ಬಳ್ಳಾರಿ ಮೇಯರ್ ಸ್ಥಾನಕ್ಕಾಗಿ ಕೋಟಿ ಕೋಟಿ ಡೀಲ್: ಆರೋಪಿ, ದೂರುದಾರ ಇಬ್ಬರೂ ನಾಪತ್ತೆ..!

By Girish GoudarFirst Published May 18, 2022, 10:46 AM IST
Highlights

*  ಶಾಸಕ ನಾಗೇಂದ್ರ ಮಾವನನ್ನು ಬಂಧಿಸಲು ಪೊಲೀಸರ ಪ್ಲಾನ್
*  ಒಳಗಿಂದೊಳಗೆ ಹೊಂದಾಣಿಕೆ ಮಾಡೋ ಪ್ಲಾನ್ ನಡೆದಿದೆಯಂತೆ
*  ಸಾಮಾನ್ಯ ಸಭೆಗಾದ್ರೂ ಬರ್ತಾರಾ ಕಾರ್ಪೋರೇಟರ್ ಅಸೀಫ್?
 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ 

ಬಳ್ಳಾರಿ(ಮೇ.18):  ಶಾಸಕ, ಸಚಿವ ಮತ್ತು ಸಂಸದರ ಸ್ಥಾನಕ್ಕಲ್ಲ ಬಳ್ಳಾರಿಯಲ್ಲಿ ಮೇಯರ್ ಸ್ಥಾನಕ್ಕೂ ಮೂರುವರೆ ಕೋಟಿ ಡೀಲ್ ಮಾಡಿಕೊಂಡಿರೋ ಪ್ರಕರಣ ಇಡೀ ರಾಜ್ಯದ್ಯಾಂತ ಕಳೆದ ವಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದು ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಮತ್ತು ವಿರೋಧ ಪಕ್ಷದಲ್ಲಿರೋ ಕಾಂಗ್ರೆಸ್ ಎರಡು ಪಕ್ಷಕ್ಕೂ ಒಂದಷ್ಟು ಮುಜುಗರದ ಜೊತೆ ಜನಸಾಮಾನ್ಯರಲ್ಲಿ ಗೌರವ ಕಡಿಮೆಮಾಡುವಂತೆ ಮಾಡಿತ್ತು.

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪಕ್ಷದ ನಾಯಕರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ರು. ಆದ್ರೇ ಇದೀಗ  ದೂರು ಕೊಟ್ಟು ವಾರವಾದ್ರೂ ದೂರು ನೀಡಿದ ಕಾರ್ಪೋರೇಟರ್ ಅಸೀಫ್ ಮತ್ತು ಆರೋಪಿ ಶಾಸಕ ನಾಗೇಂದ್ರ ಮಾವ ಎರಿಸ್ವಾಮಿ ಇಬ್ಬರು ನಾಪತ್ತೆಯಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ನೋಟಿಸ್ ನೀಡಿದ್ರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆರೋಪಿ ಶಾಸಕ ನಾಗೇಂದ್ರ ಮಾವ ಎರಿಸ್ವಾಮಿ ಬಂಧಿಸೋ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.

Ballari: ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾದ ಬಳ್ಳಾರಿ ಮೇಯರ್ ಡೀಲ್..!

ಬಳ್ಳಾರಿ ಮೇಯರ್ ಪಟ್ಟಕ್ಕಾಗಿ ಮೂರುವರೆ ಕೋಟಿ ಡೀಲ್

ಹೌದು, 39 ಸದಸ್ಯರು ಬಲ ಇರೋ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿರಾಯಸವಾಗಿ ಗೆದ್ದಿತ್ತು. 21 ವಾರ್ಡಿನಲ್ಲಿ ಕಾಂಗ್ರೆಸ್ 13ರಲ್ಲಿ ಬಿಜೆಪಿ ಮತ್ತು 5ರಲ್ಲಿ ಪಕ್ಷೇತರರು ಗೆದ್ದಿದ್ರು. ಪಕ್ಷೇತರರ ಬೆಂಬಲದಿಂದ ಅಧಿಕಾರ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ನಲ್ಲಿ ಮೇಯರ್ ಪಟ್ಟಕ್ಕಾಗಿ ಹಗ್ಗಜಗ್ಗಾಟ ನಡೆದಿತ್ತು. ಈ ವೇಳೆ ಕಾರ್ಪೋರೇಟರ್ ಅಸೀಫ್ ಎನ್ನುವವರು ಶಾಸಕ ನಾಗೇಂದ್ರ ಮಾವ ಕಾಂಗ್ರೆಸ್ ಮುಖಂಡ ಎರಿಸ್ವಾಮಿಗೆ ಮೇಯರ್ ಮಾಡುವಂತೆ ಮೂರುವರೆ ಕೋಟಿ ಹಣವನ್ನು ನೀಡಿದ್ರಂತೆ ಆದ್ರೇ ಮೀಸಲಾತಿ ಬದಲಾವಣೆಯಾದ ( ಮಹಿಳಾ ಮೀಸಲಾತಿ ) ಹಿನ್ನೆಲೆ ಅಸೀಫ್ ಗೆ ಮೇಯರ್ ಸ್ಥಾನ ಕೈತಪ್ಪಿತ್ತು.  ಈಗಾಗಲೇ ಮೇಯರ್ ಸ್ಥಾನದ ಆಯ್ಕೆ ಮುಗಿದು ಎರಡು ತಿಂಗಳಾದ್ರೂ ಎರಿಸ್ವಾಮಿ ಹಣವನ್ನು ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ಕಳೆದ ವಾರ ಅಸೀಫ್ ಕೌಲ್ ಬಜಾರ್ ಠಾಣೆಯಲ್ಲಿ ಮೂರುವರೆ ಕೋಟಿ ಡೀಲ್ ಬಗ್ಗೆ ದೂರನ್ನು ನೀಡಿದ್ರು.

ಮೇಯರ್ ಪಟ್ಟಕ್ಕೆ ಡೀಲ್ ಮಾಡಿದ್ದಾಯ್ತು, ಇದೀಗ ಕೊಲೆ ಬೆದರಿಕೆ

ಇಬ್ಬರು ನಾಪತ್ತೆ ಬಂಧಿಸಲು ಪೊಲೀಸರ ಚಿಂತನೆ

ಇನ್ನೂ ಘಟನೆ (ದೂರು ನೀಡಿ) ನಡೆದು ವಾರವಾಗಿದೆ. ಈ ಬಗ್ಗೆ ಶಾಸಕ ನಾಗೇಂದ್ರ ಇದೆಲ್ಲವೂ ಬಿಜೆಪಿಯ ಅಪರೇಷನ್ ಕಮಲದ ಪರಿಣಾಮ ಎಂದು ದೂರಿದ್ದಾಯ್ತು. ಇದಕ್ಕೆ ಉತ್ತರವಾಗಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ನಿಮ್ಮ ಒಳಜಗಳಕ್ಕೆ ನಾವೇನು ಮಾಡೋದು ಎಂದು ಟಾಂಗ್ ನೀಡಿದ್ದಾಯ್ತು. ಆದ್ರೇ, ಇಷ್ಟೇಲ್ಲ ನಡೆಯುತ್ತಿದ್ರು, ಮತ್ತು ಪೊಲೀಸರು ನೋಟಿಸ್ ನೀಡಿದ್ರು, ದೂರುದಾರ ಅಸೀಫ್ ಮತ್ತು ಆರೋಪಿ ಎರಿಸ್ವಾಮಿ ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಮೊದಲು ಆರೋಪಿ ಶಾಸಕ ನಾಗೇಂದ್ರ ಮಾವ ಎರಿಸ್ವಾಮಿ ಬಂಧಿಸಲು ಪೊಲೀಸರ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆಂದು ಎಸ್ಪಿ ಸೈದುಲ್ ಅಡಾವತ್ ಸುವರ್ಣ ನ್ಯೂಸ್ ಗೆ ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯ ಸಭೆಗಾದ್ರೂ ಬರ್ತಾರಾ ಕಾರ್ಪೋರೇಟರ್ ಅಸೀಫ್?

ಇಂದು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಇರೋ ಹಿನ್ನೆಲೆ ನಾಪತ್ತೆಯಾದ ಕಾರ್ಪೋರೇಟರ್ ಆಸೀಫ್ ಇಂದಾದ್ರೂ ಬರುತ್ತಾರಾ? ಎಂದು ಚರ್ಚೆ ನಡೆಯುತ್ತಿದೆ. ಪ್ರಕರಣದಲ್ಲಿ ಕೇವಲ ಹಣ ಪಡೆದ ಎರಿಸ್ವಾಮಿ ಮಾತ್ರವಲ್ಲ ಇಷ್ಟೊಂದು ಹಣ ಎಲ್ಲಿಂದು ಬಂತು..? ಇದಕ್ಕೆ ದಾಖಲೆ ಇದೆಯೇ ? ಹಣದ ಮೂಲ ಯಾವುದು ? ಯಾರ ಮುಂದೆ ಹಣವನ್ನು ನೀಡಲಾಗಿತ್ತು ಎನ್ನುವ ಹತ್ತು ಹಲವು ಪ್ರಶ್ನೆಗಳಿಗೆ ಕಾರ್ಪೋರೇಟರ್ ಅಸೀಫ್ ಕೂಡ ಪೊಲೀಸರಿಗೆ ಉತ್ತರ ನೀಡಬೇಕಿದೆ. ಈ ಮಧ್ಯೆ ತೆರೆಮರೆಯಲ್ಲಿ ಶಾಸಕ ನಾಗೇಂದ್ರ ರಾಜಿ ಸಂಧಾನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.. ಅದೇನೇ ರಾಜೀ ಸಂಧಾನ ಮಾಡಿದ್ರು ಪೊಲೀಸರ ನೋಟಿಸ್ಗಂತೂ ಇಬ್ಬರು ಉತ್ತರ ನೀಡಬೇಕಿದೆ.
 

click me!