
ಬೆಳಗಾವಿ (ಫೆ.03): ಹೆತ್ತ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ಧಕ್ಕೆ ಬಂದಾಗ ಮನುಷ್ಯ ಎಂತಹ ಘೋರ ಕೃತ್ಯಕ್ಕೂ ಇಳಿಯಬಲ್ಲ ಎಂಬುದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ ದ್ವೇಷದ ಕಿಡಿ 10 ವರ್ಷಗಳ ಬಳಿಕ ಜ್ವಾಲೆಯಾಗಿ ಸ್ಫೋಟಗೊಂಡಿದ್ದು, ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಷ್ಟೇ ಅಲ್ಲ, ಸಿನಿಮಾ ಶೈಲಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವದ ಬೆನ್ನಿನ ಮೇಲೆ ಕಾಲಿಟ್ಟು ನಿಂತು ಹಂತಕ ವಿಕೃತಿ ಮೆರೆದಿದ್ದಾನೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಈ ಭಯಾನಕ ಕೃತ್ಯ ನಡೆದಿದೆ. ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಕೊಲೆಯಾದ ದುರ್ದೈವಿ. ಈರಯ್ಯ ಮಠಪತಿ ಎಂಬಾತನೇ ಈ ಘೋರ ಕೃತ್ಯ ಎಸಗಿದ ಆರೋಪಿ. ಸಾರ್ವಜನಿಕವಾಗಿ, ರಸ್ತೆ ಮಧ್ಯೆಯೇ ನಡೆದ ಈ ರಕ್ತಸಿಕ್ತ ಅಧ್ಯಾಯವನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಘಟನೆ ನಡೆದಿದ್ದು ನಿನ್ನೆ (ಸೋಮವಾರ) ಸಂಜೆ. ಬಸಪ್ಪ ಹೊಸಮನಿ ರಸ್ತೆಯಲ್ಲಿ ಬರುತ್ತಿದ್ದಾಗ ಅಡ್ಡಗಟ್ಟಿದ ಆರೋಪಿ ಈರಯ್ಯ, ತನ್ನ ಬಳಿಯಿದ್ದ ಮಚ್ಚಿನಿಂದ ಏಕಾಏಕಿ ದಾಳಿ ನಡೆಸಿದ್ದಾನೆ. ಕೋಪದ ಕೈಗೆ ಸಿಕ್ಕ ಬಸಪ್ಪನಿಗೆ ತಪ್ಪಿಸಿಕೊಳ್ಳಲು ಅವಕಾಶವೇ ಸಿಕ್ಕಿಲ್ಲ. ಬರೋಬ್ಬರಿ 16 ಬಾರಿ ಮಚ್ಚಿನಿಂದ ಕೊಚ್ಚಿ, ಇರಿದು ಬಸಪ್ಪನನ್ನು ಸ್ಥಳದಲ್ಲೇ ಹತ್ಯೆ ಮಾಡಲಾಗಿದೆ. ರಸ್ತೆಯುದ್ದಕ್ಕೂ ರಕ್ತದ ಕಲೆಗಳು ಬಿದ್ದಿದ್ದು, ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುವಂತಿತ್ತು.
ಈ ಪ್ರಕರಣದಲ್ಲಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದು ಹಂತಕನ ವರ್ತನೆ. ಸಾಮಾನ್ಯವಾಗಿ ಕೊಲೆ ಮಾಡಿದ ನಂತರ ಆರೋಪಿಗಳು ಓಡಿಹೋಗುತ್ತಾರೆ ಅಥವಾ ತಲೆಮರೆಸಿಕೊಳ್ಳುತ್ತಾರೆ. ಆದರೆ, ಈರಯ್ಯ ಹಾಗೆ ಮಾಡಲಿಲ್ಲ. ಬಸಪ್ಪ ಪ್ರಾಣಬಿಟ್ಟ ನಂತರ ಸ್ವತಃ ಈರಯ್ಯನೇ ಪೊಲೀಸರಿಗೆ ಕರೆ ಮಾಡಿದ್ದಾನೆ. 'ನಾನೇ ಕೊಲೆ ಮಾಡಿದ್ದೇನೆ, ಬಂದು ಕರೆದುಕೊಂಡು ಹೋಗಿ' ಎಂದು ಹೇಳಿದ್ದಾನೆ. ಪೊಲೀಸರು ಸ್ಥಳಕ್ಕೆ ಬರುವವರೆಗೂ ಆತ ರಸ್ತೆಯ ಮಧ್ಯೆ ಬಿದ್ದಿದ್ದ ಬಸಪ್ಪನ ಶವದ ಬೆನ್ನಿನ ಮೇಲೆ ಒಂದು ಕಾಲಿಟ್ಟು, ಕೈಯಲ್ಲಿ ಮಚ್ಚು ಹಿಡಿದು ವಿಜಯದ ಪೋಸ್ ಕೊಡುವಂತೆ ನಿಂತಿದ್ದನು. ತನ್ನ ದ್ವೇಷ ತೀರಿಸಿಕೊಂಡ ಸಾರ್ಥಕ ಭಾವ ಆತನ ಮುಖದಲ್ಲಿ ಎದ್ದು ಕಾಣುತ್ತಿತ್ತು ಎನ್ನಲಾಗಿದೆ.
ಈ ಬರ್ಬರ ಹತ್ಯೆಗೆ ಪ್ರಮುಖ ಕಾರಣ ಹಳೆಯ ದ್ವೇಷ ಮತ್ತು ಅನೈತಿಕ ಸಂಬಂಧ ಎಂದು ತಿಳಿದುಬಂದಿದೆ. ಮೃತ ಬಸಪ್ಪ ಹೊಸಮನಿ, ಆರೋಪಿ ಈರಯ್ಯನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಸುಮಾರು 10 ವರ್ಷಗಳ ಹಿಂದೆ ಬಸಪ್ಪ, ಈರಯ್ಯನ ತಾಯಿಯೊಂದಿಗೆ ಊರು ಬಿಟ್ಟು ಓಡಿಹೋಗಿದ್ದನು. ನಂತರ ಇಬ್ಬರೂ ವಾಪಸ್ ಬಂದಿದ್ದರು. ಈ ಘಟನೆ ಈರಯ್ಯನ ಮನಸ್ಸಿನಲ್ಲಿ ಆಳವಾದ ಗಾಯ ಮಾಡಿತ್ತು. ಸಮಾಜದಲ್ಲಿ ತನ್ನ ತಲೆ ತಗ್ಗಿಸುವಂತೆ ಮಾಡಿದ ಬಸಪ್ಪನ ವಿರುದ್ಧ ಆತ ದ್ವೇಷ ಸಾಧಿಸುತ್ತಿದ್ದನು. ಸಮಯಕ್ಕಾಗಿ ಕಾಯುತ್ತಿದ್ದ ಈರಯ್ಯ, ನಿನ್ನೆ ಸಂಜೆ ಸೇಡು ತೀರಿಸಿಕೊಂಡಿದ್ದಾನೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸವದತ್ತಿ ಠಾಣೆ ಪೊಲೀಸರು, ಆರೋಪಿ ಈರಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಹಳೆಯ ದ್ವೇಷಕ್ಕೆ ಒಂದು ಜೀವ ಬಲಿಯಾಗಿದ್ದು, ಹೂಲಿಕಟ್ಟಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.