ಆದರ್ಶ ಗ್ರಾಮಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ: ಸಂಸದೆ ಸುಮಲತಾ

By Kannadaprabha NewsFirst Published Sep 19, 2022, 12:56 PM IST
Highlights
  • ಆದರ್ಶ ಗ್ರಾಮಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ: ಸುಮಲತಾ
  • ಅಭಿವೃದ್ಧಿಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ
  • ಇಂಡುವಾಳುವಿನಲ್ಲಿ ಆದರ್ಶ ಗ್ರಾಮ ಯೋಜನೆ ಅನುಷ್ಠಾನ ಸಭೆ

ಮಂಡ್ಯ (ಸೆ.19) : ಜಿಲ್ಲೆಯಲ್ಲಿ ಇಂಡುವಾಳು ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು. ತಾಲೂಕಿನ ಇಂಡವಾಳು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿವೇಶನದಲ್ಲಿ ಯಾವ ಶಾಸಕರು ಏನು ಮಾತನಾಡಿದ್ದಾರೆ?: ದಳಪತಿಗಳ ವಿರುದ್ಧ ಹರಿಹಾಯ್ದ ಸುಮಲತಾ

ಇಂಡುವಾಳು ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿಕೊಂಡಿದ್ದು, ಗ್ರಾಮದ ಸಮಸ್ಯೆಗಳು ಹಾಗೂ ಬೇಡಿಕೆಗಳು ಇದ್ದಲ್ಲಿ ಗಮನಕ್ಕೆ ತರುವಂತಹ ಕೆಲಸ ಮಾಡಿ. ಈ ಯೋಜನೆಯಡಿ ಇರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ರಸ್ತೆ, ಒಳಚರಂಡಿ, ಶಾಲೆ, ಪ್ರವಾಸಿ ತಾಣಗಳು, ವಸತಿ, ಸ್ಮಶಾನ, ಶೌಚಾಲಯ ಹಾಗೂ ಇನ್ನಿತರೆ ಕಾಮಗಾರಿಗಳನ್ನು ಆದರ್ಶ ಗ್ರಾಮದ ಯೋಜನೆಯಡಿ ತೆಗೆದುಕೊಳ್ಳಲು ಅವಕಾಶವಿದೆ. ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಜಲ ಜೀವನ್‌ ಮೀಷನ್‌ ಯೋಜನೆ ಪ್ರತಿ ಮನೆಗೂ ನೀರು ತಲುಪುವ ಯೋಜನೆಯಾಗಿದೆ. ಈ ಯೋಜನೆ ಕ್ರಮಬದ್ಧವಾಗಿ ಅನುಷ್ಠಾನವಾಗಬೇಕು ಎಂದು ನುಡಿದರು.

ಜಿಪಂ ಸಿಇಒ ಶಾಂತ ಎಲ್‌.ಹುಲ್ಮನಿ ಮಾತನಾಡಿ, ಇಂಡುವಾಳು ಗ್ರಾಮದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿ ಇತರೆ ಗ್ರಾಮಗಳಿಗೆ ಮಾದರಿಯಾಗಿ ಸಂಪೂರ್ಣ ಅಭಿವೃದ್ಧಿಯಾಗುವಂತೆ ಮಾಡಬೇಕು. ಇದೇ ಆದರ್ಶ ಗ್ರಾಮದ ಪರಿಕಲ್ಪನೆ. ಅಭಿವೃದ್ಧಿ ಕೆಲಸಗಳ ಜೊತೆ, ಲಿಂಗ ಸಮಾನತೆ, ಸ್ತ್ರೀಯರನ್ನು ಗೌರವಿಸುವುದು, ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಿಕೊಳ್ಳುವುದು, ಕಾಯಕವೇ ಕೈಲಾಸ, ಸ್ವಚ್ಛತೆಯ ಸಂಸ್ಕೃತಿಯನ್ನು ಉತ್ತೇಜಿಸುವುದು, ಪ್ರಕೃತಿಯೊಂದಿಗೆ ಸ್ಪಂದಿಸುತ್ತಾ ಪರಿಸರ ಮತ್ತು ವಿಜ್ಞಾನದ ಸಮತೋಲನವನ್ನು ಖಾತರಿಪಡಿಸಿಕೊಳ್ಳುವುದು, ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಉತ್ತೇಜಿಸುವುದು, ಗ್ರಾಮದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸುವ ಮೌಲ್ಯಯುತ ಕೆಲಸಗಳು ಸಹ ನಡೆಯಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣಗಳನ್ನು ಗುರುತಿಸಿ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರಿನ ಸೌಲಭ್ಯ, ಪ್ರವಾಸಿ ಸೂಚನಾ ಫಲಕಗಳು ಬಗ್ಗೆ ಅಳವಡಿಸುವ ಕೆಲಸ ನಡೆಸಬೇಕು ಎಂದರು. Mandya: ರಾಜಧನ ವಸೂಲಿ ಪರಿಣಾಮಕಾರಿಯಾಗಿಲ್ಲ: ಸಂಸದೆ ಸುಮಲತಾ

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಉಪವಿಭಾಗಾಧಿಕಾರಿ ಆರ್‌.ಐಶ್ವರ್ಯ, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ತಹಶೀಲ್ದಾರ್‌ ಕುಂಞ ಅಹಮದ್‌, ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

click me!