ಬಂಡೆಗಲ್ಲು ಒಡೆದು ಕೃಷಿ ಭೂಮಿಯನ್ನಾಗಿ ಮಾಡಿದ ಛಲದಂಕ ಮಹಿಳೆ: ರೈತರಿಗೆ ಮಾದರಿಯಾದ ಅನುಸೂಯಾ..!

By Girish GoudarFirst Published Apr 28, 2022, 10:03 AM IST
Highlights

*  ಸಂಪೂರ್ಣ ಬಂಡೆಗಲ್ಲು ಇದ್ದ 4 ಎಕರೆ ಭೂಮಿಯನ್ನ ನೀರಾವರಿ ಜಮೀನನ್ನಾಗಿಸಿದ ರೈತ ಮಹಿಳೆ
*  ನಿರಂತರ 4 ವರ್ಷಗಳ ಕಾಲ 3 ಲಕ್ಷ ಖರ್ಚು ಮಾಡಿ ಬಂಡೆಗಲ್ಲನ ಹೊಲವನ್ನ ಫಲವತ್ತಾಗಿಸಿದ ಮಹಿಳೆ
*  ಮಹಿಳೆ ಸಾಧನೆಗೆ ಅರಸಿ ಬಂದ ಪ್ರಶಸ್ತಿಗಳು
 

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಏ.28): ಅದು ಗುಡ್ಡಕ್ಕೆ ಹೊಂದಿಕೊಂಡಿದ್ದ ಜಮೀನು(Land), ಅದರಲ್ಲಿ ಎಲ್ಲಿ ನೋಡಿದರೂ ಬರೀ ಬಂಡೆಗಲ್ಲೇ ಬಂಡೆಗಲ್ಲು. ಇಂತಹ ಬಂಡೆಗಲ್ಲುಗಳಿದ್ದ(Rock0 ಜಮೀನನ್ನ ಹೇಗಾದರೂ ಮಾಡಿ ಫಲವತ್ತಾದ ಜಮೀನು ಮಾಡಬೇಕೆನ್ನುವ ಛಲದಿಂದ ಮಹಿಳೆಯೊಬ್ಬಳು ತಮ್ಮ ಕುಟುಂಬ ಸಮೇತ ಸಿದ್ದವಾಗಿದ್ದರು. ಆದರೆ ಬಹುತೇಕರು ಮಾತ್ರ ಇವರ ನಿರ್ಧಾರಕ್ಕೆ ಅಚ್ಚರಿಗೊಂಡು ಇದು ಆಗದಿರೋ ಕೆಲಸ ಅಂತ ಮೂಗು ಮುರಿದಿದ್ದರು. ಆದರೆ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಅಂತ ಹೋಗಿದ್ದ ರೈತ ಮಹಿಳೆಗೆ(Farmer Woman) ಮುಂದೆ ಆಗಿದ್ದೇ ಬೇರೆ? ಅದೇನಾಯ್ತು? ಈ ಕುರಿತ ವರದಿ ಇಲ್ಲಿದೆ. 

ಬಂಡೆಗಲ್ಲುಗಳಿದ್ದ ಜಮೀನಾಯ್ತು ಹಸಿರು ಹೊತ್ತ ಭೂಮಿ: ಬಂಗಾರದಂತಹ ಬೆಳೆ ಬೆಳೆದ ರೈತ ಸಾಧಕಿ

ಆ ಜಮೀನಿನಲ್ಲಿ ಬಂಡೆಗಲ್ಲುಗಳೋ ಬಂಡೆಗಲ್ಲಗಳು ಇದ್ದವು, ಆ ಮಹಿಳೆ ಅಲ್ಲಿರುವ ಬಂಡೆಗಲ್ಲಗಳನ್ನ ಒಡೆಯಿಸಿ ಫಲವತ್ತಾದ ಹೊಲವನ್ನ ರೂಪಿಸಿ ಸೈ ಎನಿಸಿಕೊಂಡಿದ್ದರು, ಹೀಗಾಗಿ ಮಹಿಳೆಯ ಕೆಚ್ಚೆದೆಯಿಂದ ಮುನ್ನಡೆದ ಪರಿಣಾಮ ಬಂಡೆಗಲ್ಲನಲ್ಲಿದ್ದ ಹೊಲ ಗದ್ದೆಗಳಲ್ಲಿ ಈಗ ಎಲ್ಲಿ ನೋಡಿದರೂ ಸಾಕು ವಿವಿಧ ಬೆಳೆಗಳು ಮತ್ತು ಹೂ, ಹಣ್ಣು ಕಾಯಿ ತರಕಾರಿ ಗಿಡಗಳು ಕಾಣ ಸಿಗುತ್ತಿವೆ. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ(Bagalkot) ಜಿಲ್ಲೆಯ ನೀರಲಕೇರಿ ಗ್ರಾಮದ ಕಾಖಂಡಕಿ ಅವರ ಹೊಲದಲ್ಲಿ

Hubli Violence ಹುಬ್ಬಳ್ಳಿ ಗಲಭೆಕೋರರ ವಿರುದ್ಧ ಕೋಕಾ ದಾಖಲಿಸಿ, ಮುತಾಲಿಕ್ ಆಗ್ರಹ

ಹೌದು, ಕೆಚ್ಚೆದೆಯ ಈ ಸಾಧಕಿ ಮಹಿಳೆಯ ಹೆಸರು ಅನಸೂಯಾ ಕಾಖಂಡಕಿ(Anusuya Kakhandaki). ಓದಿದ್ದು ಎಸ್​ಎಸ್​ಎಲ್​ಸಿ(SSLC) ಆಗಿದ್ರೂ ಬಾಲ್ಯದಿಂದಲೇ ಕೃಷಿ ಬಗ್ಗೆ ಇನ್ನಿಲ್ಲದ ಪ್ರೇಮತ್ವ ಬೆಳೆಸಿಕೊಂಡು ಬಂದವರು. ಪತಿ ಶ್ರೀಶೈಲ ವೃತ್ತಿಯಲ್ಲಿ ಪೋಲಿಸ್​. ಆದರೆ ಪತ್ನಿ ಅನುಸೂಯ ಮಾತ್ರ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಬಂದವರು. ಹೀಗಿರುವಾಗ ಇವರ ಕಣ್ಣಿಗೆ ಬಿದ್ದಿದ್ದ ಗುಡ್ಡಕ್ಕೆ ಹೊಂದಿಕೊಂಡು ಇದ್ದ 4 ಎಕರೆ ಬಂಡೆಗಲ್ಲುಗಳು ಇದ್ದ ಜಮೀನು. ರೈತ ಮಹಿಳೆ ಅನುಸುಯಾ ಈ ಸಂದರ್ಭದಲ್ಲಿ ಹೇಗಾದರೂ ಮಾಡಿ ಈ ಜಮೀನು ಉಳುಮೆ ಮಾಡುವಂತಾಗಬೇಕೆಂಬ ಹಠತೊಟ್ಟರು. ಆದರೆ ಇವರ ಸಾಹಸಕ್ಕೆ ಮುಂದಾಗಿದ್ದನ್ನ ಕಂಡ ಕೆಲವರು ಇದು ಆಗದಿರೋ ಕೆಲಸ ಅಂತ ವ್ಯಂಗ್ಯವಾಡಿದ್ರು. ಆದರೂ ಛಲದೊಟ್ಟ ರೈತ ಮಹಿಳೆ ಅನುಸೂಯಾ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎನ್ನುವ  ಅಣ್ಣಾವ್ರ ಹಾಡಿನಂತೆ ಸಾಹಸಕ್ಕೆ ಮುಂದಾದ್ರು.

ಬರೊಬ್ಬರಿ 4 ವರ್ಷಗಳ ಕಾಲ 3 ಲಕ್ಷ ರೂಪಾಯಿ ಖರ್ಚು ಮಾಡಿ ಜೆಸಿಬಿ ಮೂಲಕ ಎಲ್ಲ ಬಂಡೆಗಲ್ಲನ ಒಡೆಸೋಕೆ ಮುಂದಾದರು. ಹೀಗೆ ಒಡೆದ ಕಲ್ಲನ್ನ ಸಾಗಿಸಿ ಪಕ್ಕದಲ್ಲಿದ್ದ ಕೆರೆಯ ಮಣ್ಣನ್ನ ಈ ಜಮೀನಿಗೆ ಟ್ರ್ಯಾಕ್ಟರ್​ ಮೂಲಕ ಹಾಕಿಸುವ ಕೆಲಸ ಮಾಡಿದರು. ಇದರ ಫಲವಾಗಿ ಇಂದು 4 ಎಕರೆ ಜಮೀನು ಸಂಪೂರ್ಣ ಫಲವತ್ತತೆಯಿಂದ ಕೂಡಿದ್ದು, ಎಲ್ಲವೂ ನೀರಾವರಿಯಾಗಿ ನೂರಾರು ಗಿಡ ಮರಗಳು ಸೇರಿದಂತೆ ಬಂಡೆಗಲ್ಲಗಳಿದ್ದ ಜಮೀನು ಈಗ ಹಸಿರು ಸಿರಿಯಿಂದ ಕಂಗೊಳಿಸುತ್ತಿದೆ. ಇದರಿಂದ ತಮಗೆ ಸಂತಸವಾಗಿದೆ ಅಂದ್ರು ರೈತ ಮಹಿಳೆ ಅನಸೂಯಾ.

4 ಎಕರೆ ಪ್ರದೇಶ ಈಗ ನೀರಾವರಿ

ಇನ್ನು ಜಮೀನು ಹದಗೊಳಿಸಿ ನೀರಾವರಿ(Irrigation) ಮಾಡಿದ್ದೇ ತಡ 4 ಎಕರೆ ಪ್ರದೇಶದಲ್ಲಿ ಜನರು ಮೂಗಿನ ಮೇಲೆ ಬೆರೆಳಿಟ್ಟು ನೋಡಿಕೊಳ್ಳಬೇಕು ಅಂತಹ ಮಟ್ಟಿಗೆ ತಂದು ನಿಲ್ಲಿಸಿದ್ದಾರೆ. ಈ ಜಮೀನಿನಲ್ಲಿ ಈಗ 250 ಚಿಕ್ಕೂ, 50 ಪೇರಲ, 200 ತೆಂಗು, 800 ಹೆಬ್ಬೇವು, 800 ಸಾಗವಾಣಿ ಮರಗಳು, 60 ಕರಿಮೇವು ಗಿಡ , ನಾನಾ ನಮೂನೆಯ ಕಾಯಿಪಲ್ಯೆ ಸಹಿತ ಕಬ್ಬು ಸೇರಿದಂತೆ ಎಲ್ಲಿ ನೋಡಿದರೂ ಹಸಿರು ಕಾಣುವ ರೀತಿಯಲ್ಲಿ ಬೆಳೆಗಳು, ಹೂ ಹಣ್ಣಿನ ಗಿಡಗಳು ಬೆಳೆದು ನಿಂತಿವೆ. 

ಅಕ್ಷಯ ತೃತೀಯದಂದು ಹಿಂದೂ ಅಂಗಡಿಗಳಲ್ಲೇ ಚಿನ್ನ ಖರೀದಿಸಿ, ಮುಸ್ಲಿಂ ವರ್ತಕರ ವಿರುದ್ಧ ಅಭಿಯಾನ!

ಸಾಧಕಿ ರೈತ ಮಹಿಳೆ ಅನುಸೂಯಾಗೆ ಒಲಿದ ಬಂದ ಪ್ರಶಸ್ತಿಗಳು

ಇವುಗಳ ಮಧ್ಯೆ ಈ ರೀತಿಯ ಮಾದರಿ ರೈತ ಮಹಿಳೆಯಾಗಿ ಹೊರ ಹೊಮ್ಮಿದ ಅನಸೂಯಾಗೆ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ, ವಿವಿಧ ಪುರಸ್ಕಾರ, ಪ್ರಶಸ್ತಿ(Awards) ನೀಡಿದ್ದು ಅವುಗಳಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಯಿಂದ ಕೊಡಮಾಡುವ ಕೃಷ್ಣಾ ಒಡಲಿನ ಸಾಧಕಿ ಪ್ರಶಸ್ತಿ, ಧಾರವಾಡ ಕೃಷಿ ವಿವಿಯಿಂದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ, ಸೂಪರ್ ಸ್ಟಾರ್ ಮಹಿಳೆ ಪ್ರಶಸ್ತಿ, ಕೃಷಿ ಇಲಾಖೆಯಿಂದ(Department of Agriculture) ಜಿಲ್ಲಾ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಇವರ ಸಾಧನೆ ಈಗ ಇತರರಿಗೆ ಮಾದರಿಯಾಗಿದೆ

ಒಟ್ಟಿನಲ್ಲಿ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎನ್ನುವಂತೆ  ಇಂದು ಬಾಗಲಕೋಟೆ ಜಿಲ್ಲೆಯ ನೀರಲಕೇರಿ ಗ್ರಾಮದ ಸಾಧಕಿ ರೈತ ಮಹಿಳೆ ಅನಸೂಯಾ ಛಲದಿಂದ ಸಾಧನೆ ಮಾಡಿದ್ದು, ಇದೀಗ ಇತರ ರೈತರಿಗೆ ಮಾದರಿಯಾದಂತಾಗಿದೆ.
 

click me!