ಉಡುಪಿ: ಹಿಂದೂ ಸಂಘಟನೆ 25 ಕಾರ್ಯಕರ್ತರಿಗೆ ಟಿಕೆಟ್ ನೀಡಿ: ಬಿಜೆಪಿಗೆ ಮುತಾಲಿಕ್ ಆಗ್ರಹ

Published : Sep 21, 2022, 06:44 PM IST
ಉಡುಪಿ: ಹಿಂದೂ ಸಂಘಟನೆ 25 ಕಾರ್ಯಕರ್ತರಿಗೆ ಟಿಕೆಟ್ ನೀಡಿ:  ಬಿಜೆಪಿಗೆ ಮುತಾಲಿಕ್ ಆಗ್ರಹ

ಸಾರಾಂಶ

Pramod Muthalik in Udupi: ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಮುಂಬರುವ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಟಿಕೆಟ್ ನೀಡಲೇಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ

ಉಡುಪಿ (ಸೆ. 21):  ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ (Hindu Karyakartaru) ಮುಂಬರುವ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಟಿಕೆಟ್ ನೀಡಲೇಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಆಗ್ರಹಿಸಿದ್ದಾರೆ. ಈ ಕುರಿತು ಚರ್ಚೆ ನಡೆಸಲು ಇಂದು ಉಡುಪಿಯ ಪೇಜಾವರ ಮಠಕ್ಕೆ (Pejawar Mutt) ಆಗಮಿಸಿದ್ದ ಮುತಾಲಿಕ್, ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು. ಈವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್, ಈ ಬಾರಿಯ ರಾಜ್ಯ ಚುನಾವಣೆಯಲ್ಲಿ 25 ಸ್ಥಾನ ಹಿಂದೂ ಕಾರ್ಯಕರ್ತರಿಗೆ ನೀಡಬೇಕು ಎಂದು ಭಾರತೀಯ ಜನತಾ ಪಕ್ಷವನ್ನು (BJP) ಆಗ್ರಹಿಸಿದರು. 

ಕಾರ್ಯಕರ್ತರು ಶಾಸಕರಾಗಿ (MLA) ಆಯ್ಕೆಯಾದರೆ ಹಿಂದುತ್ವದ (Hindutva) ಬಗ್ಗೆ ಧ್ವನಿ ಎತ್ತುತ್ತಾರೆ. ಹಿಂದುತ್ವಕ್ಕೆ ಆದ್ಯತೆ ನೀಡುತ್ತಾರೆ.ಬಿಜೆಪಿಯಲ್ಲಿ ಹಿಂದುತ್ವದ ಕಾಳಜಿಯ ಕೊರತೆ ಇದೆ ಈ ತೊಂದರೆ ನಿವಾರಿಸಲು ಈ 25 ಮಂದಿಯಿಂದ ಸಾಧ್ಯ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಆಗ್ರಹಿಸಿದರು. 

25 ಮಂದಿ ಕಾರ್ಯಕರ್ತರಿಗೆ ಟಿಕೆಟ್ ಕೊಡಲೇಬೇಕು ಎಂದು ಹಕ್ಕೊತ್ತಾಯ ಮಾಡುತ್ತೇನೆ. ಬಿಜೆಪಿ ಟಿಕೆಟ್ ಕೇಳುವುದು ನಮ್ಮ ಹಕ್ಕು. ಬಿಜೆಪಿ ಪಕ್ಷದ ಸಲುವಾಗಿ ನಾವು ಬೆವರು ರಕ್ತ ಸುರಿಸಿದ್ದೇವೆ. ಕಾರ್ಯಕರ್ತರ ಈ ಬೇಡಿಕೆಯನ್ನು ಪಕ್ಷ ಪೂರೈಸಲೇಬೇಕು.ಈ ಬಗ್ಗೆ ಪೇಜಾವರ ಶ್ರೀಗಳ ಗಮನ ಸೆಳೆದಿದ್ದೇನೆ. ಸಂಬಂಧಪಟ್ಟವರ ಜೊತೆ ಮಾತನಾಡುವುದಾಗಿ ಶ್ರೀಗಳು ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದರು.

ಉಡುಪಿ: ದಲಿತ ಬಾಲಕನಿಗೆ ಬಹಿಷ್ಕಾರ: ಪೇಜಾವರ ಶ್ರೀ ಕಳವಳ

ಬಿಜೆಪಿ ಟಕೆಟ್‌ ಕೊಡುವ ವಿಶ್ವಾಸ:  ಬಿಜೆಪಿಗೆ ಹೊರತಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ನಿರ್ಧಾರ ಮಾಡಿಲ್ಲ. ಬಿಜೆಪಿಯವರು ಟಿಕೆಟ್ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಟಿಕೆಟ್ ಕೊಡದೆ ಇದ್ದರೆ ಆಯ್ತು. ನಿಮ್ಮ ಹಣೆಬರಹ ಏನಿದಿಯೋ ಅನುಭವಿಸಿ ಅಂತೇವೆ ಅಷ್ಟೇ. ಇತ್ತೀಚೆಗೆ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ರಾಜ್ಯದ ಎಲ್ಲರಿಗೂ ಅಸಮಾಧಾನ ಉಂಟಾಗಿದೆ.

ಈ ಅಸಮಾಧಾನವನ್ನು ಸರಿಯಾದ ನಿಟ್ಟಿನಲ್ಲಿ ತೆಗೆದುಕೊಂಡು ಹೋಗಲು ನಾವು 25 ಮಂದಿಗೆ ಅವಕಾಶ ಕೇಳುತ್ತಿದ್ದೇವೆ. ನಿಮಗೆ ಅಧಿಕಾರ ನಡೆಸಲು ಬೇಕಾದಷ್ಟು ಸೀಟು ಗೆಲ್ಲಿಸಿ ಕೊಡುವ ಸಾಮರ್ಥ್ಯ ಹಿಂದೂ ಕಾರ್ಯಕರ್ತರಿಗೆ ಇದೆ. ಇದೇ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು, ಇಂತಹ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲ್ಲ. ಆದರೆ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.

ದಲಿತ ಬಾಲಕನಿಗೆ ಬಹಿಷ್ಕಾರ ಹಾಕಿದವರನ್ನು ದಂಡಿಸಿ: ಕೋಲಾರದ ಮಾಲೂರಿನಲ್ಲಿ ದಲಿತ ಬಾಲಕನಿಗೆ ಬಹಿಷ್ಕಾರ, ದಂಡ ವಿಚಾರವಾಗಿ ಮುತಾಲಿಕ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ದಲಿತ ಬಾಲಕನಿಗೆ ಹಿಂಸೆ ನೀಡಿರುವುದು, ದಂಡ ಹಾಕಿರುವುದು ಅಕ್ಷಮ್ಯ ಅಪರಾಧ. ದೇವರಿಗೆ ಮಡಿ ಮೈಲಿಗೆ ಇರೋದಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದ ಬಳಿಕವೂ ದಲಿತರಿಗೆ ಈ ರೀತಿ ಕ್ರೌರ್ಯ ಹಿಂಸೆ ನೀಡುವುದು ಸರಿಯಲ್ಲ.

ದಲಿತ ಬಾಲಕನಿಗೆ ದಂಡ ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಂಡು ಶಿಕ್ಷಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಶ್ರೀರಾಮ ಸೇನೆಯ ಕಾರ್ಯಕರ್ತರು ಆ ಗ್ರಾಮಕ್ಕೆ ಹೋಗುತ್ತಾರೆ. ದಂಡ ಹಾಕಿದವರ ವಿರುದ್ಧ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾರೆ. ಬೆಂಗಳೂರಿಗೆ ತೆರಳಿದ ಬಳಿಕ ನಾನು ಕೂಡ ಸ್ಥಳಕ್ಕೆ ಭೇಟಿ ನೀಡುತ್ತೇನೆ. ದಂಡ ಹಾಕಿದವರು ಕ್ಷಮೆ ಕೇಳಬೇಕು ಮತ್ತು ದಂಡದ ಹಣ ವಾಪಾಸು ನೀಡಬೇಕು ಎಂದು ಒತ್ತಾಯಿಸಿದರು.

ಪ್ರವೀಣ್‌ ಕೊಲೆ ನಂತರವೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ: ಪ್ರಮೋದ್‌ ಮುತಾಲಿಕ್‌

ಶಿವಮೊಗ್ಗದಲ್ಲಿ ಉಗ್ರರು: ಮೊದಲೇ ದಾಖಲೆ ಕೊಟ್ಟಿದ್ದೆ:  ಶಿವಮೊಗ್ಗ ಶಂಕಿತ ಉಗ್ರರ ಬಂಧನ ವಿಚಾರ ವಾಗಿ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಯಾಸೀನ್ ಭಟ್ಕಳ್ ಶಿವಮೊಗ್ಗಕ್ಕೆ ಬಂದು ಹೋದ ಬಗ್ಗೆ ಆರು ವರ್ಷದ ಹಿಂದೇನೆ ನಾನು ದಾಖಲೆ ಕೊಟ್ಟಿದ್ದೆ. ಇದೇ ಬಿಜೆಪಿ ಸರಕಾರ ಅದನ್ನು ನಿರ್ಲಕ್ಷ ಮಾಡಿತ್ತು. ಇನ್ನೊಮ್ಮೆ ದಾಖಲೆ ಸಹಿತ ನಾನು ಸುದ್ದಿಗೋಷ್ಠಿ ಮಾಡುತ್ತೇನೆ. ಅಂದು ನಾನು ಮಾಡಿದ ಆರೋಪಕ್ಕೂ ಈಗಿನ ಘಟನೆಗೂ ಏನು ಸಂಬಂಧವಿದೆ ಎಂದು ಬಹಿರಂಗಪಡಿಸುತ್ತೇನೆ. ಗೃಹ ಸಚಿವರನ್ನು ಭೇಟಿಯಾಗಿ ಅವರ ನಿರ್ಲಕ್ಷದ ಬಗ್ಗೆ ಗಮನ ಸೆಳೆಯುತ್ತೇನೆ ಎಂದರು.

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!