ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಸಂಚಾರಕ್ಕೆ ಅಡ್ಡಿ ಆರೋಪ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ

By Suvarna NewsFirst Published Mar 4, 2024, 7:54 PM IST
Highlights

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ  ವನ್ಯಜೀವಿ ವಲಯದ  ಅರಣ್ಯ ಪ್ರದೇಶದಲ್ಲಿ ತಲೆತಲಾಂತರದಿಂದ ವಾಸವಿರುವ ಆದಿವಾಸಿ ಸಮುದಾಯದ ಜನರ ಓಡಾಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.4): ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ  ವನ್ಯಜೀವಿ ವಲಯದ  ಅರಣ್ಯ ಪ್ರದೇಶದಲ್ಲಿ ತಲೆತಲಾಂತರದಿಂದ ವಾಸವಿರುವ ಆದಿವಾಸಿ ಸಮುದಾಯದ ಜನರ ಓಡಾಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ನಾಗರಹೊಳೆ ಚೆಕ್ ಪೋಸ್ಟ್ ನಲ್ಲಿ ನಾಗರಹೊಳೆ ಆದಿವಾಸಿ ಜಮ್ಮಾ ಪಾಳೆ ಹಕ್ಕು ಸ್ಥಾಪನಾ ಸಮಿತಿ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಯಿತು. 

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪ್ರವೇಶ ದ್ವಾರದ ಎದುರು ಪ್ರತಿಭಟನಾ ಧರಣಿ ನಡೆಸಿದ ಪ್ರತಿಭಟನಾಕಾರರು ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ತಲತಲಾಂತರಗಳಿಂದ ಬದುಕುತ್ತಿರುವ ನಮಗೆ ಸಂಜೆ 6 ಗಂಟೆಯ ಬಳಿಕ ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಾರಿಗೆ ನಿಗಮಗಳ ನೌಕರರ ಬೇಡಿಕೆ ಬೇಗ ಈಡೇರಿಸಲು ಒತ್ತಾಯ

ಪ್ರತಿಭಟನಾಕಾರರು ಗೇಟ್ನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದರಿಂದ ಪ್ರವಾಸಿಗರು ದಾರಿಬಿಡುವಂತೆ ಮೊದಲು ಮನವಿ ಮಾಡಿದ್ದಾರೆ. ಆದರೆ ಪ್ರತಿಭಟನಾಕಾರರು ದಾರಿ ಬಿಡದೇ ಇದ್ದಾಗ ಪ್ರವಾಸಿಗರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅರಣ್ಯ ಇಲಾಖೆ ಸಿಬ್ಬಂದಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಈ ಸಂದರ್ಭ ಮಾತನಾಡಿದ ಆದಿವಾಸಿ ಮುಖಂಡ ಶಿವು, ರಾತ್ರಿ ತಡವಾಗಿ ಬಂದಾಗ ನಾಗರಹೊಳೆ ಚೆಕ್ ಪೋಸ್ಟ್ ನಲ್ಲಿ ಅಂದರೆ ನಾಣಚ್ಚಿ ಪ್ರವೇಶ ಗೇಟ್ ನಲ್ಲಿ ಇದ್ದ ವಾಚರ್ ತಡೆದು ಮೇಲಾಧಿಕಾರಿಯನ್ನು ಕೇಳಿ ಬಿಡುವುದಾಗಿ ತಿಳಿಸಿ ಒಳಗೆ ಹೋಗಲು ಬಿಡದೆ ಅಡ್ಡಿಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಆದಿವಾಸಿಗಳ ಸಂಚಾರಕ್ಕೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ ಬಳಿಕ ಆದಿವಾಸಿಗಳು ಪ್ರತಿಭಟನೆ ಕೈಬಿಟ್ಟರು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ ವನ್ಯಜೀವಿ ವಲಯದ ಅರಣ್ಯ ಪ್ರದೇಶವಾದ ತುಂಡು ಮುಂಡಗೆ ಕೊಲ್ಲಿ ಗದ್ದೆ ಹಾಡಿಯ  ನಿವಾಸಿ ಜೆ.ಕೆ. ತಿಮ್ಮ ಎಂಬುವರು, ಸಮುದಾಯದ ಜನರ ಸಮಸ್ಯೆ ಕುರಿತು ಸಂಬಂಧಿಸಿದ  ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿ ರಾತ್ರಿ ತಡವಾಗಿ ವಾಪಸ್ ಬಂದಾಗ ನಾಗರಹೊಳೆ ಚೆಕ್ ಪೋಸ್ಟ್ ನಲ್ಲಿ ಅಂದರೆ ನಾಣಚ್ಚಿ ಪ್ರವೇಶ ಗೇಟ್ ನಲ್ಲಿ ಇದ್ದ ವಾಚರ್ ತಡೆದು ಮೇಲಾಧಿಕಾರಿಯನ್ನು ಕೇಳಿ ಬಿಡುವುದಾಗಿ ಅಡ್ಡಿಪಡಿಸಿದರು. ನಂತರ  ಫಾರೆಸ್ಟ್ ಗಾರ್ಡ್ ಗೆ  ಕರೆ ಮಾಡಿ ಕೇಳಿದಾಗ ಇಂದು ಒಂದು ದಿನ ಹೋಗಲಿ ಇನ್ನೂ ಮೇಲೆ ಬಿಡಲು ಆಗುವುದಿಲ್ಲ ಎಂದು ಆದೇಶಿಸಿದರು ಎನ್ನಲಾಗಿದೆ.

ಬೆಂಗಳೂರು ಮಹಿಳಾ ಸಬ್ ಇನ್ಸಪೆಕ್ಟರ್ ರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಗೆ ಆಯ್ಕೆ

ಪ್ರತಿ ನಿತ್ಯ  ಕಾಡಿನ ಒಳಭಾಗದಲ್ಲಿ ಇರುವ ಆದಿವಾಸಿ ಜನರು ತಮ್ಮ ಕೆಲಸಕಾರ್ಯಗಳಿಗೆ ತೆರಳಿ, ಹಾಡಿಗೆ ಹಿಂತಿರುಗಿ ಬರುವಾಗ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಈ ಸಂದರ್ಭ ಜೆ.ಕೆ.ತಿಮ್ಮ ಅವರು, ಪ್ರಶ್ನಿಸಿದಾಗ ಈ ಬಗ್ಗೆ ಮೇಲಾಧಿಕಾರಿಗಳಿಗೆ ಹೇಳುವಂತೆ ಫಾರೆಸ್ಟ್ ಗಾರ್ಡ್ ತಿಳಿಸಿದ್ದರೆಂದು ಆರೋಪಿಸಿದರು. ಅರಣ್ಯ ಇಲಾಖೆಯ ಡಿಸಿಎಫ್ ಅವರು ಆದಿವಾಸಿಗಳ ಸಂಚಾರಕ್ಕೆ ತೊಂದರೆ ಮಾಡದಂತೆ ಹೇಳಿದರೂ ಇರುವ ನಾಲ್ಕು ಚೆಕ್ ಪೋಸ್ಟ್ ಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿದರು. ಆದಿವಾಸಿಗಳ ಸಂಚಾರಕ್ಕೆ ಅಡ್ಡಿಪಡಿಸಿದ ಸಿಬ್ಬಂದಿಗಳ ವಿರುದ್ದ  ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಆದಿವಾಸಿಗಳ ಸಂಚಾರಕ್ಕೆ ಅಧಿಕೃತವಾಗಿ ಜ್ಞಾಪನ ಪತ್ರ ಹೊರಡಿಸಿ ಸಾಮಾಜಿಕ  ನ್ಯಾಯ ಒದಗಿಸುವಂತೆ ಕೋರಿದರು.

click me!