
ಬೆಳಗಾವಿ: ಶಿವಂ ಅಸೋಶಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ ಕೇಳಿಬಂದಿರುವ 4500 ಬಹುಕೋಟಿ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮೊದಲ ಖಾಸಗಿ ದೂರು ದಾಖಲಾಗಿದೆ. ಕೃಷ್ಣಾ ಅಪ್ಪಣ್ಣ ಅಪ್ರಾಜ್ ಎಂಬ ಹೂಡಿಕೆದಾರರು ದೂರು ನೀಡಿದ್ದು, ಶೇ.36 ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ತನ್ನಿಂದ ₹5 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಎಸಗಿರುವುದಾಗಿ ದೂರಿನಲ್ಲಿ ಆರೋಪ ಮಾಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಹಂತ ಹಂತವಾಗಿ ₹5 ಲಕ್ಷ ಹಣವನ್ನು ಶಿವಾನಂದ ನೀಲಣ್ಣವರ ಸಂಸ್ಥೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಬಡ್ಡಿ ಹಾಗೂ ಮೂಲಧನವನ್ನು ಮರಳಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ನಿಗದಿತ ಅವಧಿಯ ಬಳಿಕವೂ ಹಣ ಅಥವಾ ಬಡ್ಡಿ ನೀಡದೆ ವಂಚನೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈಗಾಗಲೇ ಶಿವಾನಂದ ನೀಲಣ್ಣವರ ವಿರುದ್ಧದ ಬಹುಕೋಟಿ ಹೂಡಿಕೆ ವಂಚನೆ ಆರೋಪಗಳ ಕುರಿತು ಸಿಐಡಿ ತನಿಖೆ ಆರಂಭಿಸಿರುವ ಬೆನ್ನಲ್ಲೇ ಈ ದೂರು ದಾಖಲಾಗಿರುವುದು ಮಹತ್ವ ಪಡೆದಿದೆ. ನೀಲಣ್ಣವರ ವಿರುದ್ಧ ದಾಖಲಾಗಿರುವ ಮೊದಲ ಅಧಿಕೃತ ಪ್ರಕರಣ ಇದಾಗಿದ್ದು, ಕಾಗವಾಡ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆಯ ವೇಳೆ ಇನ್ನಷ್ಟು ಹೂಡಿಕೆದಾರರು ದೂರು ನೀಡುವ ಸಾಧ್ಯತೆ ಇದ್ದು, ವಂಚನೆಯ ವ್ಯಾಪ್ತಿ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದಲೇ ಹೊರಬರಬೇಕಿದೆ. ಈಗಾಗಲೇ ನೀಲಣ್ಣವರ ವಿರುದ್ಧ ಸಿಐಡಿ ತನಿಖೆ ಮುಂದುವರಿದಿದ್ದು, ಸದ್ಯ ಬೆಳವಾವಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.