ಹೆದ್ದಾರಿ ಸಮಸ್ಯೆಗಳು ನೂರಾರು, ಪರಿಹಾರ ಶೂನ್ಯ: ಯೋಜನಾಧಿಕಾರಿಗೆ ಸಂಸದೆ ಸುಮಲತಾ ಕ್ಲಾಸ್​

By Kannadaprabha NewsFirst Published Jul 16, 2023, 1:02 PM IST
Highlights

ಹೆದ್ದಾರಿ ಸಮಸ್ಯೆಗಳು ನೂರಾರು, ಪರಿಹಾರ ಮಾತ್ರ ಶೂನ್ಯ. ಸಂಸದರು, ಜಿಲ್ಲಾಧಿಕಾರಿಗಳು, ಶಾಸಕರು ಸಲಹೆ ನೀಡಿದ ಯಾವುದೇ ಕೆಲಸಗಳೂ ಕಾಲಮಿತಿಯೊಳಗೆ ಕಾರ್ಯಗತಗೊಂಡಿಲ್ಲ.

ಮಂಡ್ಯ (ಜು.16): ಹೆದ್ದಾರಿ ಸಮಸ್ಯೆಗಳು ನೂರಾರು, ಪರಿಹಾರ ಮಾತ್ರ ಶೂನ್ಯ. ಸಂಸದರು, ಜಿಲ್ಲಾಧಿಕಾರಿಗಳು, ಶಾಸಕರು ಸಲಹೆ ನೀಡಿದ ಯಾವುದೇ ಕೆಲಸಗಳೂ ಕಾಲಮಿತಿಯೊಳಗೆ ಕಾರ್ಯಗತಗೊಂಡಿಲ್ಲ. ಹೆದ್ದಾರಿ ಪ್ರಾಧಿಕಾರದ ಮೇಲಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇವೆ, ಕೆಲವು ಕಾಮಗಾರಿಗಳಿಗೆ ಅನುಮತಿ ದೊರಕಿಲ್ಲ, ಸಭೆಯಲ್ಲಿ ಚರ್ಚಿಸುತ್ತೇವೆ, ಟೋಲ್‌ ದರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಹೀಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ತಮ್ಮ ಮೇಲೆ ತೂರಿ ಬರುತ್ತಿದ್ದ ಪ್ರಶ್ನೆಗಳ ಬಾಣಗಳಿಂದ ತಪ್ಪಿಸಿಕೊಳ್ಳುವ ಉತ್ತರ ನೀಡಿದರೇ ವಿನಃ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗದೆ ತಡಬಡಿಸಿದರು.

ಶನಿವಾರ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಸಂಸದೆ ಸುಮಲತಾ ಅಂಬರೀಶ್‌ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂಡುಬಂದ ದೃಶ್ಯಗಳು. ಹೆದ್ದಾರಿಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಸಂಸದೆ ಸುಮಲತಾ ಪ್ರಶ್ನೆಗೆ, ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ನೀಡಿರುವ ಸಲಹೆಯಂತೆ ಎಕ್ಸ್‌ಪ್ರೆಸ್‌ ವೇ ಮಧ್ಯದ ತಡೆಗೋಡೆಯನ್ನು ಹಲವು ಕಡೆ ಎತ್ತರಿಸುತ್ತಿದ್ದೇವೆ. ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ನೀರು ನಿಲ್ಲದಂತೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಯೋಜನಾ ನಿರ್ದೇಶಕ ರಾಹುಲ್‌ ಹೇಳಿದರು.

Latest Videos

ಕಾಟಾಚಾರದ ಉಸ್ತುವಾರಿ ಸಚಿವ ನಾನಲ್ಲ: ಭೈರತಿ ಸುರೇಶ್‌

ಸಮಯಾವಕಾಶ ಮುಗಿದರೂ ಕೆಲಸ ಮಾಡಿಲ್ಲ: ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ನಾವು ಹೇಳಿದ ಕೆಲಸಗಳನ್ನು 15 ದಿನದಲ್ಲಿ ಮಾಡಿ ಮುಗಿಸುತ್ತೇವೆ ಎಂದಿದ್ದಿರಿ. ಸಮಯಾವಕಾಶ ಮುಗಿದರೂ ಎಷ್ಟೋ ಕೆಲಸಗಳನ್ನು ಕೈಗೆತ್ತಿಕೊಂಡಿಲ್ಲ. ಆಗಮನ, ನಿರ್ಗಮನಗಳಲ್ಲಿ ಸೂಚನಾ ಫಲಕಗಳು, ರಿಫ್ಲೆಕ್ಟರ್‌ ಲೈಟ್‌ಗಳನ್ನು ಅಳವಡಿಸಬೇಕಿತ್ತು. ಹೆದ್ದಾರಿಯಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸುವುದು, ವಾಹನಗಳ ಶಿಸ್ತುಬದ್ಧ ಚಾಲನೆಗೆ ಸೈನ್‌ ಬೋರ್ಡ್‌ ಅಳವಡಿಕೆ ಕಾರ್ಯ ನಡೆದಿಲ್ಲ ಎಂದು ಪ್ರಶ್ನಿಸಿದಾಗ, ಆದಷ್ಟು ಬೇಗ ಮಾಡಿಕೊಡುವುದಾಗಿ ರಾಹುಲ್‌ ಹೇಳಿದರು.

ಯೋಜನಾಧಿಕಾರಿಗೆ ತರಾಟೆ: ಈ ಉತ್ತರದಿಂದ ಬೇಸರಗೊಂಡ ಸಂಸದೆ ಸುಮಲತಾ, ಎಕ್ಸ್‌ಪ್ರೆಸ್‌ ವಾಹನಗಳು ಭಾರೀ ವಾಹನಗಳು ಯಾವ ಪಥದಲ್ಲಿ ಸಾಗಬೇಕು, ಕಾರುಗಳು ಯಾವ ಪಥದಲ್ಲಿರಬೇಕು ಎನ್ನುವುದೂ ಸೇರಿದಂತೆ ವಾಹನಗಳ ಶಿಸ್ತುಬದ್ಧ ಸಂಚಾರಕ್ಕೆ ಸರಿಯಾದ ವ್ಯವಸ್ಥೆ ಮಾಡದಿದ್ದ ಮೇಲೆ ಇನ್ನೇನು ಮಾಡುತ್ತೀರಿ ನೀವು. ದಿನೇ ದಿನೇ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರಿಯಾದ ಸರ್ವಿಸ್‌ ರಸ್ತೆಗಳಿಲ್ಲ. ಚರಂಡಿ ಕಾಮಗಾರಿಗಳು ಅಲ್ಲಲ್ಲಿ ಇನ್ನು ಬಾಕಿ ಇದೆ. ಇದರ ನಡುವೆ ದಿನೇ ದಿನೇ ಅಪಘಾತಗಳಾಗಿ ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಮೊನ್ನೆ ಚನ್ನಪಟ್ಟಣದ ಬಳಿ ಒಂದು ಟ್ರಕ್‌ನ ದೃಶ್ಯ ನೋಡಿದ್ರೆ ಮೈ ನಡುಗಿಸುತ್ತೆ. ರಸ್ತೆ ಇರೋದು ಜನರ ಅನುಕೂಲಕ್ಕೆ. ಜನ ಪ್ರಾಣ ಕಳೆದುಕೊಳ್ಳುವುದಕ್ಕಲ್ಲ. ಏನು ಕೇಳಿದರೂ ಕೇವಲ ಪ್ರಸ್ತಾವನೆ ಸಲ್ಲಿಸುತ್ತೇವೆ, ಅನುಮತಿ ಕೊಟ್ಟಿಲ್ಲ. ಪತ್ರ ಬರೆಯುತ್ತೇವೆ, ಸಭೆ ಸೇರುತ್ತೇವೆ ಎಂದು ಹೇಳೋಕಾ ಸಭೆಗೆ ಬರೋದು. ಸಮಸ್ಯೆಗಳನ್ನು ಸಮಸ್ಯೆಗಳಾಗಿಯೇ ಉಳಿಸಿದರೆ ಜನರಿಗೆ ಪರಿಹಾರ ದೊರಕಿಸುವುದು ಯಾವಾಗ. ಆದಷ್ಟುಬೇಗ ಮೇಲಧಿಕಾರಿಗಳ ಗಮನಸೆಳೆದು ಕಾಮಗಾರಿ ಮುಗಿಸಬೇಕು ಎಂದು ತರಾಟೆ ತೆಗೆದುಕೊಂಡರು.

ಸಂಚಾರ ಬಂದ್‌ ಮಾಡ್ತೇವೆ: ಹೊಸ ಬೂದನೂರು ಬಳಿ ಸವೀರ್‍ಸ್‌ ರಸ್ತೆಯೇ ಇಲ್ಲ. ವಾಹನಗಳು ರಸ್ತೆಯಲ್ಲೇ ನಿಲ್ಲುತ್ತಿವೆ. ವಿದ್ಯಾರ್ಥಿಗಳು, ಗ್ರಾಮದ ಜನರು ಭಯದಲ್ಲಿ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವಾಗ ರಸ್ತೆ ನಿರ್ಮಿಸುತ್ತೀರಿ ಎಂದು ಶಾಸಕ ಪಿ.ರವಿಕುಮಾರ್‌ ಕೇಳಿದಾಗ, ಮದ್ದೂರಿನಲ್ಲಿ ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದೆ. ಅದು ಮುಗಿದ ಬಳಿಕ ಮಾಡಿಕೊಡುತ್ತೇವೆ ಎಂಬ ಉತ್ತರ ಅಧಿಕಾರಿಯಿಂದ ಬಂತು. ದಸರಾ ವೇಳೆಗೆ ರಸ್ತೆ ನಿರ್ಮಾಣ ಮಾಡದಿದ್ದರೆ ವಾಹನಗಳ ಸಂಚಾರ ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರಸ್ತೆಗಳನ್ನು ದುರಸ್ತಿ ಮಾಡಿಸಿಲ್ಲ: ಹೆದ್ದಾರಿ ನಿರ್ಮಾಣಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೊಂಡೊಯ್ಯಲು ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ಬಳಸಿಕೊಂಡಿದ್ದು, ಅನೇಕ ರಸ್ತೆಗಳು ಓವರ್‌ಲೋಡ್‌ ವಾಹನಗಳಿಂದ ಹಾಳಾಗಿವೆ. ಕಳೆದ ಬಾರಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟುಕಡೆ ಕುಸಿದಿವೆ. ಆ ರಸ್ತೆಗಳಿಗೆ ತೇಪೆ ಹಾಕಲಾಗುವುದಿಲ್ಲ. ಅವುಗಳನ್ನು ದುರಸ್ತಿ ಪಡಿಸಿಕೊಡುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದರೂ ಇದುವರೆಗೂ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಇಇ ಹರ್ಷ ಸಭೆಯ ಗಮನಕ್ಕೆ ತಂದರು. ಕಾವೇರಿ ನೀರಾವರಿ ನಿಗಮದ ಅಧಿಕಾರಿ ನಾಗರಾಜು ಮಾತನಾಡಿ, ಮಣ್ಣನ್ನು ಸಾಗಿಸುವ ಉದ್ದೇಶದಿಂದ ಚಂದಗಾಲು- ಮಾದೇಗೌಡನಕೊಪ್ಪಲು ರಸ್ತೆ ಬಳಸಿಕೊಂಡರು.. ಆ ರಸ್ತೆಯೂ ಹಾಳಾಗಿದ್ದರೂ ಇದುವರೆಗೂ ದುರಸ್ತಿಗೆ ಕ್ರಮ ವಹಿಸಿಲ್ಲ ಎಂದು ಸಂಸದೆ ಸುಮಲತಾ ಅವರಿಗೆ ತಿಳಿಸಿದರು.

ವಚನದ ಕಟ್ಟುಗಳಿದ್ದ ಪಲ್ಲಕ್ಕಿ ಹೊತ್ತ ಮಹಿಳೆಯರು: ಮೆರವಣಿಗೆಗೆ ಶ್ರೀಗಳಿಂದ ಚಾಲನೆ

ವಿದ್ಯುತ್‌ ಕಾಮಗಾರಿಗಳೂ ಸರಿಯಾಗಿಲ್ಲ: ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ಸೇರಿದಂತೆ ವಿದ್ಯುತ್‌ಗೆ ಸಂಬಂಧಿತ ಕಾಮಗಾರಿಗಳನ್ನು ಒಪ್ಪಂದದಲ್ಲಿರುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಡಿಕೊಟ್ಟಿಲ್ಲ. ಅದಕ್ಕಾಗಿ ನಾವುಗಳು ಅದನ್ನು ಹಸ್ತಾಂತರ ಮಾಡಿಕೊಂಡಿಲ್ಲ. ನಾನೂ ಸಹ ಈ ಬಗ್ಗೆ ಹಲವಾರು ಪತ್ರಗಳನ್ನು ಪ್ರಾಧಿಕಾರದ ಅಧಿಕಾರಿಗಳಿಗೆ ಬರೆದಿದ್ದೇನೆ. ಯಾವುದಕ್ಕೂ ಇದುವರೆಗೂ ಉತ್ತರ ಬಂದಿಲ್ಲ ಎಂದು ಹೇಳಿದಾಗ, ಸಂಸದೆ ಸುಮಲತಾ ಅವರು ಈ ಸಂಬಂಧ ಸಂಬಂಧಪಟ್ಟಇಲಾಖಾ ಅಧಿಕಾರಿಗಳಿಗೆ ಪತ್ರ ಬರೆದು ದೂರು ದಾಖಲಿಸುವಂತೆ ಸೂಚಿಸಿದರಲ್ಲದೇ, ಅವುಗಳನ್ನು ತಮ್ಮ ಗಮನಕ್ಕೆ ತರುವಂತೆಯೂ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್‌, ರೈಲ್ವೆ ಇಲಾಖೆ ಅಧಿಕಾರಿ ರುಚಿತಾ ಉಪಸ್ಥಿತರಿದ್ದರು.

click me!