
ಬೆಂಗಳೂರು (ಅ.23): ದೇಶದ ಪ್ರಮುಖ ನೀತಿ ನಿರೂಪಣಾ ಸಂಸ್ಥೆಯಾದ ನೀತಿ ಆಯೋಗವು, ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಜಲಮಂಡಳಿ (BWSSB) ಸಹಯೋಗದಲ್ಲಿ 'ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆ' ಕುರಿತು 2 ದಿನಗಳ ಮಹತ್ವದ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ. ನವೆಂಬರ್ 6 ಮತ್ತು 7 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಾಗಾರವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ.
ಈ ಕಾರ್ಯಾಗಾರದಲ್ಲಿ ದೇಶದ ವಿವಿಧ ರಾಜ್ಯಗಳ ಉನ್ನತ ಅಧಿಕಾರಿಗಳು, ಜಲ ತಜ್ಞರು ಮತ್ತು ಕೈಗಾರಿಕಾ ಮುಖಂಡರು ಭಾಗವಹಿಸಲಿದ್ದು, ಶುದ್ಧೀಕರಿಸಿದ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಮರುಬಳಕೆ ಮಾಡಲು ಸಮಗ್ರ ರಾಷ್ಟ್ರೀಯ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿವೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ 'ಬ್ರಾಂಡ್ ಬೆಂಗಳೂರು' ಅಭಿಯಾನದ ಅಡಿಯಲ್ಲಿ ತ್ಯಾಜ್ಯ ನೀರಿನ ಸಮರ್ಪಕ ಬಳಕೆಗೆ ಬೆಂಗಳೂರು ಜಲಮಂಡಳಿ ಒತ್ತು ನೀಡಿದೆ. ಈ ಮೂಲಕ ತ್ಯಾಜ್ಯ ನೀರಿನ ಬಳಕೆಯಲ್ಲಿ ಬೆಂಗಳೂರು ನಗರವು ಏಷ್ಯಾ ಖಂಡಕ್ಕೆ ಮಾದರಿಯಾಗಿದ್ದು, 'ಸರ್ಕ್ಯೂಲರ್ ವಾಟರ್ ಎಕಾನಮಿ'ಯನ್ನು ಅಳವಡಿಸಿಕೊಂಡಿರುವ ಮಹಾನಗರಗಳ ಪೈಕಿ ಮುಂಚೂಣಿಯಲ್ಲಿದೆ. ಬೆಂಗಳೂರು ನಗರವು ಶೇಕಡಾ 90 ರಷ್ಟು ಒಳಚರಂಡಿ ಶುದ್ಧೀಕರಣ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ ಪ್ರತಿದಿನ 1,348 ಎಂ.ಎಲ್.ಡಿ ಯಷ್ಟು ನೀರನ್ನು ಶುದ್ಧೀಕರಿಸಲಾಗುತ್ತಿದೆ. ಈ ಶುದ್ಧೀಕರಿಸಿದ ನೀರನ್ನು ಕೆರೆಗಳನ್ನು ತುಂಬಿಸಲು, ಪಾರ್ಕ್ ಮತ್ತು ಉದ್ಯಾನವನಗಳ ನಿರ್ವಹಣೆಗೆ ಹಾಗೂ ಕೈಗಾರಿಕೆಗಳಿಗೆ ಪೂರೈಸಲಾಗುತ್ತಿದೆ.
ತ್ಯಾಜ್ಯ ನೀರನ್ನು ಆಸ್ತಿಯನ್ನಾಗಿಸುವ ನಿಟ್ಟಿನಲ್ಲಿ ನಮ್ಮ ನಗರದ ಯಶಸ್ಸು ಸಾಬೀತಾಗಿದೆ. ಶುದ್ಧೀಕರಿಸಿದ ನೀರು ತ್ಯಾಜ್ಯವಲ್ಲ, ಅದು ನಗರದ ಸುಸ್ಥಿರತೆಯನ್ನು ಬಲಪಡಿಸುವ ಸಂಪನ್ಮೂಲ' ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ಪ್ರಸಾತ್ ಮನೋಹರ್ ಹೇಳಿದರು. ಈ ವಿಧಾನವು ಕಾವೇರಿಯಂತಹ ಸಿಹಿನೀರಿನ ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ಬೆಂಗಳೂರಿನ ಭವಿಷ್ಯದ ಬೆಳವಣಿಗೆಗೆ ನೆರವಾಗಲು ಸಾಧ್ಯ ಎಂದು ತಿಳಿಸಿದರು.
ನೀರು ಮರುಬಳಕೆಯ ರಾಷ್ಟ್ರೀಯ ಯೋಜನೆಯನ್ನು ರೂಪಿಸಲು ಈ ಕಾರ್ಯಾಗಾರದಲ್ಲಿ 3 ಮುಖ್ಯ ವಿಷಯಗಳ ಮೇಲೆ ಗಮನ ಹರಿಸಲಾಗುತ್ತದೆ. ನೀತಿ ನಿಯಮಗಳು (Policy Frameworks), ಹಣಕಾಸು ಮಾದರಿಗಳು (Financing Models) ಮತ್ತು ನೂತನ ತಂತ್ರಜ್ಞಾನದ ಅಳವಡಿಕೆ (Technology Integration). ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆಯನ್ನು ಭಾರತದಾದ್ಯಂತ ಕಡ್ಡಾಯಗೊಳಿಸಲು ಒಂದು ಸಮಗ್ರ ರಾಷ್ಟ್ರೀಯ ಯೋಜನೆಯನ್ನು ರೂಪಿಸುವುದು ಈ ಕಾರ್ಯಾಗಾರದ ಪ್ರಮುಖ ಗುರಿಯಾಗಿದೆ.