ಬಿಬಿಎಂಪಿಯ 2025-26ನೇ ಸಾಲಿನ ಆಯವ್ಯಯದಲ್ಲಿ ರಾಜಧಾನಿಯ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ₹20 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡಿಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು (ಮಾ.29): ರಾಜ್ಯ ಸರ್ಕಾರದ ದಾಖಲೆಯ ಬರೋಬ್ಬರಿ ₹7 ಸಾವಿರ ಕೋಟಿ ಅನುದಾನ ನಿರೀಕ್ಷೆಯಡಿ, ಮಹತ್ವಕಾಂಕ್ಷಿ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬಿಬಿಎಂಪಿಯ 2025-26ನೇ ಸಾಲಿನ ಆಯವ್ಯಯದಲ್ಲಿ ರಾಜಧಾನಿಯ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ₹20 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡಿಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಶನಿವಾರ ಬೆಳಗ್ಗೆ 11ಕ್ಕೆ ನಗರದ ಪುರಭವನದಲ್ಲಿ ಆಯವ್ಯಯ ಮಂಡಿಸುವುದಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಲಾಗಿದೆ. ಬಿಬಿಎಂಪಿಯ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ। ಹರೀಶ್ ಕುಮಾರ್ ಸುಮಾರು 45 ರಿಂದ 50 ನಿಮಿಷ ಆಯವ್ಯಯದ ಭಾಷಣ ಮಂಡಿಸಲಿದ್ದಾರೆ. ಕಳೆದ ಮೂರು ತಿಂಗಳಿನಿಂದ ಬಿಬಿಎಂಪಿಯ ಬಜೆಟ್ ಕುರಿತು ಶಾಸಕರು, ಸಚಿವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಆಯವ್ಯಯ ಸಿದ್ಧಪಡಿಸಲಾಗಿದೆ.
ಅಭಿವೃದ್ಧಿ ಯೋಜನೆಗಳಿಗೆ ಒತ್ತು: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಂತೆಯೇ ಈ ಬಾರಿಯೂ ಸುಗಮ ಸಂಚಾರಿ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು ಹೀಗೆ ಎಂಟು ಪರಿಕಲ್ಪನೆಯಲ್ಲಿ ಬಜೆಟ್ ಸಿದ್ಧಪಡಿಸಲಾಗಿದೆ. ಅದರಲ್ಲೂ ಸಂಚಾರ ದಟ್ಟಣೆ ಕಡಿಮೆ ಮಾಡುವುದಕ್ಕೆ ಘೋಷಿಸಲಾದ ಸುರಂಗ ರಸ್ತೆ ಯೋಜನೆಗೆ ಈ ಬಾರಿಯ ಬಜೆಟ್ನಲ್ಲಿ ಭರ್ಜರಿ ಅನುದಾನ ಮೀಸಲಿಡುವ ಮೂಲಕ ಬುನಾದಿ ಹಾಕಲು ಚಿಂತನೆ ನಡೆಸಲಾಗಿದೆ. ಉಳಿದಂತೆ ನಗರದ ರಸ್ತೆಗಳನ್ನು ವೈಟ್ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದು. ರಾಜಕಾಲುವೆಯ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ, ಪ್ರಮುಖ ಜಂಕ್ಷನ್ಗಳಲ್ಲಿ ಫ್ಲೈಓವರ್, ಅಂಡರ್ ಪಾಸ್ ನಿರ್ಮಾಣ ಸೇರಿದಂತೆ ನಗರದ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ಆದ್ಯತೆ ನೀಡುವ ನಿರೀಕ್ಷೆ ಇದೆ. ಅಲ್ಲದೇ, ಸ್ಕೈಡಕ್ನಂತಹ ದೊಡ್ಡ ಮೊತ್ತದ ಯೋಜನೆಗಳ ಅನುಷ್ಠಾನಕ್ಕೆ ಹಣ ನೀಡಲಾಗುತ್ತದೆ.
ಈ ಸಲ ಬಿಬಿಎಂಪಿ ಬಜೆಟ್ ಗಾತ್ರ 19000 ಕೋಟಿ: ಮಾ.28ರಂದು ಮಂಡನೆ!
ಜನಸಾಮಾನ್ಯರಿಗೆ ಹೊರೆ ಹೇರುವ ಬಜೆಟ್?: ಈಗಾಗಲೇ ಮೆಟ್ರೋ, ಬಸ್ ಪ್ರಮಾಣ ದರ, ಹಾಲಿನ ದರ ಹಾಗೂ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರವು, ಬಿಬಿಎಂಪಿಯಡಿ ಬರುವ ಘನತ್ಯಾಜ್ಯ ವಿಲೇವಾರಿಯ ಶುಲ್ಕ ವಿಧಿಸುವುದಕ್ಕೆ ತೀರ್ಮಾನಿಸಿದ್ದು, ಅಧಿಕೃತವಾಗಿ ಆಯವ್ಯಯದಲ್ಲಿ ಘೋಷಣೆ ಮಾಡಿದರೂ ಅಥವಾ ಮಾಡದಿದ್ದರೂ ಏಪ್ರಿಲ್ನಿಂದ ಜಾರಿಗೆ ತರುವುದು ನಿಶ್ಚಿತವಾಗಿದೆ. ಜತೆಗೆ, ಬೇರೆ ಬೇರೆ ಮಾರ್ಗದಲ್ಲಿ ಹೆಚ್ಚಿನ ಆದಾಯ ಸಂಗ್ರಹಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಬಿಬಿಎಂಪಿ ಆದಾಯ ನಿರೀಕ್ಷೆ ಹೀಗಿದೆ: ಬಿಬಿಎಂಪಿಯ ದೊಡ್ಡ ಆದಾಯ ಮೂಲವಾದ ಆಸ್ತಿ ತೆರಿಗೆಯಿಂದ ಸುಮಾರು ₹6,500 ಕೋಟಿ, ಘನತ್ಯಾಜ್ಯ ಶುಲ್ಕದಿಂದ ₹700 ಕೋಟಿ, ಜಾಹೀರಾತು ಶುಲ್ಕದಿಂದ ₹750 ಕೋಟಿ, ಪ್ರೀಮಿಯಂ ಎಫ್ಎಆರ್ನಿಂದ ₹1 ಸಾವಿರ ಕೋಟಿ, ರಾಜ್ಯ ಸರ್ಕಾರದ ₹7 ಸಾವಿರ ಕೋಟಿ, ವಿಶ್ವಬ್ಯಾಂಕ್ ನೆರವು ₹2 ಸಾವಿರ ಕೋಟಿ, ಬಿಬಿಎಂಪಿ ಆಸ್ತಿಗಳ ಗುತ್ತಿಗೆ ದರ ಪರಿಷ್ಕರಣೆ ಹೀಗೆ, ಸುಮಾರು ₹19 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿ ಗಾತ್ರದ ಆಯವ್ಯಯ ಮಂಡಿಸುವುದಕ್ಕೆ ನಿರ್ಧರಿಸಲಾಗಿದೆ.
5ನೇ ಬಾರಿ ಅಧಿಕಾರಿಗಳ ಬಜೆಟ್: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅಧಿಕಾರ ಅವಧಿ 2020ರ ಸೆಪ್ಟಂಬರ್ನಲ್ಲಿ ಮುಕ್ತಾಯವಾಗಿದೆ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಆಯವ್ಯಯವನ್ನು ಪಾಲಿಕೆ ಅಧಿಕಾರಿಗಳೇ ಮಂಡನೆ ಮಾಡುತ್ತಿದ್ದಾರೆ. ಈ ಬಾರಿಯೂ ಹಣಕಾಸು ವಿಭಾಗದ ವಿಶೇಷ ಆಯುಕ್ತರೇ ಮಂಡಿಸಲಿದ್ದಾರೆ. ಈ ಮೂಲಕ ಸತತ ಐದು ಬಾರಿ ಅಧಿಕಾರಿಗಳಿಂದ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ.
ವೀಕ್ಷಣೆಗೆ ಆನ್ಲೈನ್ ವ್ಯವಸ್ಥೆ: ಶನಿವಾರ ಪುರಭವನದಲ್ಲಿ ಮಂಡಿಸುವ ಬಿಬಿಎಂಪಿಯ ಆಯವ್ಯಯ ಸಾರ್ವಜನಿಕರ ವೀಕ್ಷಣೆಗೆ ಆನ್ಲೈನ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. https://www.youtube.com/live/eydr2vyROL8?si=q5q6Qz-Yem4uwj_M ಯೂಟ್ಯೂಬ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಹೊಸ ಯೋಜನೆಗಳ ನಿರೀಕ್ಷೆ: ಮೂಲಸೌರ್ಯ ಹೊರತು ಪಡಿಸಿ ಪಾಲಿಕೆಯ ಬಜೆಟ್ನಲ್ಲಿ ದೊಡ್ಡ ಹೊಸ ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆ ಕಡಿಮೆ ಇದೆ. ಆದರೆ, ಆರೋಗ್ಯ, ಶಿಕ್ಷಣ ಹಾಗೂ ಕಲ್ಯಾಣ ಕಾರ್ಯಕ್ರಮಗಳಲ್ಲಿ ಕೆಲವು ಹೊಸ ಯೋಜನೆಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದೆ.
ಬ್ರ್ಯಾಂಡ್ ಬೆಂಗಳೂರು ಆರೋಗ್ಯ: ಬಿಬಿಎಂಪಿ ಆಸ್ಪತ್ರೆಯಲ್ಲಿ ಡಯಗ್ನಸ್ಟಿಕ್ ಲ್ಯಾಬ್ಗಳನ್ನು ಆರಂಭಿಸುವುದು. ಈ ಮೂಲಕ ಬಿಬಿಎಂಪಿಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅತಿ ಕಡಿಮೆ ದರದಲ್ಲಿ ಸೌಲಭ್ಯ ನೀಡುವುದಕ್ಕೆ ಚಿಂತನೆ ನಡೆಸಲಾಗಿದೆ. ಉಳಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದೊಂದು ಆ್ಯಂಬುಲೆನ್ಸ್ ಖರೀದಿ, ಡೆಂಟಲ್ ಕ್ಲಿನಿಕ್ ಆರಂಭ, ‘ಸೇವ್ ಮಾಮ್’ ಕಾರ್ಯಕ್ರಮದ ಮೂಲಕ ತಾಯಿ-ಮಗುವಿನ ಸಾವು ತಡೆಗಟ್ಟುವುದು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದೊಂದು ಇವಿ ಬೈಕ್, ಪಿಜಿಯೋ ಥೆರಪಿ ಚಿಕಿತ್ಸೆ ಆರಂಭಿಸುವುದು ಸೇರಿದಂತೆ ಮೊದಲಾದ ಸೇವೆಗಳನ್ನು ಆರಂಭಿಸಲಾಗುತ್ತದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ರೆಫರಲ್ ಆಸ್ಪತ್ರೆ, ರೆಫರಲ್ ಆಸ್ಪತ್ರೆಗಳ ಹಾಸಿಗೆ ಸಂಖ್ಯೆ ಹೆಚ್ಚಿಸುವುದು, ತುರ್ತು ಚಿಕಿತ್ಸಾ ಕೇಂದ್ರ ಆರಂಭ ಸೇರಿದಂತೆ ಮೊದಲಾದ ಕಾರ್ಯಕ್ರಮ ನಿರೀಕ್ಷೆ ಇದೆ.
ಸಮುದಾಯ ಪ್ರಾಣಿಚಿಕಿತ್ಸಾಲಯ ಸ್ಥಾಪನೆ: ಬಿಬಿಎಂಪಿಯ ವ್ಯಾಪ್ತಿಯಲ್ಲಿ ಪ್ರಾಣಿ ಪಕ್ಷಿಗಳ ಚಿಕಿತ್ಸೆಗೆ ಸರ್ಕಾರಿ ಚಿಕಿತ್ಸಾಲಯ ಇರಲಿಲ್ಲ. ಈ ಹಿಂದೆ ಸರ್ಕಾರ ಪಶುಸಂಗೋಪನೆ ಇಲಾಖೆ ನಡೆಯುತ್ತಿದ್ದ ಚಿಕಿತ್ಸಾಲಯಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ ಮೇಲೆ ಮುಚ್ಚಿವೆ. ಹೀಗಾಗಿ, ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್ನಲ್ಲಿ ಪಾಲಿಕೆಯ 8 ವಲಯದಲ್ಲಿ ತಲಾ ಒಂದು ಸಮುದಾಯ ಪ್ರಾಣಿ ಚಿಕಿತ್ಸಾಲಯ ಸ್ಥಾಪಿಸುವುದಕ್ಕೆ ಚಿಂತನೆ ನಡೆಸಲಾಗಿದೆ. ಜತೆಗೆ, ಪ್ರಾಣಿಗಳ ಮೃತದೇಹಗಳನ್ನು ಗೌರವಿತವಾಗಿ ಅಂತ್ಯಕ್ರಿಯೆಗೆ ಹೆಚ್ಚುವರಿ ಮೂರು ಚಿತಾಗಾರ ಸ್ಥಾಪನೆ, ಎಬಿಸಿ ಕೇಂದ್ರದ ಕೆನಲ್ ಸಾಮರ್ಥ್ಯ ಹೆಚ್ಚಳಕ್ಕೆ ಪ್ರಿ ಫ್ಯಾಬ್ರಿಕೇಟೆಡ್ ಕಂಟೈನರ್ ಖರೀದಿ, ಆಕ್ರಮಣಕಾರಿ ಬೀದಿನಾಯಿಗಳ ವೀಕ್ಷಣಕೇಂದ್ರ ಸ್ಥಾಪನೆ ಸೇರಿದಂತೆ ಮೊದಲಾದ ಯೋಜನೆ ಜಾರಿ ಸಾಧ್ಯತೆ ಇದೆ.
ಬಿಬಿಎಂಪಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಗಾಡಿ: ಡಿ.ಕೆ.ಶಿವಕುಮಾರ್
ಮೂಲಸೌಕರ್ಯ ಅನುಷ್ಠಾನಕ್ಕೆ ಪ್ರತ್ಯೇಕ ಕಂಪನಿ ಸ್ಥಾಪನೆ: ಈಗಾಗಲೇ ರಾಜ್ಯ ಸರ್ಕಾರದ ಬಜೆಟ್ನಲ್ಲಿ ನಗರ ವಿವಿಧ ಕಾಮಗಾರಿಗಳನ್ನು ಅನುಷ್ಠಾನಕ್ಕೆ ವಿಶೇಷ ಉದ್ದೇಶಿತ ವಾಹನ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಆ ನಿಟ್ಟಿನಲ್ಲಿ ಟನಲ್ ರಸ್ತೆ, ಸ್ಕೈಡಕ್, ವೈಟ್ ಟಾಪಿಂಗ್, ಫ್ಲೈಓವರ್ ಸೇರಿದಂತೆ ಮೊದಲಾದ ಯೋಜನೆಗಳನ್ನು ಅನುಷ್ಠಾನಕ್ಕೆ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಪ್ರತ್ಯೇಕ ಕಂಪನಿ ಸ್ಥಾಪಿಸುವ ಬಗ್ಗೆ ಘೋಷಣೆ ಸಾಧ್ಯತೆ ಇದೆ.