Davanagere: ಡಿ.23ರಿಂದ ಡಿ.25ರವರೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಅಧಿವೇಶನ

By Suvarna NewsFirst Published Oct 8, 2022, 11:07 PM IST
Highlights

ಅಖಿಲ ಭಾರತ ವೀರಶೈವ ಲಿಂಗಾಯತ 23ನೇ ಮಹಾ ಅಧಿವೇಶನ ಡಿಸೆಂಬರ್ 23ರಿಂದ 25ರವರೆಗೆ ದಾವಣಗೆರೆ  ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ಅ.8): ಅಖಿಲ ಭಾರತ ವೀರಶೈವ ಲಿಂಗಾಯತ 23ನೇ ಮಹಾ ಅಧಿವೇಶನ ಡಿಸೆಂಬರ್ 23ರಿಂದ 25ರವರೆಗೆ ದಾವಣಗೆರೆ  ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಅಥಣಿ ವೀರಣ್ಣ ಶಾಮನೂರು ಪುತ್ರ ಎಸ್ ಎಸ್ ಗಣೇಶ್ ಸೇರಿದಂತೆ ಹಲವು ಸಮಾಜದ ಮುಖಂಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದಿದ್ದು ದಿನಾಂಕ ನಿಗದಿಗೊಳಿಸಲಾಗಿದೆ. ಸಮಾವೇಶದಲ್ಲಿ ವೀರಶೈವ– ಲಿಂಗಾಯತ ಎರಡೂ ಒಂದೇ ಎಂದು ಜಾಗೃತಿ ಮೂಡಿಸುವುದರ ಜೊತೆಗೆ ವೀರಶೈವ–ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ (ಒಬಿಸಿ) ಸೇರ್ಪಡೆಗೊಳಿಸಬೇಕು ಎಂದು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲು ಶನಿವಾರ ಇಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯದ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಿಳಾ, ಯುವ, ಕೃಷಿ ಅಧಿವೇಶನಗಳು ನಡೆಯಲಿವೆ. ಒಂದು ಲಕ್ಷಕ್ಕೂ ಹೆಚ್ಚು ಜನ ಅಧಿವೇಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ಮಾಹಿತಿ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್‌.ಎಸ್‌.ಗಣೇಶ್‌, ಅಣಬೇರು ರಾಜಣ್ಣ,ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ. ರೇಣುಕ ಪ್ರಸನ್ನ ದೇವರಮನೆ ಶಿವಕುಮಾರ್ ಸಭೆಯಲ್ಲಿ ಇದ್ದರು.

2ಎ ಮೀಸಲಾತಿ ನೀಡದಿದ್ದರೆ ಚುನಾವಣೆಯಲ್ಲಿ ತಕ್ಕ ಉತ್ತರ
ವಿಜಯಪುರ: ಬೆಂಗಳೂರಿನ ವಿಧಾನಸೌಧದಲ್ಲಿ ಮೀಸಲಾತಿ ಕುರಿತು ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ನಮ್ಮ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ಹೇಳಿದರು.

ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಯ ಬಗ್ಗೆ ಇಂದು ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚೆ ಆಗದೆ ಇರುವುದು ದುರದೃಷ್ಟಕರ. ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳು ಕೂಡಲಸಂಗಮದಿಂದ ಬೆಂಗಳೂರಿನ ವರೆಗೆ ಸುಮಾರು 750 ಕಿಮೀ ಪಾದಯಾತ್ರೆ ಮಾಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 10 ಲಕ್ಷ ಸಮಾಜದ ಜನರನ್ನು ಸೇರಿಸಿ ಬೃಹತ್‌ ಸಮಾವೇಶ. ಸ್ವತಂತ್ರ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಹೀಗೆ ಹಲವಾರು ರೀತಿಯಲ್ಲಿ ಹೋರಾಟಗಳನ್ನು ಮಾಡಿ ಸರ್ಕಾರದ ಗಮನಕ್ಕೆ ತಂದರೂ ಕೂಡ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವ ಬಗ್ಗೆ ಮೂರು ಪಕ್ಷದ ನಾಯಕರು ಧ್ವನಿ ಎತ್ತದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.

2ಎ ಮೀಸಲಿಗಾಗಿ ಸೆ.20ಕ್ಕೆ ಸಿಎಂ ಮನೆ ಮುಂದೆ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ

ಇಂದು ನಡೆದ ಸರ್ವ ಪಕ್ಷದ ಸಭೆಯಲ್ಲಿ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಿಸಿರುವುದನ್ನು ಮಹಾಸಭಾ ಸ್ವಾಗತಿಸುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪದೇ ಪದೇ ಕಾಲಾವಕಾಶವನ್ನು ಪಡೆದುಕೊಂಡು ಕಾಲಹರಣ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಆ.22 ರೊಳಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಜಗದ್ಗುರುಗಳಿಗೆ ಹಾಗೂ ನಮ್ಮ ನಾಯಕರಿಗೆ ಮಾತು ಕೊಟ್ಟಿದ್ದರು. ಈಗ ಹಿಂದುಳಿದ ಆಯೋಗದ ವರದಿ ಬರಲಿ ಎಂದು ಹೇಳುತ್ತಿರುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಶೂನ್ಯಪೀಠ ಮುರುಘಾ ಮಠಕ್ಕೆ ಅನ್ಯ ಸಮುದಾಯದವರು ಪೀಠಾಧ್ಯಕ್ಷರು ಯಾಕಾಗಬಾರದು? - ಬಿ.ಕಾಂತರಾಜ್

ಕೇಂದ್ರ ಸಚಿವ ಅಮಿತ್‌ ಶಾ ಅವರು ಮೊನ್ನೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿರುವ ಮೂರು ಸಮುದಾಯಕ್ಕೆ ಎಸ್ಟಿಮೀಸಲಾತಿಯನ್ನು ಕಲ್ಪಿಸಿದ್ದಾರೆ. ನಮ್ಮ ಸಮುದಾಯದ ಸರ್ವ ಪಕ್ಷದ ಎಲ್ಲ ಶಾಸಕರು ಮೀಸಲಾತಿ ಕುರಿತು ಒಕ್ಕಟ್ಟಾಗಿ ಹೋರಾಟ ಮಾಡಬೇಕು. ಇಲ್ಲದೆ ಹೋದರೆ ಮುಂಬರುವ ಚುನಾವಣೆಯಲ್ಲಿ ನಮ್ಮ ಮೀಸಲಾತಿಗೆ ಅಡೆತಡೆ ಮಾಡುವ ಶಾಸಕರಿಗೂ ಕೂಡ ಸಮುದಾಯದ ಶಾಪ ತಟ್ಟುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

 

click me!