ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲು ಎಐಎಸ್‌ಎಫ್ ಒತ್ತಾಯ

By Kannadaprabha NewsFirst Published Oct 15, 2023, 8:30 AM IST
Highlights

ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ (ಎಸ್.ಇ.ಪಿ) ಜಾರಿಗೊಳಿಸಬೇಕು ಎಂದು ಎಐಎಸ್‌ಎಫ್ ರಾಜ್ಯಾಧ್ಯಕ್ಷೆ ವೀಣಾ ನಾಯಕ್ ಒತ್ತಾಯಿಸಿದರು.

 ತುಮಕೂರು :  ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ (ಎಸ್.ಇ.ಪಿ) ಜಾರಿಗೊಳಿಸಬೇಕು ಎಂದು ಎಐಎಸ್‌ಎಫ್ ರಾಜ್ಯಾಧ್ಯಕ್ಷೆ ವೀಣಾ ನಾಯಕ್ ಒತ್ತಾಯಿಸಿದರು.

ಉಪ್ಪಾರಹಳ್ಳಿಯ ಟಿ.ಆರ್. ರೇವಣ್ಣ ಭವನದಲ್ಲಿ ಎಐಎಸ್‌ಎಫ್ ಸಂಘಟನೆಯ ವಿದ್ಯಾರ್ಥಿಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿರುವ ಸರ್ಕಾರ ಎಸ್.ಇ.ಪಿಯ ಅಧ್ಯಕ್ಷರನ್ನಾಗಿ ರಾಜ್ಯದವರನ್ನು ನೇಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪಠ್ಯಕ್ರಮವು ಎಲ್ಲರನ್ನು ಒಳಗೊಂಡ ಶಿಕ್ಷಣ ಜಾರಿಯಾಗಬೇಕು ಎಂದರು.

ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಅಮ್ಜದ್ ಮಾತನಾಡಿ ನಮ್ಮನ್ನು ಆಳುವ ಸರ್ಕಾರಗಳು ಸಾರ್ವತ್ರಿಕ ಶಿಕ್ಷಣ ಕ್ಷೇತ್ರಕ್ಕೆ ಬಂಡವಾಳ ಹಿಂತೆಗೆದುಕೊಳ್ಳುವ ಮೂಲಕ ಬಂಡವಾಳಶಾಹಿ ಶಾಸಗಿ ಶಿಕ್ಷಣಕ್ಕೆ ಬೆಂಬಲವಾಗಿ ನಿಂತಿವೆ. ಇಂದು ಉನ್ನತ ಶಿಕ್ಷಣ ಕೇವಲ ಉಳ್ಳವರ ಪಾಲಾಗುತ್ತಿದೆ. ಶ್ರೀಮಂತರಿಗೆ ಮಾತ್ರವೇ ಉತ್ತಮ ಶಿಕ್ಷಣ ಕೈಗೆಟಕುವ ಮತ್ತು ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಳಪೆ ಮಟ್ಟದ ಅಸಮಾನ ಶೈಕ್ಷಣಿಕ ವ್ಯವಸ್ಥೆ ದೇಶದಲ್ಲಿ ಇಂದು ಜಾರಿಯಾಗಿರುವುದು ನಮ್ಮ ಕಣ್ಣ ಮುಂದಿದೆ ಎಂದರು.

ಎಐಟಿಯುಸಿ ಜಿಲ್ಲಾ ಕಾರ್ಯಾಧ್ಯಕ್ಷ ಗಿರೀಶ್ ಮಾತನಾಡಿ, ಎಲ್.ಕೆ.ಜಿ ಯಿಂದ ಪಿ.ಜಿವರೆಗೂ ಸಂಪೂರ್ಣ ಉಚಿತ ಹಾಗೂ ವೈಜ್ಞಾನಿಕ ಶಿಕ್ಷಣಕ್ಕಾಗಿ ಉದ್ಯೋಗಾಧಾರಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ, ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಭ, ಶುಲ್ಕಗಳ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ವಿದ್ಯಾರ್ಥಿಗಳ ಮುಂದಿವೆ, ಕಟ್ಟಡ ನಿರ್ಮಾಣ ಕಾರ್ಯಾದಲ್ಲಿ ತೊಡಗಿರುವ ಕಾರ್ಮಿಕರ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸವಲತ್ತು ದೊರೆಯುತ್ತಿಲ್ಲ, ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಕಟ್ಟಡ ಕಾರ್ಮಿಕ ಮಂಡಳಿ ನೀಡುವ ವಿದ್ಯಾರ್ಥಿ ವೇತನದ ಸಹಾಯ ಧನ ಇದುವರೆಗೂ ಬಿಡುಗಡೆಯಾಗಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಉಸ್ತುವಾರಿ ಡಾ. ಎ ಜ್ಯೋತಿ, ಎಐಟಿಯುಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶ್ವತ್ಥನಾರಾಯಣ, ಎಐಎಸ್‌ಎಫ್ ಜಿಲ್ಲಾ ಉಸ್ತುವಾರಿ ಗೋವಿಂದರಾಜು, ಎಐಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಚಂದ್ರಶೇಖರ್‌ಗೌಡ ಮಾತನಾಡಿದರು. ಗೋವಿಂದರಾಜು (ಬಾಬು), ದೊಡ್ಡತಿಮ್ಮಯ್ಯ, ರುದ್ರಪ್ಪ, ಬೋಜರಾಜು, ಅಭಿಲಾಷ್, ದೀಪಿಕ, ಚಂದ್ರಶೇಖರ್‌ಗೌಡ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಎಐಎಸ್‌ಎಫ್ ಜಿಲ್ಲಾ ಸಂಚಾಲಕ ಭಾರ್ಗವ್ ಸ್ವಾಗತಿಸಿ, ರಾಜ್ಯ ಸಹಕಾರ್ಯದರ್ಶಿ ತೇಜಸ್ವಿನಿ ವಂದಿಸಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಲವಹಳ್ಳಿಕಾರ್ ಕಾರ್ಯಕ್ರಮ ನಿರೂಪಿಸಿದರು.

ರಾಜಕೀಯ ದ್ವೇಷಕ್ಕಾಗಿ ರದ್ದು

ಮಂಗಳೂರು (ಸೆ.15): ಬಿಜೆಪಿ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಈಗಿನ ರಾಜ್ಯ ಸರ್ಕಾರ ಕೇವಲ ರಾಜಕೀಯ ದ್ವೇಷಕ್ಕಾಗಿ ರದ್ದುಪಡಿಸಲು ಹೊರಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ರಾಜಕಾರಣ ಮಾಡುತ್ತಿರುವುದು ದುರ್ದೈವ. ಇದರ ವಿರುದ್ಧ ರಾಜ್ಯದ ಜನತೆ ಕ್ರಾಂತಿಕಾರಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳೂರಿನಲ್ಲಿ ಗುರುವಾರ ಪೀಪಲ್ಸ್‌ ಫೋರಂ ಆಫ್‌ ಕರ್ನಾಟಕ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತ ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಈಗಿನ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಎನ್‌ಇಪಿ ರದ್ದುಪಡಿಸಲು ತೀರ್ಮಾನಿಸಿದೆ. ಇವರು ಯಾವ ಕ್ಷೇತ್ರದಲ್ಲಿ ಬೇಕಾದರೂ ರಾಜಕಾರಣ ಮಾಡಲಿ, ಆದರೆ ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಸರಿಯಲ್ಲ. ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಮಾಡಿದರೆ ಮಕ್ಕಳ ಭವಿಷ್ಯದಲ್ಲಿ ಕಳ್ಳತನ ಮಾಡಿದಂತೆ. ಮುಖ್ಯಮಂತ್ರಿಗಳು ಎನ್‌ಇಪಿ ಕಲಿಯುವುದಿಲ್ಲ, ಅವರಿಗೆ ಅದರ ಅಗತ್ಯವೂ ಇಲ್ಲ, ಅವರ ಮಕ್ಕಳಿಗೂ ವಯಸ್ಸಾಗಿದೆ. ಈಗ ಎಸ್‌ಇಪಿ ಎಂಬ ಹೊಸ ನೀತಿಯನ್ನು ತರುವ ಮೂಲಕ ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಬರೆದಿಟ್ಟುಕೊಳ್ಳಿ.. ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿಗಳೂ ಬಿದ್ದು ಹೋಗುತ್ತವೆ: ಬೊಮ್ಮಾಯಿ ವಿಶೇಷ ಸಂದರ್ಶನ

ಬಡವರ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ: ಈಗಾಗಲೇ ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ಎನ್‌ಇಪಿ ಶಿಕ್ಷಣವನ್ನು ಬದಲಾಯಿಸುವ ಮೂಲಕ ಬಡವರ ಶಿಕ್ಷಣಕ್ಕೆ ಹೊಡೆತ ನೀಡುತ್ತೀರಿ. ಶ್ರೀಮಂತರ ಮಕ್ಕಳಿಗೆ ಇದರಿಂದ ತೊಂದರೆಯಾಗುವುದಿಲ್ಲ. ಅರ್ಧ ರೊಟ್ಟಿ ತಿಂದು ಮಕ್ಕಳನ್ನು ಶಾಲೆಗೆ ಕಳುಹಿಸುವ ಬಡವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದೀರಿ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಅಧ್ಯಯನ ನಡೆಸಿಯೇ ಎನ್‌ಇಪಿ ಜಾರಿಗೊಳಿಸಿದ್ದು: ಎನ್‌ಇಪಿ ರದ್ದುಗೊಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕ ಕ್ರೆಡಿಟ್‌ ಬೇಕಾಗಿಲ್ಲ. ಅವರು ಆಡಳಿತದಲ್ಲೂ ಸಾಧನೆ ಮಾಡಲು ಹೊರಟಿದ್ದಾರೆ. ಆದರೆ ಎನ್‌ಇಪಿ ಶಿಕ್ಷಣದ ಪ್ರಯೋಜನ ಈಗಿನ ಮಕ್ಕಳಿಗೆ ಬೇಕು. ಕೇಂದ್ರದಲ್ಲಿ ಎನ್‌ಇಪಿ ಜಾರಿಗೊಳಿಸುವಂತೆ ಸೂಚಿಸಿದಾಗ ನಾವು ತರಾತುರಿಯಲ್ಲಿ ಅನುಷ್ಠಾನಕ್ಕೆ ತಂದಿಲ್ಲ. ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ, ಸಾಧಕ ಬಾಧಕ ಬಗ್ಗೆ ಚರ್ಚಿಸಿಯೇ ಎನ್‌ಇಪಿ ಜಾರಿಗೆ ತಂದಿದ್ದೇವೆ. ಆದರೆ ಈಗ ರಾಜ್ಯ ಸರ್ಕಾರ ಅದರನ್ನು ರದ್ದುಗೊಳಿಸಲು ಹೊರಟಿರುವುದು ಸರ್ವಥಾ ಸರಿಯಲ್ಲ. ಎನ್‌ಇಪಿ ರದ್ದುಗೊಳಿಸಲು ಅಂತಹ ಬೇಡದ ಅಂಶ ಅದರಲ್ಲಿ ಏನಿದೆ ಎಂಬ ನೈಜ ಕಾರಣವನ್ನು ಶಿಕ್ಷಣ ಸಚಿವರು ಜನತೆಯ ಮುಂದಿಡಲಿ ಎಂದು ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು. ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹರಾಪುರ್‌, ಶಾರದಾ ವಿದ್ಯಾಲಯ ಸಂಚಾಲಕ ಪ್ರೊ.ಎಂ.ಬಿ.ಪುರಾಣಿಕ್‌, ಸಂಘಟಕರಾದ ರಮೇಶ್‌ ಕೆ., ಪ್ರೊ.ರಾಜಶೇಖರ್ ಹೆಬ್ಬಾರ್‌, ರವೀಶ್‌ ಮತ್ತಿತರರಿದ್ದರು. ಸೆಸ್‌ ನಿರ್ದೇಶಕ ಡಾ.ಗೌರೀಶ್‌ ಪ್ರಾಸ್ತಾವಿಕ ಮಾತನಾಡಿದರು.

click me!