ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶಿರೂರು ಮಠದ ಉತ್ತರಾಧಿಕಾರಿ

By Kannadaprabha NewsFirst Published Apr 22, 2021, 8:47 AM IST
Highlights

ಶಿರೂರು ಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿರುವ ಅನಿರುದ್ಧ ಸರಳತ್ತಾಯ ನೇಮಕವಾಗಿದೆ. 

 ಉಡುಪಿ (ಏ.22):  ಇಲ್ಲಿನ ಅಷ್ಟಮಠಗಳಲ್ಲೊಂದಾಗಿರುವ ಶಿರೂರು ಮಠಕ್ಕೆ ಹದಿನಾರು ವರ್ಷದ ಅನಿರುದ್ಧ ಸರಳತ್ತಾಯ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ.

ಶಿರೂರು ಮಠದ 32ನೇ ಪೀಠಾಧಿಕಾರಿಯಾಗಲಿರುವ ಅನಿರುದ್ಧ ಅವರ ಸನ್ಯಾಸಾಶ್ರಮ ಸ್ವೀಕಾರ ಮತ್ತು ಪಟ್ಟಾಭಿಷೇಕ ಕಾರ್ಯಕ್ರಮಗಳು ಮೇ 13 ಮತ್ತು 14ರಂದು ನಡೆಯಲಿದೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ಬುಧವಾರ ಶಿರೂರು ಮೂಲಮಠದಲ್ಲಿ ಘೋಷಿಸಿದ್ದಾರೆ.

ಮೂಲತಃ ಧರ್ಮಸ್ಥಳದ ಡಾ. ಉದಯ ಸರಳತ್ತಾಯ ಮತ್ತು ಶ್ರೀವಿದ್ಯಾ ಸರಳತ್ತಾಯ ದಂಪತಿಯ ಪುತ್ರರಾದ ಅನಿರುದ್ಧ ಅವರಿಗೆ ಸನ್ಯಾಸಾಶ್ರಮದ ನಂತರ ಉತ್ತರ ಕನ್ನಡ ಜಿಲ್ಲೆ ಸೋಂದಾದಲ್ಲಿರುವ ಗುರುಕುಲದಲ್ಲಿ ವಿದ್ವಾಂಸರಿಂದ ಉನ್ನತ ವೇದಾಂತ ಅಧ್ಯಯನಕ್ಕೆ ವ್ಯವಸ್ಥೆ ಮಾಡಿಸಲಾಗುತ್ತದೆ ಎಂದು ಸೋದೆ ಶ್ರೀಗಳು ಹೇಳಿದ್ದಾರೆ. ಅನಿರುದ್ಧ ಜಾತಕ ಪರಿಶೀಲಿಸಿದ್ದೇವೆ. ಸಂನ್ಯಾಸಯೋಗ ಮತ್ತು ಪೀಠಾಧಿಪತಿ ಯೋಗಗಳೆರಡೂ ಇದ್ದವು. ನಂತರ 2 ವರ್ಷ ಕಾಲ ಆತನ ಮನೋಧರ್ಮ, ವೇದಾಧ್ಯಯದ ಆಸಕ್ತಿ, ವೈರಾಗ್ಯಗಳ ಬಗ್ಗೆ ಪರೀಕ್ಷೆಗಳನ್ನು ಮಾಡಿದ್ದೇವೆ. ಅವುಗಳೆಲ್ಲದರಲ್ಲಿ ಅವರು ತೇರ್ಗಡೆಯಾಗಿದ್ದಾರೆ ಎಂದರು.

ಶಿರೂರು ಮಠದಲ್ಲಿ ಮಹತ್ವದ ಬೆಳವಣಿಗೆ : ಭಕ್ತ ಸಮಿತಿ ವಿರೋಧ .

ನವೋದಯ ಪಬ್ಲಿಕ್‌ ಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ

ಅನಿರುದ್ಧ ಪ್ರಸ್ತುತ ಉಡುಪಿಯ ನವೋದಯ ಪಬ್ಲಿಕ್‌ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಅನಿರುದ್ಧ ಅವರು ವಿದ್ವಾಂಸರಾದ ತಂದೆ ಡಾ.ಉದಯ ಸರಳತ್ತಾಯ ಅವರಿಂದ ಸಂಸ್ಕೃತಾಭ್ಯಾಸ, ವೇದಾಭ್ಯಾಸ, ಯುಕ್ತಿಮಲ್ಲಿಕಾ, ತಾತ್ವಪರ್ಯ ನಿರ್ಣಯ ಗ್ರಂಥಗಳ ಅಧ್ಯಯನ ನಡೆಸುತ್ತಿದ್ದಾರೆ. ತನಗೆ ಮೊದಲಿನಿಂದಲೂ ಉಡುಪಿ ಕೃಷ್ಣನ ಪೂಜೆ ಮಾಡಬೇಕೆಂಬ ಆಸೆ ಇತ್ತು, ಉಡುಪಿ ಕೃಷ್ಣನ ಪೂಜೆ ಮಾಡುವ ಅಧಿಕಾರ ಅಷ್ಟಮಠದ ಯತಿಗಳಿಗೆ ಮಾತ್ರ ಇದೆ. ಶಿರೂರು ಮಠದಲ್ಲಿ ಯತಿಗಳ ಸ್ಥಾನ ಖಾಲಿ ಇತ್ತು. ಆದ್ದರಿಂದ ನಾನು ಶಿರೂರು ಮಠದ ಯತಿಯಾಗುತ್ತೇನೆ ಎಂದು ತಂದೆಯವರಲ್ಲಿ ಕೇಳಿದೆ, ಅವರು ಸೋದೆ ಮಠಾದೀಶರಲ್ಲಿ ಕೇಳಿದರು, ಸೋದೆ ಶ್ರೀಗಳು ನನ್ನ ಜಾತಕ ವಿಮರ್ಶೆ ಮಾಡಿಸಿ ಯತಿಯನ್ನಾಗಿ ಆರಿಸಿದ್ದಾರೆ. ನನಗೆ ಬಹಳ ಸಂತೋಷವಾಗಿದೆ ಎಂದು ಅನಿರುದ್ಧ ಹೇಳಿದರು.

ಶಿರೂರು ಮಠದಲ್ಲಿ ಮಹತ್ವದ ಬೆಳವಣಿಗೆ : ಭಕ್ತ ಸಮಿತಿ ವಿರೋಧ ...

ತಮ್ಮ ಏಕೈಕ ಮಗ ಅನಿರುದ್ಧನ ಜಾತಕದಲ್ಲಿ ಆತ ಸಂನ್ಯಾಸಿಯಾಗುವ ಯೋಗ ಇರವುದು 3 ವರ್ಷದ ಹಿಂದೆಯೇ ಗೊತ್ತಾಗಿತ್ತು. ಆವಾಗಿನಿಂದಲೇ ಮಾನಸಿಕವಾಗಿ ಸಿದ್ಧರಾಗಿದ್ದೆವು. ಸಂತಸದಿಂದಲೇ ಒಪ್ಪಿದ್ದೇವೆ ಎಂದು ಪೋಷಕರೂ ತಿಳಿಸಿದ್ದಾರೆ.

ಉಡುಪಿ ಶಿರೂರು ಮಠದ ಭಾವಿ ಯತಿಗಳ ಸಂನ್ಯಾಸಾಶ್ರಮ ಸ್ವೀಕಾರ ..

ಅನಿರುದ್ಧರಿಗೆ ಇನ್ನೂ 16 ವರ್ಷ, ಬಾಲಸಂನ್ಯಾಸ ಸರಿಯಲ್ಲ ಎಂಬ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಬಾಲಸಂನ್ಯಾಸ ಎಂಬುದು ಕೃಷ್ಣಮಠದ ಪರಂಪರೆಯಲ್ಲಿಯೇ ಇದೆ. ನಾನೂ 15 ವರ್ಷದನಿದ್ದಾಗಲೇ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ್ದೇನೆ. ಅನಿರುದ್ಧನ ಸಂನ್ಯಸಾಶ್ರಮಕ್ಕೆ ಉಡುಪಿಯ ಇತರ 7 ಮಠಾಧೀಶರ ಒಪ್ಪಿಗೆ ಇದೆ. ಶಾಸ್ತ್ರಗಳಲ್ಲೂ ಬಾಲಸಂನ್ಯಾಸಕ್ಕೆ ವಿರೋಧ ಇಲ್ಲ ಎಂದು ಹೇಳಿದರು.

 ತಮ್ಮ ಏಕೈಕ ಮಗ ಅನಿರುದ್ಧನ ಜಾತಕದಲ್ಲಿ ಆತ ಸಂನ್ಯಾಸಿಯಾಗುವ ಯೋಗ ಇರವುದು 3 ವರ್ಷದ ಹಿಂದೆಯೇ ಗೊತ್ತಾಗಿತ್ತು. ಆತನ ಜಾತಕವನ್ನು ಕಾಶಿಗೆ, ಕೇರಳಕ್ಕೆ ಕಳುಹಿಸಿ ಪರೀಕ್ಷಿಸಿದಾಗಲೂ ಆತನಿಗೆ ಮಠಾಧಿಪತಿಯಾಗುವ ಯೋಗ ಇದೆ ಅಂತಲೇ ಹೇಳಿದ್ದರು. ಆವಾಗಿನಿಂದಲೇ ತಾವು ಮಾನಸಿಕವಾಗಿ ಸಿದ್ಧರಾಗಿದ್ದೆವು. ಅದಕ್ಕಾಗಿ ಆತನಿಗೆ ವೇದಾಧ್ಯಾಯನ ಮಾಡಿಸುತ್ತಿದ್ದೇವೆ. ಮಕ್ಕಳ ಇಷ್ಟವೇ ನಮ್ಮ ಇಷ್ಟ, ಅಲ್ಲದೆ ಆತನಿಗೆ ಅದೇ ಯೋಗವಾದ್ದರಿಂದ ತಾವು ವಿರೋಧಿಸಲಿಲ್ಲ. ಸಂತಸದಿಂದಲೇ ಒಪ್ಪಿದ್ದೇವೆ.

-ಅನಿರುದ್ಧ ತಂದೆ ಉದಯ, ತಾಯಿ ಶ್ರೀವಿದ್ಯಾ

click me!