
ಬೆಂಗಳೂರು: ದೇಶ-ವಿದೇಶಗಳಲ್ಲಿ ಇತ್ತೀಚೆಗೆ ವಿಮಾನ ಅಪಘಾತಗಳ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ, ಪ್ರಯಾಣಿಕರ ಸುರಕ್ಷತೆ ಮತ್ತು ವಿಮಾನ ಕಾರ್ಯಾಚರಣೆಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಮಹತ್ವದ ತಂತ್ರಜ್ಞಾನಾಧಾರಿತ ಹೆಜ್ಜೆ ಇಟ್ಟಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಇದೀಗ ಅತ್ಯಾಧುನಿಕ ‘ಸ್ಮಾರ್ಟ್ ಏರ್ಸೈಡ್ ಸೇಫ್ಟಿ ಸಿಸ್ಟಂ’ ಅನ್ನು ಜಾರಿಗೆ ತಂದಿದ್ದು, ಇದು ವಿಮಾನ ನಿಲ್ದಾಣದ ಏರ್ಸೈಡ್ ಪ್ರದೇಶದ ಸುರಕ್ಷತೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಿದೆ.
ವಿಮಾನಗಳು ಟೇಕ್ಆಫ್ ಮತ್ತು ಲ್ಯಾಂಡಿಂಗ್ಗೆ ಸಿದ್ಧವಾಗುವ ಪ್ರದೇಶವೇ ಏರ್ಸೈಡ್. ಈ ಭಾಗ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕಾರಿಯಾಗಿರುವುದರಿಂದ, ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯ ಮೇಲೂ ನಿಖರ ನಿಗಾ ಅಗತ್ಯವಾಗುತ್ತದೆ. ವಿಶೇಷವಾಗಿ ವಿಮಾನಗಳು ಮತ್ತು ನೆಲದ ಮೇಲಿನ ವಾಹನಗಳು ಒಂದೇ ಸಮಯದಲ್ಲಿ ಸಂಚರಿಸುವ ‘ಕ್ರಾಸ್ ಸರ್ವಿಸ್ ರಸ್ತೆಗಳು’ ಹೆಚ್ಚಿನ ಎಚ್ಚರಿಕೆಗೆ ಒಳಪಟ್ಟಿರುತ್ತವೆ. ಇದುವರೆಗೆ ಈ ಮಾರ್ಗಗಳಲ್ಲಿನ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಮಾನವ ಹಸ್ತಕ್ಷೇಪದ ಮೂಲಕ ನಿರ್ವಹಿಸಲಾಗುತ್ತಿತ್ತು. ಸಿಗ್ನಲ್ಗಳನ್ನು ಸಿಬ್ಬಂದಿಯೇ ಕೈಯಾರೆ ನಿಯಂತ್ರಿಸುತ್ತಿದ್ದ ಕಾರಣ ಕೆಲವೊಮ್ಮೆ ಮಾನವ ಸಹಜ ತಪ್ಪುಗಳಿಂದ ಕಾರ್ಯಾಚರಣೆಯಲ್ಲಿ ವಿಳಂಬ ಅಥವಾ ಅಪಾಯದ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆ ಇತ್ತು.
ಈ ಸವಾಲುಗಳಿಗೆ ಪರಿಹಾರವಾಗಿ ಬಿಐಎಎಲ್ ಈಗ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸ್ಮಾರ್ಟ್ ಏರ್ಸೈಡ್ ಸುರಕ್ಷತಾ ವ್ಯವಸ್ಥೆಯನ್ನು ಪರಿಚಯಿಸಿದೆ. ಕಂಪ್ಯೂಟರ್ ವಿಷನ್ ತಂತ್ರಜ್ಞಾನವನ್ನು ಒಳಗೊಂಡಿರುವ ಈ ವ್ಯವಸ್ಥೆ, ಏರ್ಸೈಡ್ ಪ್ರದೇಶದಲ್ಲಿನ ವಾಹನಗಳ ಚಲನವಲನವನ್ನು ನಿಖರವಾಗಿ ಪತ್ತೆಹಚ್ಚಿ ವಿಶ್ಲೇಷಿಸುತ್ತದೆ. ಯಾವುದೇ ವಾಹನ ವೇಗ ಮೀರಿದರೆ, ನಿಯಮ ಉಲ್ಲಂಘಿಸಿದರೆ ಅಥವಾ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾದರೆ ತಕ್ಷಣವೇ ಸ್ವಯಂಚಾಲಿತ ಎಚ್ಚರಿಕೆ ನೀಡುತ್ತದೆ. ಜೊತೆಗೆ ಇಂಟೆಲಿಜೆಂಟ್ ಆಟೋಮೇಷನ್ ಮೂಲಕ ಸಂಚಾರ ಸೂಚನೆಗಳನ್ನು ಸ್ವಯಂ ಚಾಲಿತವಾಗಿ ನೀಡಲಾಗುತ್ತದೆ. ಇದರಿಂದ ಮಾನವ ತಪ್ಪುಗಳ ಸಾಧ್ಯತೆ ಕಡಿಮೆಯಾಗುವುದರ ಜೊತೆಗೆ ಕಾರ್ಯಾಚರಣೆಯ ದಕ್ಷತೆಯೂ ಹೆಚ್ಚಲಿದೆ.
ಹೊಸ ವ್ಯವಸ್ಥೆಯ ಮತ್ತೊಂದು ವಿಶೇಷತೆ ಎಂದರೆ, ಇದು ನೈಜ ಸಮಯದಲ್ಲಿ ಸಂಪೂರ್ಣ ಮೇಲ್ವಿಚಾರಣೆಯನ್ನು ನಡೆಸುತ್ತದೆ. ಏರ್ಸೈಡ್ನ ಪ್ರತಿಯೊಂದು ಚಟುವಟಿಕೆಯೂ ಕೇಂದ್ರೀಕೃತ ನಿಯಂತ್ರಣ ಕೇಂದ್ರದ ಮೂಲಕ ಡಿಜಿಟಲ್ ರೂಪದಲ್ಲಿ ದಾಖಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ದತ್ತಾಂಶ ಆಧಾರಿತ ವಿಶ್ಲೇಷಣೆ ನಡೆಸಿ ಸಂಚಾರ ನಿರ್ವಹಣೆಯನ್ನು ಇನ್ನಷ್ಟು ಸುಧಾರಿಸಲು ಸಾಧ್ಯವಾಗಲಿದೆ. ವಿಮಾನ ನಿಲ್ದಾಣದ ಒಳಾಂಗಣ ಟ್ರಾಫಿಕ್ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ನಿಖರತೆ ಹೆಚ್ಚಿಸುವಲ್ಲಿ ಈ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ.
ಇದರ ಜೊತೆಗೆ, ಮಂಜು ಮುಸುಕಿದ ವಾತಾವರಣ, ಕಡಿಮೆ ಗೋಚರತೆ ಅಥವಾ ರಾತ್ರಿ ಸಮಯದಲ್ಲಿಯೂ ಈ ಸ್ಮಾರ್ಟ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಕತ್ತಲು ಅಥವಾ ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಅಪಾಯಗಳನ್ನು ತಗ್ಗಿಸಿ, ವಿಮಾನ ಮತ್ತು ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಇದು ನೆರವಾಗಲಿದೆ. ಪರಿಣಾಮವಾಗಿ, ವಿಮಾನಗಳ ಸಮಯಪಾಲನೆಗೂ ಸಹಕಾರಿಯಾಗಲಿದ್ದು, ಕಾರ್ಯಾಚರಣೆಯ ವೇಗ ಮತ್ತು ಸುರಕ್ಷತೆ ಎರಡನ್ನೂ ಸಮತೋಲನಗೊಳಿಸಲಿದೆ.
ಬಿಐಎಎಲ್ ಪ್ರಕಟಣೆಯ ಪ್ರಕಾರ, ಈ ವ್ಯವಸ್ಥೆ ಕೇವಲ ಸುರಕ್ಷತಾ ಕ್ರಮವಷ್ಟೇ ಅಲ್ಲದೆ, ಭವಿಷ್ಯದ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿಯೂ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮೂಲಕ ಜಾಗತಿಕ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳುವತ್ತ ಕೆಐಎ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.
ಇದೇ ವೇಳೆ, ಪ್ರಯಾಣಿಕರ ಸೇವೆಯಲ್ಲಿಯೂ ಬೆಂಗಳೂರು ವಿಮಾನ ನಿಲ್ದಾಣ ಹೊಸ ಮೈಲಿಗಲ್ಲು ನಿರ್ಮಿಸಿದೆ. 2024–25ನೇ ಹಣಕಾಸು ವರ್ಷದಲ್ಲಿ ಬಿಐಎಎಲ್ 4.18 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡಿದ್ದು, ದಕ್ಷಿಣ ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿರುವ ಕೆಐಎ ಮೂಲಕ ಇದುವರೆಗೆ 35 ಕೋಟಿಗೂ ಅಧಿಕ ಪ್ರಯಾಣಿಕರು ಸಂಚರಿಸಿದ್ದಾರೆ.
ಅತ್ಯುತ್ತಮ ಗ್ರಾಹಕ ಸೇವೆಗಾಗಿ ಜಾಗತಿಕ ಮಟ್ಟದ ಪ್ರತಿಷ್ಠಿತ ‘ಎಸಿಐ 5-ಸ್ಟಾರ್ ಏರ್ಪೋರ್ಟ್ ರೇಟಿಂಗ್’ ಪಡೆದಿರುವ ಕೆಐಎ, ಹಣ್ಣು, ತರಕಾರಿ ಸೇರಿದಂತೆ ಬೇಗ ಕೊಳೆಯುವ ವಸ್ತುಗಳ ಸಾಗಣೆಯಲ್ಲಿಯೂ ಸತತ ನಾಲ್ಕನೇ ವರ್ಷ ಭಾರತದ ನಂ.1 ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ತಂತ್ರಜ್ಞಾನ, ಸುರಕ್ಷತೆ ಹಾಗೂ ಪ್ರಯಾಣಿಕರ ಅನುಭವದ ಕ್ಷೇತ್ರಗಳಲ್ಲಿ ನಿರಂತರ ಹೊಸತನ ಅಳವಡಿಸಿಕೊಳ್ಳುತ್ತಿರುವ ಬೆಂಗಳೂರು ವಿಮಾನ ನಿಲ್ದಾಣ, ಇದೀಗ ಮತ್ತಷ್ಟು ಸ್ಮಾರ್ಟ್ ಮತ್ತು ಸುರಕ್ಷಿತ ವಿಮಾನಯಾನ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.