Tumakuru: ಮಹಾನಗರ ಪಾಲಿಕೆ ಹಾಗೂ ಟೌನ್ ಕ್ಲಬ್ ನಡುವೆ ಪ್ರವೇಶ ಜಟಾಪಟಿ

By Govindaraj SFirst Published Oct 5, 2022, 9:49 AM IST
Highlights

ಮಹಾನಗರ ಪಾಲಿಕೆ ಆವರಣದೊಳಗಿನ ತುಮಕೂರು ಟೌನ್ ಕ್ಲಬ್ ಹಾಗೂ ಪಾಲಿಕೆ ನಡುವೆ ಆಗಾಗ್ಗೆ ಜಟಾಪಟಿ ತಲೆದೋರುತ್ತಲೇ ಇದ್ದು, ಲಕ್ಷಾಂತರ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದವರು ಕ್ಲಬ್ ಸಂಬಂಧಿತ ರಗಳೆಗೆ ರೋಸಿ ಹೋಗಿದ್ದಾರೆ.

ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು (ಅ.05): ಮಹಾನಗರ ಪಾಲಿಕೆ ಆವರಣದೊಳಗಿನ ತುಮಕೂರು ಟೌನ್ ಕ್ಲಬ್ ಹಾಗೂ ಪಾಲಿಕೆ ನಡುವೆ ಆಗಾಗ್ಗೆ ಜಟಾಪಟಿ ತಲೆದೋರುತ್ತಲೇ ಇದ್ದು, ಲಕ್ಷಾಂತರ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದವರು ಕ್ಲಬ್ ಸಂಬಂಧಿತ ರಗಳೆಗೆ ರೋಸಿ ಹೋಗಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲ್ಲೂ  ಅಸ್ಥಿತ್ವದಲ್ಲಿರುವ ತುಮಕೂರು ಟೌನ್ ಕ್ಲಬ್‌ಗೆ ಪ್ರತಿಷ್ಠಿತ ರಾಜಕೀಯ ಮುಖಂಡರು, ಉದ್ಯಮಿಗಳು, ಅಧಿಕಾರಿಗಳು ನಿವೃತ್ತರು, ಸದಸ್ಯರಾಗಿದ್ದು, ಪದನಿಮಿತ್ತವಾಗಿ ಜಿಲ್ಲಾಧಿಕಾರಿಗಳು ಕ್ಲಬ್‌ನ ಅಧ್ಯಕ್ಷರಾಗುತ್ತಾ ಬಂದಿದ್ದಾರೆ. ಟೆನ್ನಿಸ್, ಸ್ವಿಮ್ಮಿಂಗ್, ಚೆಸ್ ಸೇರಿದಂತೆ ವಿವಿಧ ಆಟ ಆಡಲು ಹಾಗೂ ಪಾರ್ಟಿ ರಿಲ್ಯಾಕ್ಸ್‌ಗಾಗಿ ಸದಸ್ಯರು ಪ್ರತಿನಿತ್ಯ ತಪ್ಪದೇ ಭೇಟಿಕೊಡುತ್ತಿರುತ್ತಾರೆ . 

ಆದರೆ ಕಳೆದ ಹಲವು ಕ್ಲಬ್‌ಗೆ ದಿನಗಳಿಂದ ಕ್ಲಬ್ ಇರುವ ಟೌನ್ ಹಾಲ್ ಪ್ರಾಂಗಣದೊಳಗೆ ಸದಸ್ಯರ ವಾಹನವನ್ನು ಬಿಡದಿರುವ ವಿಚಾರದಲ್ಲಿ ಪಾಲಿಕೆ ವರ್ಸಸ್ ಕ್ಲಬ್ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಗಿದೆ. ಶಾಸಕರ ಕಚೇರಿ ಹಿಂಭಾಗದಲ್ಲಿರುವ ಟೌನ್ ಕ್ಲಬ್‌ಗೆ ತೆರಳಲು ಬಿ.ಎಚ್.ರಸ್ತೆ ಕಡೆಯಿಂದ ಬರುವವರು ಪಾಲಿಕೆ ಪ್ರವೇಶ ಮಹಾದ್ವಾರದ ಬಳಿಯೇ ಗಾಡಿನಿಲ್ಲಿಸಿ ಹೋಗಬೇಕು ಎಂದು ಪಾಲಿಕೆ ಆಡಳಿತ ಫರ್ಮಾನು ಹೊರಡಿಸಿರುವುದು ಕ್ಲಬ್‌ನ ಸದಸ್ಯರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇಷ್ಟು ದಿನ ವಾಹನಗಳನ್ನು ಬಿಡುತ್ತಿದ್ದವರು ಏಕಾಏಕಿ ಬಿಡದಿರಲು ಕಾರಣವೇನು? 

ಬಿಜೆಪಿಗೆ ಹಿಂದುಳಿದ ವರ್ಗಗಳು ಶಕ್ತಿ ತುಂಬಿವೆ: ಸಚಿವ ಭೈರತಿ

ಕ್ಲಬ್ ಆಡಳಿತ ಮಂಡಳಿಯೂ ಈ ಬಗ್ಗೆ ಸರಿಯಾದ ಕ್ರಮ ವಹಿಸುತ್ತಿಲ್ಲ ಎಂದು ಆಕ್ಷೇಪಿಸುತ್ತಿದ್ದಾರೆ . ಪಾಲಿಕೆ ಆವರಣದೊಳಕ್ಕೆ ಕಚೇರಿ ಅವಧಿ ಮುಗಿದ ಮೇಲೆ ಮುಕ್ತವಾಗಿ ಪ್ರವೇಶ ಕಲ್ಪಿಸಿದರೆ, ವಾಟರ್‌ ಹೌಸ್‌ನಲ್ಲಿರುವ ಲಕ್ಷಾಂತರ ಮೌಲ್ಯದ ಪರಿಕರಗಳು, ಇತರೆ ಸ್ವತ್ತುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಕಾರಣಕ್ಕೆ ರಾತ್ರಿ ವೇಳೆ ವಾಹನ ಪ್ರವೇಶ ನಿರ್ಬಂಧಿಸಲಾಗಿದೆ ಎಂಬುದಾಗಿ ಪಾಲಿಕೆ ಆಯುಕ್ತ ರೇಣುಕಾ ತಿಳಿಸಿದ್ದಾರೆ. ಅಲ್ಲದೇ ಕ್ಲಬ್ ಜಾಗ ಮೂಲತಃ ಪಾಲಿಕೆಯ ಸತ್ತು ಎನ್ನುವ ವಾದವನ್ನು ಮುಂದಿಡುತ್ತಿದ್ದಾರೆ. ಆದರೆ ಪಾಲಿಕೆ ಸದಸ್ಯರಿಗೆ ಕ್ಲಬ್ ಸದಸ್ಯತ್ವ ನೀಡಬೇಕೆಂಬ ಬೇಡಿಕೆಗೆ ಕ್ಲಬ್ ಆಡಳಿತ ಸ್ಪಂದಿಸಿಲ್ಲ ಎನ್ನುವುದು ಅಸಲಿ ಕಾರಣವೆಂದು ಸದಸ್ಯ ವಲಯದಲ್ಲಿ ಚರ್ಚೆಗೀಡಾಗುತ್ತಿದೆ .

ಕ್ಲಬ್ ಸದಸ್ಯರ ಅಸಮಾಧಾನ: ಪ್ರವೇಶ ನಿರ್ಬಂಧಕ್ಕೆ ಕಾರಣಗಳೇನೇ ಇರಲಿ ಪಾಲಿಕೆ ಚುನಾಯಿತ ಮಂಡಳಿ, ಕ್ಲಬ್ ಆಡಳಿತ ಮಂಡಳಿ ಪ್ರತಿಷ್ಠೆಯ ನಡುವೆ ಲಕ್ಷಾಂತರ ಕೊಟ್ಟು ಸದಸ್ಯತ್ವ ಪಡೆದ ಸದಸ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಕ್ಲಬ್‌ನ ಹಿರಿಯ ಸದಸ್ಯರಾದ ನಿವೃತ್ತ ಡಿವೈಎಸ್ಪಿ ಜಗದೀಶ್, ನಿವೃತ್ತ ಅಭಿಯಂತರ ರವೀಶ್ ಮತ್ತಿತರರು ಅಸಮಾಧಾನ ಪಡಿಸಿದ್ದಾರೆ. ರೈಲ್ವೆ ಸಮಾನಾಂತರ ರಸ್ತೆಯಿಂದ ಕ್ಲಬ್‌ಗೆ ಪ್ರವೇಶವೂ ಸಂಜೆ ವೇಳೆ ಬಂದ್ ಆಗುತ್ತದೆ. ಇನ್ನೂ ಈ ರಸ್ತೆಯಲ್ಲಿ ವಾಹನ ನಿಲ್ಲಿಸುವುದರಿಂದ ಸ್ಥಳೀಯರ ಓಡಾಟಕ್ಕೂ ತೊಂದರೆಯಾಗುತ್ತಿದೆ. 

ಗ್ರಾಹಕ ಸ್ನೇಹಿಯಾಗಿ ಇಂಧನ ಇಲಾಖೆ: ಸಚಿವ ಸುನೀಲ್‌ ಕುಮಾರ್‌

ಸದಸ್ಯರ ಕೋಟಾದಡಿ ಯಾರಾದರೂ ಅತಿಥಿಗಳಿಗೆ ಕ್ಲಬ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕಾದರೆ ದೂರದಲ್ಲಿ ವಾಹನ ನಿಲ್ಲಿಸಿ ಲಗೇಜ್ ಎತ್ತಿಕೊಂಡು ಬರಬೇಕೇ? ಇದೆಂಥಾ ರಿಕ್ರಿಯೇಷನ್ ತಾಣ ಎಂದು ಪ್ರಶ್ನಿಸುತ್ತಿದ್ದಾರೆ . ಪಾಲಿಕೆಯವರು ಏನಾದರು ಬೇಡಿಕೆ ಇಟ್ಟಿದ್ದರೆ ಅದನ್ನು ಆಡಳಿತ ಸದಸ್ಯರ ಗಮನಕ್ಕೆ ತರಬೇಕಿತ್ತು. ಆದರೆ ಅದ್ಯಾವು ಆಗಿಲ್ಲ, ಈ ರಗಳೆಗೆ ಬೇಸತ್ತು ಪದನಿಮಿತ್ತ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಅಧ್ಯಕ್ಷ ಸ್ಥಾನವೇ ಬೇಡ ಎಂದು ದೂರ ಉಳಿದಿದ್ದಾರೆನ್ನಲಾಗಿದೆ. ಕ್ಲಬ್ ಆಡಳಿತ ಮಂಡಳಿಯವರು ಕೂಡಲೇ ವಿಶೇಷ ಸಾಮಾನ್ಯ ಸಭೆ ಕರೆದು ಸದಸ್ಯರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

click me!