
ವಿಜಯಪುರ: ವಂದೇ ಭಾರತ ರೈಲು ಸಂಚಾರ ವಿಜಯಪುರದಲ್ಲಿ ಸಂಚರಿಸಲು ಜಿಲ್ಲೆಯ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದು, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸದ್ಯ ರೈಲು ಸಂಚರಿಸುತ್ತಿದೆ. ಆದರೆ, ವಸ್ತುಸ್ಥಿತಿ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮನವಿ ಮಾಡಿಕೊಂಡಿದ್ದಾರೆ.
ಸೊಲ್ಲಾಪುರ, ಬಿಜಾಪುರ, ಗದಗ, ಹುಬ್ಬಳ್ಳಿಯ ವರೆಗೆ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿಲ್ಲ. ಸದ್ಯ ಓಡುತ್ತಿರುವ ರೈಲಿನ ವೇಗವು 92 ರಿಂದ 100ರ ವರೆಗೆ ಇರುತ್ತದೆ. ಆದರೆ, ವಂದೇ ಭಾರತ ರೈಲಿನ ವೇಗ 110 ರಿಂದ 140ರ ವೇಗವಾಗಿದೆ. ಆದ ಕಾರಣ ರೈಲಿನ ಮಾರ್ಗ ಕಾಮಗಾರಿಯಲ್ಲಿದ್ದು, ಈ ರೈಲು ಚಾಲನೆಯಾದರೆ ಏನಾದರೂ ಸಮಸ್ಯೆ ಆಗಬಾರದೆಂಬ ಹಿನ್ನೆಲೆ ವಂದೇ ಭಾರತ ರೈಲು ಸಂಚಾರ ಮಾಡುವುದು ವಿಳಂಬವಾಗುತ್ತಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.
ರೈಲು ಮಾರ್ಗ 2-3 ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿದ ನಂತರ ಈ ರೈಲು ಸಂಚರಿಸಲು ಚಾಲನೆಯಾಗುತ್ತದೆ. ವಿದ್ಯಾವಂತರು ಇದನ್ನು ಅರಿತುಕೊಳ್ಳಬೇಕು. ಯಾವುದೇ ರೀತಿಯ ತಪ್ಪು ಗ್ರಹಿಕೆಗೆ ಅಂಟಿಕೊಳ್ಳದೇ ರೈಲಿನ ಕುರಿತ ಅಪಪ್ರಚಾರ ಮಾಡಬಾರದು ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.