
ಬಾಗಲಕೋಟೆ: ಮಾನವೀಯತೆಯನ್ನು ಮರೆತಂತೆ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತದಂತೆ ದುಡಿಸಿಕೊಳ್ಳಲಾಗುತ್ತಿದ್ದ ಒಡಿಶಾ ಮೂಲದ ಕಾರ್ಮಿಕರನ್ನು ಕಂದಾಯ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಐವರು ಬಾಲಕಾರ್ಮಿಕರು ಸೇರಿದಂತೆ ಒಟ್ಟು 24 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಈರಪ್ಪ ಕುಂಬಾರ ಎಂಬ ವ್ಯಕ್ತಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದನು. ಒಡಿಶಾದಿಂದ ತರಿಸಲಾದ ಕಾರ್ಮಿಕರಿಗೆ ಆರಂಭದಲ್ಲಿ ಒಬ್ಬರಿಗೆ 25 ಸಾವಿರ, 50 ಸಾವಿರ ಹಾಗೂ 20 ಸಾವಿರ ರೂ.ಗಳಂತೆ ಒಟ್ಟು ಸುಮಾರು 10 ಲಕ್ಷ ರೂ. ಮುಂಗಡ ನೀಡಲಾಗಿತ್ತು. ನಂತರ ವಾರಕ್ಕೆ ಕೇವಲ 400 ರೂ. ಕೂಲಿ ಮಾತ್ರ ನೀಡಲಾಗುತ್ತಿತ್ತು.
ಕಾರ್ಮಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ, ಅನಾರೋಗ್ಯಕ್ಕೆ ಒಳಗಾದರೂ ಸಹ ಕೆಲಸಕ್ಕೆ ಒತ್ತಾಯಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಅಮಾನವೀಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದ ತಕ್ಷಣ ಇಳಕಲ್ ತಹಸೀಲ್ದಾರರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದರು.
ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಐವರು ಬಾಲಕಾರ್ಮಿಕರು ಸೇರಿ ಒಟ್ಟು 24 ಜನರನ್ನು ರಕ್ಷಿಸಿ, ಅಗತ್ಯ ಕ್ರಮಗಳ ಬಳಿಕ ಅವರನ್ನು ಒಡಿಶಾಗೆ ಸುರಕ್ಷಿತವಾಗಿ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟ್ಟಿಗೆ ಭಟ್ಟಿಯ ಮಾಲೀಕ ಈರಪ್ಪ ಕುಂಬಾರ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಜೀತ ಪದ್ಧತಿ ನಿಷೇಧ ಕಾಯ್ದೆ ಅಡಿಯಲ್ಲಿ ಇಳಕಲ್ ಗ್ರಾಮೀಣ ಪೊಲಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭವಿಷ್ಯದಲ್ಲಿ ಇಂತಹ ಕಾನೂನು ಉಲ್ಲಂಘನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಾರ್ಮಿಕರ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಗೆ ಇಲಾಖೆ ಸದಾ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.