ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಗೆ ಸರ್ಕಾರದ ಮಲತಾಯಿ ಧೋರಣೆ?

By Manjunath NayakFirst Published Sep 21, 2022, 7:24 PM IST
Highlights

Karnataka Bayalata Academy: ಬಯಲಾಟ ಅಕಾಡೆಮಿಗೆ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಅನುದಾನವನ್ನ ನೀಡುತ್ತಿಲ್ಲ ಎಂದು ಎಂದು ಸ್ವತ: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಅಜಿತ್​ ಬಸಾಪೂರ ಹೇಳಿದ್ದಾರೆ 

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ 

ಬಾಗಲಕೋಟೆ (ಸೆ. 21): ರಾಜ್ಯದಲ್ಲಿ ವಿವಿಧ ಕಲಾಪ್ರಕಾರಗಳಿಗಾಗಿ ಸರ್ಕಾರ ಪ್ರತ್ಯೇಕ ಅಕಾಡೆಮಿಗಳನ್ನೇನೋ ಮಾಡಿದೆ, ಆದರೆ ಇವುಗಳ ಮಧ್ಯೆ ಅಕಾಡೆಮಿಗಳಲ್ಲಿಯೇ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ, ಅದರಲ್ಲೂ ಉತ್ತರ ಕರ್ನಾಟಕದಲ್ಲಿಯೇ ಕೇಂದ್ರಿಕೃತವಾಗಿ ಆರಂಭಿಸಿರುವ ಕರ್ನಾಟಕ ಬಯಲಾಟ ಅಕಾಡೆಮಿಯೂ (Karnataka Bayalata Academy) ಸಹ ತಾರತಮ್ಯಕ್ಕೊಳಗಾಗಿದೆ.  ಒಂದೆಡೆ ಉತ್ತರ ಕರ್ನಾಟಕದಲ್ಲಿಯೇ ಕೇಂದ್ರಿಕೃತವಾಗಿ ಆರಂಭವಾಗಿರೋ ಕರ್ನಾಟಕ ಬಯಲಾಟ ಅಕಾಡೆಮಿ ಕಚೇರಿ, ಅಕಾಡೆಮಿಯಲ್ಲಿ ನಿತ್ಯ ಸಂದರ್ಶನಕ್ಕೆ ಬರುವಂತಹ ಬಯಲಾಟದ ಕಲಾವಿದರು, ಇವುಗಳ ಮಧ್ಯೆ ರಾಜ್ಯ ಬಯಲಾಟ ಅಕಾಡೆಮಿಗೆ ಆಗುತ್ತಿರೋ ತಾರತಮ್ಯದ ಬಗ್ಗೆ ಅಕಾಡೆಮಿಯ ಅಧ್ಯಕ್ಷರಿಂದಲೇ ಅಪಸ್ವರ ವ್ಯಕ್ತವಾಗಿದೆ. 

ಅಂದಹಾಗೆ ಇಂಥಹವೊಂದು ಪರಿಸ್ಥಿತಿ ಎದುರಾಗಿರೋದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ನವನಗರದ ಕಲಾಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಕೇಂದ್ರ ಕಚೇರಿ ಇದ್ದು,  ರಾಜ್ಯದ 23 ಜಿಲ್ಲೆಗಳಲ್ಲಿ ಜನಪ್ರಿಯತೆಯನ್ನ ಹೊಂದಿರೋ ಬಯಲಾಟ ಕಲಾವಿದರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಕಾಡೆಮಿಯ ಕೇಂದ್ರ ಕಚೇರಿ ತೆರೆಯಲಾಗಿದೆ. 

ಆದರೆ ಇದಕ್ಕೆ ಸಿಗಬೇಕಾದ ಅಗತ್ಯತೆಗಳು ಮಾತ್ರ ಮರೀಚಿಕೆಯಾಗಿವೆ. ಮುಖ್ಯವಾಗಿ ರಾಜ್ಯದಲ್ಲಿ ಇರುವಂತಹ ಅನೇಕ ಅಕಾಡೆಮಿಗಳಿಗೆ ಹೆಚ್ಚೆಚ್ಚು ಅನುದಾನವನ್ನ ಸರ್ಕಾರ ಬಿಡುಗಡೆ ಮಾಡುತ್ತದೆ.   ದರಿಂದ ಆಯಾ ಕಲಾಪ್ರಕಾರಗಳ ಅಭಿವೃದ್ಧಿಗೂ ಸಹಕಾರವಾಗುತ್ತದೆ. ಆದ್ರೆ ಬಯಲಾಟ ಅಕಾಡೆಮಿಗೆ ಮಾತ್ರ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಅನುದಾನವನ್ನ ನೀಡುತ್ತಿಲ್ಲ.

5 ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚಿದ ಕಲಾವಿದರು: ಆರ್ಥಿಕ ಸಂಕಷ್ಟಕ್ಕೆ ಬಂದ್ ಆಗಿದ್ದ ಜಗಜ್ಯೋತಿ ಬಸವೇಶ್ವರ ಬಯಲಾಟ!

ಉಳಿದೆಲ್ಲಾ ಅಕಾಡೆಮಿಗಳಿಗೆ 100ರಷ್ಟು ಅನುದಾನ ನೀಡಿದರೆ, ನಮ್ಮ ಬಯಲಾಟ ಅಕಾಡೆಮಿಗೆ ಶೇಕಡಾ 30ರಷ್ಟು ಮಾತ್ರ ಅನುದಾನವನ್ನ ನೀಡುತ್ತಿದ್ದಾರೆ. ಇದರಿಂದ ಉಳಿದ ಅಕಾಡೆಮಿಗಳಿಗೆ ಹೋಲಿಸಿಕೊಂಡರೆ ಅನುದಾನದ ತಾರತಮ್ಯತೆ ಕಂಡು ಬರುತ್ತಿದೆ ಎಂದು ಸ್ವತ: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಅಜಿತ್​ ಬಸಾಪೂರ ಹೇಳಿದ್ದಾರೆ. 

ಶಾಲಾ ಕಾಲೇಜು ಮಟ್ಟದಲ್ಲಿ ಬಯಲಾಟ: ಇನ್ನು ಈ ಕರ್ನಾಟಕ ಬಯಲಾಟ ಅಕಾಡೆಮಿ ಅಡಿಯಲ್ಲಿ ಬರುವ ದೊಡ್ಡಾಟ, ಸಣ್ಣಾಟ, ಸೂತ್ರದಗೊಂಬೆ, ತೊಗಲಗೊಂಬೆ ಮತ್ತು  ಶ್ರೀಕೃಷ್ಣ ಪಾರಿಜಾತಗಳನ್ನ ಕಲಾವಿದರಿಗೆ ಪ್ರೋತ್ಸಾಹಿಸುವ ಮೂಲಕ ಇನ್ನಷ್ಟು  ಪ್ರಚುರಪಡಿಸಬೇಕಿದೆ,  ಇದರೊಂದಿಗೆ ವಿಶ್ವವಿದ್ಯಾಲಯ ಸೇರಿದಂತೆ ಶಾಲಾ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳನ್ನ ಸೆಳೆಯಲು ಹೆಚ್ಚೆಚ್ಚು ವಿಚಾರ ಸಂಕಿರಣ, ಕಮ್ಮಟ, ಪ್ರದರ್ಶನ, ಕಲಾವಿದರ ದಾಖಲೀಕರಣ ಮಾಡಲು ಮತ್ತು ವಿಶೇಷ ಕಾರ್ಯಕ್ರಮಗಳ ಆಯೋಜನೆಯಾಗಲು ಸರ್ಕಾರ ಹೆಚ್ಚೆಚ್ಚು ಅನುದಾನ ನೀಡಬೇಕಿದೆ.

ಉತ್ತರ ಕರ್ನಾಟಕದ ಜನಪ್ರತಿನಿಧಿಗಳಿಂದ ಬೇಕಿದೆ ಪ್ರೋತ್ಸಾಹ: ಇನ್ನೊಂದೆಡೆ ನಮ್ಮ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಸಹ ಬಯಲಾಟದ ಆಟಗಳನ್ನ  ಅಲ್ಲಗಳೆಯುತ್ತಿದ್ದಾರಂತೆ. ಇದರಿಂದ ನಾವೇ ನಮ್ಮ ಭಾಗದ ವಿಶೇಷ ಕಲೆಯನ್ನು ಅಳಿಸಿದಂತಾಗುತ್ತೇ ಹೀಗಾಗಿ ಅದನ್ನು ಬಿಟ್ಟು  ನಮ್ಮ ಜನಪ್ರತಿನಿಧಿಗಳು ಬಯಲಾಟ ಕಲಾ ಪ್ರಕಾರಗಳಿಗೆ ಹೆಚ್ಚೆಚ್ಚು ಪ್ರಾಮುಖ್ಯತೆ  ನೀಡಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕಲಾವಿದರಿಗೆ ಅವಕಾಶ ನೀಡಿ ಉತ್ತೇಜನ ನೀಡಬೇಕಿದೆ. ಈ ಮೂಲಕ ಕಲಾವಿದರ ಸಹ ಬದುಕಲು ಸಾಧ್ಯವಾಗುತ್ತದೆ ಎಂದು ಬಯಲಾಟದ ಕಲಾವಿದರಾದ ಗದಗಯ್ಯ ಹಿರೇಮಠ ಹೇಳಿದ್ದಾರೆ. 

ಇವರು ಖಾಕಿ ತೊಟ್ಟರೆ ಖಡಕ್ ಅಧಿಕಾರಿ; ಬಣ್ಣ ಹಚ್ಚಿದ್ರೆ ನುರಿತ ಕಲಾವಿದ! ಬಹುಮುಖ ಪ್ರತಿಭೆಯ ಪೊಲೀಸ್ ಅಧಿಕಾರಿ

ಉತ್ತರ ಕರ್ನಾಟಕದಲ್ಲಿ ಕೇಂದ್ರ ಕಚೇರಿ: ಸರ್ಕಾರದ ನಿರ್ಲಕ್ಷ ಕ್ಕೆ ಕಾರಣ?:  ಇಂತಹವೊಂದು ಚಿಂತನೆ ಬಯಲಾಟದ ಕಲಾವಿದರನ್ಬು ಬಾಧಿಸುತ್ತಿದೆ. ಯಾಕೆಂದರೆ ಉಳಿದ ಅಕಾಡೆಮಿಗಳ ಕೇಂದ್ರ ಕಚೇರಿ ಬೆಂಗಳೂರಲ್ಲಿದ್ದು, ಅಗತ್ಯ ಬಿದ್ದಾಗಲೆಲ್ಲಾ ಸಿಎಂ ಮತ್ತು ಸಚಿವರಾದಿಯಾಗಿ ಎಲ್ಲರನ್ನ ಭೇಟಿ, ಹೆಚ್ಚಿನ ಅನುದಾನ ಸಹಿತ ಸೌಲಭ್ಯ ಪಡೆಯುತ್ತಾರೆ. ಆದರೆ ಬಯಲಾಟ ಅಕಾಡೆಮಿ ಪರಿಸ್ಥಿತಿ ಕೇಳೋರಿಲ್ಲ. ಹೀಗಾಗಿ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಬಯಲಾಟಕ್ಕೆ ಹೆಚ್ಚೆಚ್ಚು ಅನುದಾನ ನೀಡುವಂತೆ ಮಾಡಿ ಬಯಲಾಟ ಕಲಾಪ್ರಕಾರದ ಪೋಷಣೆಗೆ ಮುಂದಾಗಬೇಕಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಉಳಿದ ಅಕಾಡೆಮಿಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ಬಯಲಾಟ ಅಕಾಡೆಮಿಗೆ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಕೂಡಲೇ ಈ ಸಂಭಂದ ಹೆಚ್ಚು ಅನುದಾನ ಬಿಡುಗಡೆ ಮಾಡಿ ಬಯಲಾಟಕ್ಕೆ ಉತ್ತೇಜನ ನೀಡಬೇಕು ಮತ್ತು ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಸಹ ಬೆಂಬಲಿಸುವಂತಾಗಬೇಕೆಂದು ಬಯಲಾಟ ಕಲಾವಿದರ ಕಳಕಳಿಯಾಗಿದೆ.

click me!