ಸ್ಕ್ಯಾನಿಂಗ್ ವೇಳೆ ವೈದ್ಯನಿಂದ ಮಹಿಳೆಗೆ ಲೈಂಗಿಕ ಕಿರುಕುಳ, ಇನ್ಪೆಕ್ಟರ್ ಅಮಾನತಿಗೆ ರೊಚ್ಚಿಗೆದ್ದ ಆನೇಕಲ್ ಜನ!

Published : Nov 19, 2025, 01:14 PM IST
 Anekal Radiologist Assault Case

ಸಾರಾಂಶ

ಆನೇಕಲ್‌ನ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ರೆಡಿಯಾಲಜಿಸ್ಟ್‌ನಿಂದ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಯನ್ನು ರಕ್ಷಿಸಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.  

ಆನೇಕಲ್ : ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಪ್ಲಾಸ್ಮಾ ಮೆಡಿನೋಸ್ಟಿಕ್ಸ್ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಸ್ಕ್ಯಾನಿಂಗ್ ವೇಳೆ ರೆಡಿಯಾಲಜಿಸ್ಟ್ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಜನತೆ ಆಕ್ರೋಶ ವ್ಯಕ್ತಪಡಿಸಿ ರಸ್ತೆಗೆ ಇಳಿದಿದ್ದಾರೆ. ಆರೋಪಿಯನ್ನು ರಕ್ಷಿಸಲು ಯತ್ನಿಸಿದ ಆರೋಪದ ಮೇಲೆ ಆನೇಕಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ವಿರುದ್ಧವೂ ತೀವ್ರ ಪ್ರತಿಭಟನೆ ನಡೆಸಲಾಗುತ್ತಿದೆ.

ಕರವೇ ಶಿವರಾಮೇಗೌಡ ಬಣದಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ಪ್ರಕರಣ ಬೆಳಕಿಗೆ ಬಂದ ನಂತರ, ಕರವೇ ಶಿವರಾಮೇಗೌಡ ಬಣದ ಸದಸ್ಯರು ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ನೇತೃತ್ವದಲ್ಲಿ ಆನೇಕಲ್ ಪೊಲೀಸ್ ಠಾಣೆ ಬಳಿ ಧರಣಿ ನಡೆಸಿದರು. ಸ್ಕ್ಯಾನಿಂಗ್ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ ರೆಡಿಯಾಲಜಿಸ್ಟ್ ಜಯಕುಮಾರ್‌ನನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಳಿಸಲಾಯಿತು. ಪ್ರತಿಭಟನಾಕಾರರು ಆರೋಪಿಯನ್ನು ಠಾಣೆಗೆ ಕರೆತಂದು ಒಪ್ಪಿಸಿದ ಬಳಿಕ, ಪೊಲೀಸರು ನೆಪಕ್ಕೆ FIR ದಾಖಲಿಸಿ, ಆರೋಪಿಯನ್ನು ಬಿಟ್ಟು ಕಳುಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು.

ಸ್ಕ್ಯಾನಿಂಗ್ ವೇಳೆ ಅಮಾನವೀಯ ಕೃತ್ಯ

ನವೆಂಬರ್ ತಿಂಗಳ 10ನೇ ತಾರೀಖು ನಡೆದ ಘಟನೆಯಲ್ಲಿ ಹೊಟ್ಟೆ ನೋವು ಆಗಿದ್ದ ಕಾರಣ, ಮಹಿಳೆ ಪತಿ ಜೊತೆ ಪ್ಲಾಸ್ಮಾ ಮೆಡಿನೋಸ್ಟಿಕ್ಸ್ ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿದ್ದರು. ಸ್ಕ್ಯಾನಿಂಗ್ ಸಮಯದಲ್ಲಿ ರೆಡಿಯಾಲಜಿಸ್ಟ್ ಜಯಕುಮಾರ್ ಮಹಿಳೆಯ ಖಾಸಗಿ ಅಂಗಕ್ಕೆ ಕೈ ಹಾಕಿ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದೆ. ಘಟನೆ ನಂತರ ಮಹಿಳೆ ಸ್ವತಃ ವಿಡಿಯೋ ಮಾಡಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದರೂ, ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಆರೋಪಿ ಜಯಕುಮಾರ್ ನನ್ನು ಬಿಡುಗಡೆ ಮಾಡಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಯಿತು.

ಇನ್ಸ್ಪೆಕ್ಟರ್ ಅಮಾನತ್ತು ಬೇಡಿಕೆ

ದೌರ್ಜನ್ಯ ನಡೆದಿದ್ದರೂ, ಆರೋಪಿಯನ್ನು ಬಂಧಿಸದೆ ಬಿಟ್ಟಿರುವ ಕಾರಣ ಪ್ರತಿಭಟನಾಕಾರರು, ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಅವರನ್ನು ತಕ್ಷಣ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು. ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು. ಘಟನೆ ಹಿನ್ನೆಲೆ, ಪ್ರತಿಭಟನಾಕಾರರು ಪಟ್ಟಣದ ತಾಲೂಕು ಕಚೇರಿ ಸರ್ಕಲ್‌ನಲ್ಲಿ ಆರೋಪಿ ಜಯಕುಮಾರ್ ಪ್ರತಿಕೃತಿ ದಹನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ತಕ್ಷಣ ಬಂಧನಕ್ಕೆ ಒಳಗಾಗಲೇಬೇಕು ಎಂದು ಆಗ್ರಹ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು.

ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ಅಡಿಷನಲ್ ಎಸ್ಪಿ ನಾಗರಾಜ್ ಹೇಳಿಕೆ ನೀಡಿ, ಈಗಾಗಲೇ ಎರಡು ವಿಶೇಷ ತಂಡಗಳು ಆರೋಪಿಯ ಶೋಧ ಕಾರ್ಯದಲ್ಲಿ ತೊಡಗಿವೆ. ಮೂರು ನಾಲ್ಕು ದಿನಗಳಲ್ಲಿ ರೆಡಿಯಾಲಜಿಸ್ಟ್ ಜಯಕುಮಾರ್‌ರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದರು. ಈ ಭರವಸೆ ಹಿನ್ನೆಲೆಯಲ್ಲಿ ಹೋರಾಟಗಾರರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.

PREV
Read more Articles on
click me!

Recommended Stories

ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು
ಸಮಸ್ಯೆಗಳ ನಿವಾರಣೆ, ಸವಾಲುಗಳಿಗೆ ಧಾರ್ಮಿಕ ಗುರುಗಳಿಂದ ಪರಿಹಾರ: ಬಿ.ವೈ.ವಿಜಯೇಂದ್ರ