ಮತ್ತೆ ಕೇಳಿ ಬಂತು ಬೆಳಗಾವಿ ವಿಭಜನೆ ಕೂಗು..!

By Girish GoudarFirst Published Apr 5, 2022, 12:09 PM IST
Highlights

*  ಆಡ​ಳಿತ ಮತ್ತು ಅಭಿ​ವೃದ್ಧಿ ದೃಷ್ಟಿ​ಯಿಂದ ಬೆಳ​ಗಾವಿ ಜಿಲ್ಲೆ ವಿಭ​ಜ​ನೆ​ಯಾ​ಗಲಿ ಎಂಬ ಕೂಗು
*  ಜಿಲ್ಲೆ ವಿಭ​ಜಿ​ಸು​ವಂತೆ ಈಚೆಗೆ ಸಿಎಂಗೆ ಮನವಿ ಸಲ್ಲಿ​ಸಿ​ದ ಸಚಿವ ಉಮೇಶ ಕತ್ತಿ ನೇತೃ​ತ್ವದ ನಿಯೋಗ
*  ಜಿಲ್ಲಾ ವಿಭಜನೆಗೆ ನಮ್ಮ ಸಹಮತವಿದೆ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ
 

ಶ್ರೀಶೈಲ ಮಠದ

ಬೆಳಗಾವಿ(ಏ.05):  ರಾಜ್ಯದ ಅತಿ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಬೆಳಗಾವಿ(Belagavi) ಜಿಲ್ಲಾ ವಿಭಜನೆಯ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಆಡಳಿತ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಅರಣ್ಯ ಸಚಿವ ಉಮೇಶ ಕತ್ತಿ(Umesh Katti) ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವ​ರಿಗೆ ಈಚೆ​ಗೆ ಮನವಿ ಸಲ್ಲಿಸಿದೆ.

ತಣ್ಣಗಾಗಿದ್ದ ಜಿಲ್ಲಾ ವಿಭಜನೆ(District Partition) ಕೂಗು ಮತ್ತೆ ಮೊಳಕೆಯೊಡೆದಿದೆ. ಈ ಹಿಂದೆ ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ಜಿಲ್ಲಾ ವಿಭಜನೆಗೆ ಒಲವು ತೋರಿದ್ದರು. ಗೋಕಾಕ(Gokak), ಚಿಕ್ಕೋಡಿ(Chikkodi) ಎರಡು ಜಿಲ್ಲೆಯನ್ನಾಗಿಸಬೇಕು ಎಂಬ ಬೇಡಿಕೆಯೂ ಮೊದಲಿನಿಂದಲೂ ಕೇಳಿಬರುತ್ತಲೇ ಇವೆ. ಹೋರಾಟವೂ ನಡೆಯುತ್ತಲೇ ಇದೆ.

ಬಡವರನ್ನು ಬಡವರಾಗಿಯೇ ಮಾಡುವುದೇ ಬಿಜೆಪಿ ಸಿದ್ಧಾಂತ: ಸತೀಶ್ ಜಾರಕಿಹೊಳಿ

ಚಿಕ್ಕೋಡಿ, ಅಥಣಿ, ರಾಯಬಾಗ, ಹುಕ್ಕೇರಿ, ಕಾಗವಾಡ ಒಳಗೊಂಡಂತೆ ಚಿಕ್ಕೋಡಿಯನ್ನು ಹೊಸ ಜಿಲ್ಲಾ ಕೇಂದ್ರವಾಗಿಸಿಕೊಂಡು ಬೆಳಗಾವಿ ಜಿಲ್ಲೆ ವಿಭಜಿಸುವ ಪ್ರಸ್ತಾವ ಇಂದು ನಿನ್ನೆಯದೇನಲ್ಲ. ಎರಡು ದಶಕಗಳಷ್ಟು ದೀರ್ಘ ಹಳೆ​ಯ​ದ್ದು. 1997ರಲ್ಲಿ ಜಿಲ್ಲೆಗಳ ವಿಭಜನೆಗೆ ಸರ್ಕಾರ ರಚಿಸಿದ್ದ ಹುಂಡೇಕರ್‌ಸಮಿತಿ ಕೂಡ ಬೆಳಗಾವಿ ಜಿಲ್ಲೆ ವಿಭಜನೆಗೆ ಶಿಫಾರಸು ಮಾಡಿತ್ತು. ಆಗಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲರ(JH Patel) ಅವಧಿಯಲ್ಲಿ ಏಳು ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದವು. ಆದರೆ ಜಿಲ್ಲಾ ಕೇಂದ್ರ ಸ್ಥಾನದ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಜತೆ ಕೆಲ ರಾಜಕೀಯ ಕಾರಣಗಳಿಂದ ಬೆಳಗಾವಿ ಜಿಲ್ಲಾ ವಿಭಜನೆ ನನೆಗುದಿಗೆ ಬಿದ್ದಿದೆ.

ಇಷ್ಟಕ್ಕೂ ಜಿಲ್ಲಾ ವಿಭಜನೆಯ ಕೂಗು ಸತ್ತು ಮತ್ತೆ ಹುಟ್ಟುವ ಬೇಡಿಕೆಗಳಲ್ಲಿ ಒಂದಾಗಿದೆ. ಎಂದಾದರೊಮ್ಮೆ ದಿಢೀರನೆ ಈ ಕೂಗು ಏಳುವುದು, ಅದಕ್ಕೆ ಅಪಶ್ರುತಿಗಳು ಮೊಳಗುವುದು, ಇದೊಂದು ವಿವಾದವಾಗಿ ಕದಡಿ ಒಂದಿಷ್ಟುದಿನ ಸುದ್ದಿಯಾದ ಮೇಲೆ ಮತ್ತೆ ಸದ್ದಡಗಿ ಹೋಗುವುದು ನಿರಂತರ ನಡೆದು ಬಂದ ಪ್ರಕ್ರಿಯೆ.

2014ರ ಸೆಪ್ಟೆಂಬರ್‌ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ(Siddaramaiah) ಬೆಳಗಾವಿಗೆ ಬಂದು ಚಿಕ್ಕೋಡಿ ಕೇಂದ್ರಿಕೃತ ಹೊಸ ಜಿಲ್ಲೆ ರಚನೆ ಬಗ್ಗೆ ಮಾತನಾಡಿದ್ದು ವಿವಾದಗಳಿಗೆ ಕಾರಣವಾಗಿತ್ತು. ಅಂದಿನ ಸಂಸದ ಪ್ರಕಾಶ ಹುಕ್ಕೇರಿ ಸೇರಿದಂತೆ ಹಲವರು ಸಮರ್ಥಿಸಿದ್ದರು. ಆದರೆ, ಗೋಕಾಕ ತಾಲೂಕಿನಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಜಿಲ್ಲಾ ಕೇಂದ್ರವಾಗಲು ಚಿಕ್ಕೋಡಿಗಿಂತ ಗೋಕಾಕ ಸೂಕ್ತ ಎಂಬ ಪ್ರತಿಪಾದನೆ ಆ ಭಾಗದಿಂದ ಕೇಳಿಬಂದಿತ್ತು. ಜಿಲ್ಲಾ ವಿಭಜನೆಯಿಂದ ಗಡಿಭಾಗದಲ್ಲಿ ಕನ್ನಡತನ(Kannada) ಬಡವಾಗುವುದರಿಂದ ಮಹಾಜನ ಆಯೋಗದ ವರದಿ ಜಾರಿಗೊಳ್ಳುವವರೆಗೆ ವಿಭಜನೆ ಬೇಡ ಎಂದು ಕನ್ನಡ ಸಂಘಟನೆಯವರು ಆಕ್ಷೇಪ ವ್ಯಕ್ತ​ಪ​ಡಿ​ಸ್ದಿ​ರು.

ರಾಜಕೀಯ ಲೆಕ್ಕಾಚಾರ:

ವಿಭಜನೆಯ ಬೇಕು ಬೇಡಗಳಲ್ಲಿ ನಾಡು-ನುಡಿ ಕಾರಣ ಹೊರತುಪಡಿಸಿದರೆ ಉಳಿದಂತೆ ರಾಜಕೀಯ ಲೆಕ್ಕಾಚಾರಗಳೇ ಹೆಚ್ಚಿವೆ. ಸದ್ಯ ಅಖಂಡ ಜಿಲ್ಲೆಯ ಬಹುತೇಕ ರಾಜಕೀಯ ಪ್ರಾಬಲ್ಯ ಚಿಕ್ಕೋಡಿ ಕೇಂದ್ರಿಕೃತವಾಗಿದೆ. ಅದು ಜಿಲ್ಲಾ ಕೇಂದ್ರವಾದರೆ ವಿಶೇಷವಾಗಿ ಉಳಿಯುವ ಬೆಳಗಾವಿ ಜಿಲ್ಲೆಯ ಮೇಲೆ ಹೊಸದಾಗಿ ರಾಜಕೀಯ ಪ್ರಭುತ್ವ ಸಾಧಿಸಬಹುದು ಎಂಬುದು ಕೆಲ ರಾಜಕೀಯ ಧುರೀಣರ ಲೆಕ್ಕಾಚಾರ. ಅಖಂಡ ಜಿಲ್ಲೆಯ ಮೇಲೆ ಹಿಡಿತವಿರುವ ಮತ್ತಷ್ಟು ರಾಜಕೀಯ ಕುಟುಂಬಗಳಿಗೆ ಬೆಳಗಾವಿ ಭಾಗದ ಮೇಲೆ ಹಿಡಿತ ಕಳೆದುಕೊಳ್ಳುವ ಆತಂಕ. ಇಂಥ ರಾಜಕೀಯ(Politics) ತಾಕಲಾಟದ ಮಧ್ಯೆ ಜಿಲ್ಲೆಯ ಇಬ್ಭಾಗದ ಬಗೆಗಿನ ಮಾತು ಬಹುಭಾಗ ವಿಭಜನೆಯ ಕೂಗಿಗೆ ಜನ್ಮ ನೀಡಿದೆ.

ಮೂರು ಭಾಗ ಮಾಡಿ:

ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಯಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ವಿಭಜನೆಯಾಗಬೇಕು. ಆಡಳಿತಾತ್ಮಕವಾಗಿ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ವಿಭಜನೆಯಾಗಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆಗಳಾಗಬೇಕು ಎನ್ನುವ ಬೇಡಿಕೆಯೂ ಇದೆ.

ಜೈನ ಬಸದಿಯಲ್ಲಿ ನಡೀತು ಹೈಡ್ರಾಮಾ: ಗರ್ಭಗುಡಿಯಿಂದ ಆವರಣಕ್ಕೆ ಬಂತು ದೇವರ ಮೂರ್ತಿ..!

ಗದ್ದಿಗೌಡ್ರ ಮತ್ತು ಹುಂಡೇಕಾರ ಸಮಿತಿಗಳ ವರದಿಗಳ ಆಧಾರದ ಮೇಲೆ ಜೆ.ಎಚ್‌. ಪಟೇಲ್‌ಅವರು ಗೋಕಾಕ ಮತ್ತು ಚಿಕ್ಕೋಡಿ ಎರಡು ಜಿಲ್ಲೆಗಳನ್ನು ಘೋಷಣೆ ಮಾಡಿದರು. ಬೆಳಗಾವಿ ಸೇರಿ ಒಟ್ಟು 3 ಜಿಲ್ಲೆಗಳಾಗಿದ್ದವು. ರಾಜಕೀಯ ಗೊಂದಲಗಳಿಂದ ಇದು ಕೈಗೂಡಲಿಲ್ಲ. ಅನೇಕ ಹೋರಾಟಗಳು ನಡೆದರೂ ಜಿಲ್ಲೆ ವಿಭಜನೆಯಾಗಲಿಲ್ಲ. ಕಟ್ಟಕಡೆಯ ಹಳ್ಳಿಗಳ ಜನರಿಗೆ 150 ಕಿಮೀ ದೂರದಿಂದ ಬೆಳಗಾವಿಗೆ ಬರುವುದು ಸಮಸ್ಯೆಯಾಗುತ್ತಿದೆ.

ಬೆಳಗಾವಿ ರಾಜ್ಯದಲ್ಲೇ(Karnataka) ದೊಡ್ಡ ಜಿಲ್ಲೆ. ಆಡಳಿತ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸುವುದು ಸೂಕ್ತವಾಗಿದ್ದು, ಜಿಲ್ಲಾ ವಿಭಜನೆಗೆ ನಮ್ಮ ಸಹಮತವಿದೆ ಅಂತ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ. 
 

click me!