ಶಿವಮೊಗ್ಗ ಗಾರೆ ಮೇಸ್ತ್ರಿಯ ಮರ್ಮಾಂಗಕ್ಕೆ ಚುಚ್ಚಿ ಕೊಲೆಗೈದ ಕಿರಾತಕ ಸ್ನೇಹಿತರು; ಕಲ್ಲು ಎತ್ತಿಹಾಕಿದವರು ಅಂದರ್!

Published : Feb 13, 2026, 05:59 PM IST
Shivamogga Building Labour

ಸಾರಾಂಶ

ಶಿವಮೊಗ್ಗದ ಗಾಜನೂರಿನಲ್ಲಿ ಕುಡಿದ ಮತ್ತಿನ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಆತನ ಸ್ನೇಹಿತರೇ ಕೈಕಾಲು ಮುರಿದು, ಮರ್ಮಾಂಗಕ್ಕೆ ಚುಚ್ಚಿ, ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.  ಪೊಲೀಸರು ಇಬ್ಬರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಿದ್ದಾರೆ.

ಶಿವಮೊಗ್ಗ (ಫೆ.13): ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ತುಂಗಾ ಜಲಾಶಯದ ಸಮೀಪವಿರುವ ಗಾಜನೂರು ಗ್ರಾಮದಲ್ಲಿ ಮನುಷ್ಯತ್ವವೇ ನಾಚುವಂತಹ ಭೀಕರ ಕೊಲೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಉಂಟಾದ ಜಗಳವು ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬನ ಕೈಕಾಲು ಮುರಿದು, ಮರ್ಮಾಂಗಕ್ಕೆ ಹರಿತವಾದ ಆಯುಧದಿಂದ ಚುಚ್ಚಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಪೈಶಾಚಿಕ ಕೃತ್ಯ ಎಸಗಿದ್ದ ಇಬ್ಬರು ಆರೋಪಿಗಳನ್ನು ತುಂಗಾನಗರ ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಹಿನ್ನೆಲೆ:

ಶಿವಮೊಗ್ಗದ ಹೊಸಮನೆ ಬಡಾವಣೆಯ ಮೂಲದ ಶ್ರೀನಿವಾಸ್ (36) ಕೊಲೆಯಾದ ದುರ್ದೈವಿ. ಕಳೆದ ಒಂದು ವರ್ಷದಿಂದ ಗಾಜನೂರಿನಲ್ಲಿ ವಾಸವಿದ್ದ ಶ್ರೀನಿವಾಸ್, ಗಾರೆ ಮೇಸ್ತ್ರಿ ಶ್ರೀಕಂಠ ಎಂಬುವವರ ಬಳಿ ಕೆಲಸ ಮಾಡುತ್ತಿದ್ದರು. ನಿತ್ಯ ಕೆಲಸ ಮುಗಿದ ನಂತರ ಮಧ್ಯಪಾನ ಮಾಡುವ ಚಟ ಹೊಂದಿದ್ದ ಶ್ರೀನಿವಾಸ್, ಬುಧವಾರ ರಾತ್ರಿ ಕೂಡ ತನ್ನ ಸ್ನೇಹಿತರಾದ ಕೃಷ್ಣಮೂರ್ತಿ (44) ಮತ್ತು ಮಾಲ್ತೇಶ್ (21) ಎಂಬುವವರ ಜೊತೆ ಸೇರಿ ಕುಡಿತದ ಪಾರ್ಟಿ ಮಾಡಿದ್ದರು. ಈ ವೇಳೆ ಮೂವರ ನಡುವೆ ಯಾವುದೋ ವಿಷಯಕ್ಕೆ ಜಗಳ ಆರಂಭವಾಗಿದೆ.

ಬೆಚ್ಚಿಬೀಳಿಸುವ ಪೈಶಾಚಿಕತೆ:

ಗಾಜನೂರಿನ ಕೃಷಿ ಪತ್ತಿನ ಸಹಕಾರ ಸಂಘದ (ಸೊಸೈಟಿ) ಆವರಣದಲ್ಲಿ ಈ ರಕ್ತಚರಿತ್ರೆ ನಡೆದಿದೆ. ಕೊಲೆಯ ಭೀಕರತೆ ಎಷ್ಟಿತ್ತೆಂದರೆ ಸ್ಥಳಕ್ಕೆ ಬಂದ ಪೊಲೀಸರೇ ಒಂದು ಕ್ಷಣ ದಂಗಾಗಿದ್ದರು. ಹಂತಕರು ಶ್ರೀನಿವಾಸ್ ಅವರ ಪ್ಯಾಂಟ್ ಬಿಚ್ಚಿ ಅಮಾನವೀಯವಾಗಿ ವರ್ತಿಸಿದ್ದಾರೆ. ಕಲ್ಲುಗಳಿಂದ ಹೊಡೆದು ಕೈಕಾಲುಗಳನ್ನು ಮುರಿದಿದ್ದಲ್ಲದೆ, ಮರ್ಮಾಂಗದ ಭಾಗಕ್ಕೆ ಹರಿತವಾದ ಆಯುಧದಿಂದ ಮನಬಂದಂತೆ ಚುಚ್ಚಿದ್ದಾರೆ. ಅಂತಿಮವಾಗಿ ತಲೆಯ ಒಂದು ಬದಿಗೆ ಭಾರಿ ಗಾತ್ರದ ಕಲ್ಲನ್ನು ಎತ್ತಿಹಾಕಿ ಪ್ರಾಣ ತೆಗೆದಿದ್ದಾರೆ.

ಪೊಲೀಸರ ತ್ವರಿತ ಕಾರ್ಯಾಚರಣೆ:

ಘಟನೆ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ (SP) ನಿಖಿಲ್ ಬಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುಂಗಾನಗರ ಠಾಣೆಯ ಇನ್ಸ್‌ಪೆಕ್ಟರ್ ಗುರುರಾಜ್ ನೇತೃತ್ವದ ತಂಡ ತನಿಖೆ ಕೈಗೊಂಡು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಕೃಷ್ಣಮೂರ್ತಿ (ಬಟ್ಟೆ ಅಂಗಡಿ ಕೆಲಸಗಾರ) ಮತ್ತು ಮಾಲ್ತೇಶ್ (ಗಾರೆ ಕೆಲಸಗಾರ) ನನ್ನು ವಶಕ್ಕೆ ಪಡೆದಿದ್ದಾರೆ. ಕುಡಿತದ ಅಮಲಿನಲ್ಲಿ ನಡೆದ ಮಾತಿನ ಚಕಮಕಿಯೇ ಈ ಘೋರ ಹತ್ಯೆಗೆ ಮೂಲ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಗಾಜನೂರಿನಲ್ಲಿ ಮಿತಿಮೀರಿದ ಮದ್ಯದ ಹಾವಳಿ?

ಈ ಭೀಕರ ಘಟನೆಯಿಂದ ಗಾಜನೂರು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಗ್ರಾಮದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳ ಹಾವಳಿ ಹೆಚ್ಚಾಗಿದ್ದು, ಕುಡುಕರ ಹಾವಳಿಯಿಂದಾಗಿ ಅಪಘಾತಗಳು ಮತ್ತು ಇಂತಹ ಕ್ರೈಂ ಪ್ರಕರಣಗಳು ಪದೇ ಪದೇ ಸಂಭವಿಸುತ್ತಿವೆ ಎಂದು ಸ್ಥಳೀಯ ನಿವಾಸಿ ಪರಶುರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರ ತಾಣವಾಗಬೇಕಿದ್ದ ಗಾಜನೂರು ಈಗ ಅಕ್ರಮ ಚಟುವಟಿಕೆಗಳ ಕೇಂದ್ರವಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಸದ್ಯ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಯ ಹಿಂದೆ ಬೇರೆ ಯಾವುದಾದರೂ ಕಾರಣಗಳಿವೆಯೇ ಅಥವಾ ಕೇವಲ ಕುಡಿತದ ಜಗಳವೇ ಎಂಬುದರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

40 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
ತೆಕ್ಕಲಕೋಟೆ ಉತ್ಖನನದಲ್ಲಿ 3ನೇ ಅಸ್ಥಿಪಂಜರ ಪತ್ತೆ; ಪ್ರಾಗೈತಿಹಾಸಿಕ ಕಾಲದ ಸಮಾಧಿ ಪದ್ದತಿ ಬಿಚ್ಚಿಟ್ಟ ಕುರುಹುಗಳು!