರು ಜೆಸಿಎಸ್ (JCS) ಎಂಬ ಕಂಪನಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವಾರದಿಂದ ಊರಿಗೆ ಹೋಗಿದ್ದ ದಂಪತಿ, ಇಂದು ಕೆಲಸಕ್ಕೆ ಹಾಜರಾಗಲು ಬೆಂಗಳೂರಿಗೆ ಮರಳಿದ್ದರು. ಪೋಷಕರು ಕೆಲಸಕ್ಕೆ ತೆರಳುವ ಮುನ್ನ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ನಿರ್ಧರಿಸಿದ್ದರು. ಆದರೆ, ಕೆಲಸ ಮಾಡುವ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಬರಬೇಡಿ ಎಂದು ಮೇಸ್ತ್ರಿ ಕಟ್ಟುನಿಟ್ಟಾಗಿ ಸೂಚಿಸಿದ್ದ ಹಿನ್ನೆಲೆಯಲ್ಲಿ, ತಾಯಿ ಸಾವಿತ್ರಿ ತನ್ನ ಇಬ್ಬರು ಮಕ್ಕಳನ್ನು ಅಜ್ಜಿಯ ಸುಪರ್ದಿಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು.

ಅಜ್ಜಿ ಹೊರಹೋದ ಕೆಲವೇ ನಿಮಿಷಗಳಲ್ಲಿ ನಡೆದ ವಿಧಿಯಾಟ:

ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮಕ್ಕಳು ಅಜ್ಜಿಯ ಜೊತೆ ಶೆಡ್‌ನಲ್ಲಿ ಆಟವಾಡುತ್ತಿದ್ದರು. ಅಜ್ಜಿ ಮಕ್ಕಳನ್ನು ಶೆಡ್‌ನಲ್ಲಿ ಬಿಟ್ಟು ಶೌಚಾಲಯಕ್ಕೆಂದು ಹೊರಗೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಇಡೀ ಶೆಡ್ ಬೆಂಕಿಯ ಕೆನ್ನಾಲಗೆಗೆ ತುತ್ತಾಗಿತ್ತು. ಒಳಗೆ ಸಿಲುಕಿದ್ದ ಮಕ್ಕಳು ಹೊರಬರಲಾರದೆ ಕಿರುಚಾಡಿದರೂ ಯಾರೂ ಸಹಾಯಕ್ಕೆ ಧಾವಿಸಲು ಸಾಧ್ಯವಾಗದಷ್ಟು ಬೆಂಕಿ ತೀವ್ರವಾಗಿತ್ತು.

ಪೊಲೀಸ್ ತಪಾಸಣೆ ಮತ್ತು ಶಾರ್ಟ್ ಸರ್ಕ್ಯೂಟ್ ಶಂಕೆ:

ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಶೆಡ್‌ನಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಡ ಕೂಲಿ ಕಾರ್ಮಿಕರ ಕನಸುಗಳು ಬೆಂಕಿಯಲ್ಲಿ ಬೂದಿಯಾಗಿದ್ದು, ರಾಯಚೂರಿನ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ದಾಖಲೆ, ವಾರ್ಷಿಕ ಆದಾಯ ₹167 ಕೋಟಿ ಮುಜರಾಯಿಯಲ್ಲೇ ನಂ.1 ಸ್ಥಾನ!
ಮೈ ಮೇಲೆ ಕತ್ತಿಯಿಂದ ಹೊಡೆದುಕೊಂಡು ರಕ್ತತರ್ಪಣೆ: ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು?