ಬೆಂಗಳೂರಿಗೆ ಬೆಂಕಿ ದಿನವಾದ ಶನಿವಾರ: ಕಳೆದ ವಾರ ಪಟಾಕಿ ಮಳಿಗೆ, ಈ ವಾರ ಅಗರಬತ್ತಿ ಮತ್ತು ಗುಜರಿ ಅಂಗಡಿ

By Sathish Kumar KHFirst Published Oct 14, 2023, 6:56 PM IST
Highlights

ಬೆಂಗಳೂರಿಗೆ ಅಕ್ಟೋಬರ್‌ ತಿಂಗಳ ಶನಿವಾರಗಳು ಬೆಂಕಿಯ ದಿನಗಳಾಗಿವೆ. ಕಳೆದ ವಾರ ಪಟಾಕಿ ಮಳಿಗೆ ಹಾಗೂ ಈ ವಾರ ಗುಜರಿ ಮಳಿಗೆ ಮತ್ತು ಅಗರಬತ್ತಿ ಫ್ಯಾಕ್ಟರಿ ಬೆಂಕಿಗಾಹುತಿಯಾಗಿವೆ.

ಬೆಂಗಳೂರು (ಅ.14): ರಾಜ್ಯ ರಾಜಧಾನಿ ಬೆಂಗಳೂರಿಗೆ ಅಕ್ಟೋಬರ್‌ ತಿಂಗಳ ಶನಿವಾರ ಬೆಂಕಿ ಅವಘಡದ ದಿನಗಳಾಗಿ ಕಂಡುಬರುತ್ತಿವೆ. ಬೆಂಗಳೂರು ಹೊರ ವಲಯದ ಆನೇಕಲ್‌ ತಾಲೂಕಿನ ಅತ್ತಿಬೆಲೆಯ ಪಟಾಕಿ ಮಳಿಗೆಗೆ ಬೆಂಕಿ ತಗುಲಿ 14 ಕಾರ್ಮಿಕರು ಸಜೀವ ದಹನವಾಗಿದ್ದರು. ಆದರೆ, ಈ ವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಅಗರಬತ್ತಿ ಫ್ಯಾಕ್ಟರಿ ಹಾಗೂ ಮತ್ತೊಂದು ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಪ್ರಕರಣಗಳಲ್ಲಿ 12 ಬೈಕ್‌ಗಳು ಹಾಗೂ 2 ಮನೆಗಳಿಗೆ ಬೆಂಕಿ ಹತ್ತಿಕೊಂಡು ಸುಟ್ಟು ಭಸ್ಮವಾಗಿದ್ದು, ಪ್ರಾಣಹಾನಿ ಸಂಭವಿಸಿಲ್ಲ.

ಕಳೆದ ಶನಿವಾರ ಆನೇಕಲ್‌ ತಾಲೂಕಿನಲ್ಲಿ ಪಟಾಕಿ ಮಳಿಗೆಗೆ ಬೆಂಕಿ ತಗುಲಿ 20 ಜನ ಕಾರ್ಮಿಕರ ಪೈಕಿ 14 ಮಂದಿ ಸಜೀವ ದಹನವಾಗಿದ್ದರು. ಜೊತೆಗೆ ನಾಲ್ಕು ಮಂದಿ ಗಂಭೀರ ಗಾಯಗೊಂಡಿದ್ದರು. ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಈ ದುರ್ಘಟನೆಗಳು ಮಾಸುವ ಮುನ್ನವೇ ಪುನಃ ಈ ಶನಿವಾರ ಎರಡು ಕಡೆಗಳಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಸಂಭವಿಸಿದ ವಿಜಯನಗರದ ಬಳಿ ಅಗರಬತ್ತಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡದಲ್ಲಿ 7 ಬೈಕ್‌ಗಳು ಹಾಗೂ ಲಕ್ಷಾಂತರ ರೂ. ಮೌಲ್ಯದ ಅಗರಬತ್ತಿ ಸುಟ್ಟು ಕರಕಲಾಗಿವೆ. ಮತ್ತೊಂದೆಡೆ ಲಗ್ಗೆರೆ ಬಳಿಯ ಗುಜರಿ ಮಳಿಗೆ ಬೆಂಕಿ ಅವಘಡದಲ್ಲಿ 5 ಬೈಕ್‌ಗಳು ಹಾಗೂ ಪಕ್ಕದ 2 ಮನೆಗಳು ಬೆಂಕಿಗಾಹುತಿಯಾಗಿವೆ.

ಅತ್ತಿಬೆಲೆ ಪಟಾಕಿ ಅವಘಡ: ಕೂಲಿಗೆ ಬಂದವರ ದುರಂತ ಅಂತ್ಯ

ಇಂದು ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಅಗರಬತ್ತಿ ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ. ದೊಡ್ಡ ಪ್ರಮಾಣದ ಬೆಂಕಿಯಿಂದ ಬೆಳಗ್ಗೆ ಜನರು ಭಯಭೀತರಾಗಿದ್ದಾರೆ. ವಿಜಯನಗರದ ಪೈಪ್ ಲೈನ್ ರಸ್ತೆಯಲ್ಲಿ ಘಟನೆ ನಡೆದಿದ್ದು, 2 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸಿವೆ. ಅಗರಬತ್ತಿ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬೆಂಕಿಯ ನಂತರ,  ಗೋಡನ್ ಒಳಗಡೆ ಕೆಮಿಕಲ್ ಕ್ಯಾನ್ ಸಂಗ್ರಹ ಮಾಡಿದ್ದರಿಂದ ಅದು ಒಡೆದು ಹೊರಗೆ ಕೆಮಿಕಲ್‌ ಹರಡಿದೆ. ಇನ್ನು ಕೆಮಿಕಲ್ ಕ್ಯಾನ್ ನಲ್ಲಿ ಇದ್ದ ರಸಾಯನಿಕ ವಸ್ತು ರಸ್ತೆಯ ಉದ್ದಕ್ಕೂ ಹರಿದು ರಸ್ತೆಯಲ್ಲೆಲ್ಲ ಕಾಣಿಸಿಕೊಂಡಿತ್ತು. ಇದರಿಂದ 7 ಬೈಕ್‌ಗಳು ಸುಟ್ಟು ಭಸ್ಮವಾಗಿವೆ. ಈ ಫ್ಯಾಕ್ಟರಿ ಮಾಲಿಸೇಟ್‌ಗೆ ಸೇರಿದ ಅಗರಬತ್ತಿ ಫ್ಯಾಕ್ಟರಿಯಾಗಿದೆ. ಒಂದು ರಾಯಲ್ ಎನ್ ಫೀಲ್ಡ್ ಬೈಕ್,  ಪಲ್ಸರ್, ಎಲೆಕ್ಟ್ರಿಕ್ ಬೈಕ್, ಹೊಂಡಾ ಆ್ಯಕ್ಟಿವಾ, ಆಕ್ಟೀವಾ, ಕಿಮೋ ಪೈವ್ ಬೈಕ್ ಹಾಗೂ ಸ್ಪೆಂಡರ್ ಪ್ಲಸ್ ಬೈಕ್‌ಗಳು ಸುಟ್ಟು ಕರಕಲಾಗಿವೆ. 

ಲಗ್ಗರೆ ಗುಜರಿ ಸ್ಟೋರೇಜ್ ಗೆ ಬೆಂಕಿ ಅವಘಡ ಪ್ರಕರಣವು ಮಧ್ಯಾಹ್ನ 1:30 ರ ಸುಮಾರಿಗೆ ಸಂಭವಿಸಿದೆ. ರಸ್ತೆ ಪಕ್ಕದ ವಿದ್ಯುತ್ ಕಂಬದಲ್ಲಿನ‌ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿ‌ದೆ. ಪಕ್ಕದಲ್ಲಿಯೇ ಇದ್ದ ಟೈಯರ್, ಪ್ಲಾಸ್ಟಿಕ್ ವೇಸ್ಟ್ ಗಳಿಂದ ತುಂಬಿದ್ದ ಗುಜರಿ ಮಳಿಗೆಗೆ ಬೆಂಕಿ ಹತ್ತಿಕೊಂಡಿದೆ. ಮುಜಾಹಿಲ್ ಎಂಬುವವರಿಗೆ ಸೇರಿದ್ದ ಗುಜರಿ ಅಂಗಡಿಯಲ್ಲಿ 10 ಜನ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಊಟದ ಸಮಯವಾದ್ದರಿಂದ ಕೆಲಸಗಾರರು ಗುಜರಿ  ಸ್ಟೋರ್ ನಲ್ಲಿರಲಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ, 5 ಫೈರ್ ಇಂಜಿನ್ ಮೂಲಕ ಬೆಂಕಿ ನಂದಿಸಿದ್ದಾರೆ.

42 ಕೋಟಿ ಹಣದ ಮೂಲವನ್ನು ಬಾಯ್ಬಿಟ್ಟ ಅಂಬಿಕಾಪತಿ ಪುತ್ರ ಪ್ರದೀಪ್‌: 15 ವರ್ಷದ ಹಣವಂತೆ ಇದು!

ಜೆಸಿಬಿ‌ ಸಹಾಯದಿಂದ ‌ಗುಜರಿ ಅವಶೇಷಗಳ‌ನ್ನು ಸ್ಥಳಾಂತರ ಮಾಡಲಾಗಿದೆ. ಗುಜರಿ‌ ಸ್ಟೋರ್ ಪಕ್ಕದಲ್ಲೆ‌ಯಿದ್ದ ಆಸರೆ ಆನಾಥಾಶ್ರಮವಿದ್ದು, ಅದೃಷ್ಟವಶಾತ್ ‌ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆಸರೆ ವೃದ್ಧಾಶ್ರಮದಲ್ಲಿದ್ದ 150ಕ್ಕೂ ಹೆಚ್ಚು ವೃದ್ಧರನ್ನು ತಕ್ಷಣ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಆದರಿಂದ ಬೆಂಕಿ ಹಾಗೂ ಹೊಗೆಯಿಂದ ಯಾವುದೆ ಅಪಾಯವಾಗಿಲ್ಲ. ರೆಸಿಡೆನ್ಸಿ ಪ್ರದೇಶದಲ್ಲಿ ಗುಜರಿಗೆ ಅವಕಾಶ ಕೊಟ್ಟಿದ್ದರಿಂದಲೇ ಅನಾಹುತಕ್ಕೆ ಕಾರಣ ಎಂದು ಸ್ಥಳಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಕಾಕತಾಳೀಯವೋ ಅಥವಾ ಕುತಂತ್ರವೋ: ಬೆಂಗಳೂರಿನಲ್ಲಿ ಪ್ರತಿ ಶನಿವಾರ ಸಂಭವಿಸುತ್ತಿರುವ ಬೆಂಕಿ ಅವಘಡ ಪ್ರಕರಣಗಳು ಕಾಕತಾಳೀವೋ ಅಥವಾ ಕಿಡಿಗೇಡಿಗಳ ಕುತಂತ್ರವೋ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ಅತ್ತಿಬೆಲೆಯ ಪಟಾಕಿ ಮಳಿಗೆ ಬೆಂಕಿ ಪ್ರಕರಣವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ವಹಿಸಿದ್ದಾರೆ. ಇನ್ನು ಪಟಾಕಿ ಸಂಗ್ರಹಕ್ಕೆ ಅವಕಾಶ ಕೊಟ್ಟಿದ್ದ ಪ್ರಾದೇಶಿಕ ಆಯುಕ್ತರು, ತಹಶೀಲ್ದಾರರನ್ನು ಅಮಾನತು ಮಾಡಲಾಗಿದೆ. ಇನ್ನು ಅಗರಬತ್ತಿ ಹಾಗೂ ಗುಜರಿ ಅಂಗಡಿಯ ಬೆಂಕಿ ಪ್ರಕರಣದಲ್ಲಿಯೂ ಕಿಡಿಗೇಡಿಗಳ ಕೈವಾಡ ಇರುವ ಆರೋಪ ಕೇಳಿಬಂದಿದೆ.

click me!