Ballari Utsav: ವಿಜಯನಗರ ಜಿಲ್ಲೆ ವಿಭಜನೆ ಬಳಿಕ ಇದೇ ಮೊದಲ ಬಾರಿಗೆ ಬಳ್ಳಾರಿ ಉತ್ಸವ

By Ravi JanekalFirst Published Dec 20, 2022, 1:00 PM IST
Highlights

ವಿಜಯನಗರ ಜಿಲ್ಲೆ ವಿಭಜನೆ ಬಳಿಕ ಇದೇ ಮೊದಲ ಬಾರಿಗೆ ಬಳ್ಳಾರಿ ಉತ್ಸವ ನಡೆಸಲು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.‌ ಜನವರಿ 21 ಮತ್ತು 22 ರಂದು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಡಿ.20) : ರಾಜ್ಯವಷ್ಟೇ ಅಲ್ಲದೇ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಂಪಿ ಉತ್ಸವ ಹೆಸರುವಾಸಿ.  ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಹಂಪಿ‌ ಇದ್ದಾಗ, ಮೂರು ದಿನಗಳ ಕಾಲ 'ಹಂಪಿ ಉತ್ಸವ' ಅದ್ಧೂರಿಯಾಗಿ ನಡೆಯುತ್ತಿತ್ತು. ಆದ್ರೆ ಇದೀಗ ‌ಜಿಲ್ಲೆ ವಿಭಜನೆ ಬಳಿಕ‌ ಬಳ್ಳಾರಿಯಲ್ಲಿ ಆಚರಣೆ ಮಾಡಲು ಯಾವುದೇ ಉತ್ಸವ ಇಲ್ಲ. ಹೀಗಾಗಿ ಬಳ್ಳಾರಿ ಮತ್ತು‌ ವಿಜಯನಗರ ಜಿಲ್ಲೆ ವಿಭಜನೆಯಾದ ಬಳಿಕ ಮೊದಲ ಬಾರಿಗೆ ‘ಬಳ್ಳಾರಿ ಉತ್ಸವ'ವನ್ನು  ಜನವರಿ 21 ಮತ್ತು 22 ರಂದು ವಿಜೃಂಭಣೆಯಿಂದ ಆಚರಿಸಲು ಬಳ್ಳಾರಿ ಜಿಲ್ಲಾಡಳಿತ ನಿರ್ಧಾರ ಮಾಡಿದೆ.  

ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.‌
ಉತ್ಸವ ಆಚರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಂಡು ಅದ್ದೂರಿ ಆಚರಣೆಗೆ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಶ್ರೀರಾಮುಲು  ಹೇಳಿದ್ದಾರೆ.

Hampi Utsav: ಜನವರಿ ತಿಂಗಳಾಂತ್ಯಕ್ಕೆ 3 ದಿನಗಳ ಕಾಲ ಹಂಪಿ ಉತ್ಸವ: ಸಚಿವೆ ಶಶಿಕಲಾ ಜೊಲ್ಲೆ

ಹಂಪಿ ಉತ್ಸವದಂತೆ ಬಳ್ಳಾರಿ ಉತ್ಸವ :

ಹಂಪಿ ಉತ್ಸವದ ಮಾದರಿಯಲ್ಲಿ‘ಬಳ್ಳಾರಿ ಉತ್ಸವ'ವನ್ನು 2 ದಿನಗಳ ಕಾಲ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಾಲ್ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುವುದು. ಪ್ರಥಮ ಬಾರಿಗೆ ಜಿಲ್ಲಾ ಉತ್ಸವ ಆಚರಿಸುತ್ತಿದ್ದು ಎರಡು ದಿನಗಳ ಮಟ್ಟಿಗೆ ಸೀಮಿತವಾಗಿರಲಿ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳಲಿದೆ. ಜನವರಿ ಮೊದಲ ವಾರದಿಂದಲೇ ಶಾಲಾ-ಕಾಲೇಜುಗಳಲ್ಲಿ ಕ್ವಿಜ್ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಬೇಕು. ಸ್ಥಳೀಯ ಮತ್ತು ಹೊರ ರಾಜ್ಯಗಳಿಂದ ಕಲಾವಿದರನ್ನು ಕರೆಸಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಶ್ರೀರಾಮುಲು ಸೂಚಿಸಿದರು.

ಲೇಸರ್ ಲೈಟ್ ಪ್ಲವರ್ ಶೋ ಸೇರಿದಂತೆ ವಿಶೇಷ ಕಾರ್ಯಕ್ರಮವಿರಲಿ

 ತೋಟಗಾರಿಕೆ ಇಲಾಖೆ ವತಿಯಿಂದ ನೂತನ ಜಿಲ್ಲಾಡಳಿತ ಭವನದಲ್ಲಿ ಹೂಗಳ ಪ್ರದರ್ಶನ, ಮಹಾನಗರ ಪಾಲಿಕೆ ವತಿಯಿಂದ ಓಟದ ಸ್ಪರ್ಧೆ, ಗಾಳಿಪಟ ಸ್ಪರ್ಧೆ, ವಾಟರ್ ಸ್ಪರ್ಧೆ, ರಂಗೋಲಿ ಸ್ಪರ್ಧೆಯನ್ನು ಆಯೋಜಿಸಬೇಕು ಎಂದು‌‌ ಜಿಲ್ಲಾಧಿಕಾರಿ ಪವನ್ ಮಾಲ್ಪಾಟಿ ಹೇಳಿದರು. ಬಳ್ಳಾರಿ ಉತ್ಸವದಲ್ಲಿ ಲೇಸರ್ ಶೋ ಆಯೋಜನೆ, ಕುಸ್ತಿ ಪಂದ್ಯಾವಳಿ, ಹಳ್ಳಿಗಳ ಎತ್ತಿನ ಬಂಡಿ ಉತ್ಸವ, ಆಹಾರ ಪ್ರದರ್ಶನ, ಸಿರಿಧಾನ್ಯಗಳ ಪ್ರದರ್ಶನ, ಮಕ್ಕಳ ಉತ್ಸವ, ಮಹಿಳಾ ಉತ್ಸವ ಸೇರಿದಂತೆ ನಾನಾ ಕ್ರೀಡೆಗಳನ್ನು ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗುವುದು. ಇದರ ಜೊತೆಗೆ ನಗರದ ಕೋಟೆಗೆ ಲೈಟ್ ವ್ಯವಸ್ಥೆ ಇರಲಿದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ‌ ತಿಳಿಸಿದರು.

Ground Report: ಗಣಿನಾಡಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಕದನ: ಬಿಜೆಪಿ ಅಲೆ ಎಬ್ಬಿಸಲು ರಾಮುಲು ಸರ್ಕಸ್

ಸಾಮಾಜಿಕ ಜಾಲತಾಣದ ಸದ್ಭಳಕೆಯಾಗಲಿ

ಯುವಕರಿಗೆ ಬಳ್ಳಾರಿ ಉತ್ಸವಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಮತ್ತು ಸಲಹೆಗಳಿದ್ದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮತ್ತು ಖಾತೆಗಳನ್ನು ರಚಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಅವರು ಸಲಹೆ ನೀಡಿದರು. ಸಭೆಯಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶ್  ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್,   ಉತ್ಸವಕ್ಕೆ ಸಂಬಂಧಿಸಿದಂತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

click me!