ಗು'ಲಾಭಿ'ಯಿಂದ ಅರಳಿದ ಯುವ ರೈತನ ಬದುಕು!

By Kannadaprabha NewsFirst Published Dec 21, 2022, 1:10 PM IST
Highlights
  • ಗುಲಾಬಿಯಿಂದ ಅರಳಿದ ಯುವ ರೈತನ ಬದುಕು!
  • ನರೇಗಾ ಯೋಜನೆಯ ಮೂಲಕ ಸ್ವಾವಲಂಬಿಯಾದ ದೇವೇಂದ್ರಗೌಡ
  • ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು (ಡಿ.21) : ತುಂಡು ಭೂಮಿಯಲ್ಲಿ ನರೇಗಾ ಯೋಜನೆ ಬಳಸಿಕೊಂಡು ಪದವೀಧರ ಯುವ ರೈತರೊಬ್ಬರು ಗುಲಾಬಿ ಹೂವು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ತಾಲೂಕಿನ ಹೊನ್ನೂಣುಸಿ ಗ್ರಾಮದ ದೇವೇಂದ್ರಗೌಡ ಪರಸನಗೌಡ ಪೊಲೀಸಪಾಟೀಲ ಯುವಕನೇ ಇಂಥದ್ದೊಂದು ಸಾಧನೆ ಮಾಡಿದ ರೈತ.

ದೇವೇಂದ್ರಗೌಡ ಅವರು ತಂದೆಯ ಅಕಾಲಿಕ ನಿಧನದಿಂದಾಗಿ ಸಂಸಾರದ ಬವಣೆ ನೀಗಿಸಲು ಬಿಎ ವ್ಯಾಸಂಗ ಮುಗಿಸಿದ ತಕ್ಷಣವೇ ಕೃಷಿಗೆ ಕಾಲಿಟ್ಟರು. ಸಾಂಪ್ರದಾಯಿಕ ಕೃಷಿಯಿಂದ ಕೈ ಸುಟ್ಟುಕೊಂಡರು. ಏನಾದರೂ ಹೊಸತನ ಮಾಡಬೇಕು, ಕೃಷಿಯಲ್ಲಿ ಆದಾಯ ಪಡೆಯಬೇಕು ಎಂದು ಗುಲಾಬಿ ಕೃಷಿಯತ್ತ ಮುಖ ಮಾಡಿದರು. ತಮ್ಮ ಒಟ್ಟು ಎರಡೂವರೆ ಎಕರೆ ಭೂಮಿಯಲ್ಲಿ ಅರ್ಧ ಎಕರೆ ತೋಟದಲ್ಲಿ ಬಟನ್‌ ರೋಜ್‌ ಎಂಬ ಗುಲಾಬಿ ತಳಿ ನಾಟಿ ಮಾಡಿದರು. ನರೇಗಾ ಯೋಜನೆಯಡಿ .1 ಲಕ್ಷ ಅನುದಾನ ಪಡೆದು ಅದರ ಮೂಲಕ ಗುಲಾಬಿ ಬೆಳೆಯಲು ಶುರು ಮಾಡಿದರು.

ಪ್ರೀತಿಗೆ ಮಾತ್ರವಲ್ಲ, ತ್ರಿಜೋರಿ ತುಂಬಿಸಲೂ ಗುಲಾಬಿ ಬೇಕು

ಆದಾಯ:

ಆರಂಭದಲ್ಲೇ ವಾರದಲ್ಲಿ ಎರಡ್ಮೂರು ಸಲ ಗುಲಾಬಿ ಕಟಾವು ಮಾಡುತ್ತಿದ್ದಾರೆ. ಒಂದು ಬಾರಿ ಗುಲಾಬಿ ಕಟಾವು ಮಾಡಿದರೆ 8ರಿಂದ 10 ಕೆಜಿ ಹೂವು ಸಿಗುತ್ತದೆ. ಹೂವು ಮಾರಾಟಗಾರರ ತೋಟಕ್ಕೇ ಬಂದು ಹೂವು ತೆಗೆದುಕೊಂಡು ಹೋಗುತ್ತಾರೆ. ಕೆಜಿ ಗುಲಾಬಿಗೆ .150ರಿಂದ .200 ಸಿಗುತ್ತದೆ. ವಾರದಲ್ಲಿ .3ರಿಂದ .4 ಸಾವಿರವನ್ನು ಆದಾಯ ಗಳಿಸುತ್ತಿದ್ದಾರೆ.

ತಂದೆಯವರು ನಮ್ಮ ಹೊಲದಲ್ಲಿ ಸಜ್ಚೆ, ಮೆಕ್ಕೆಜೋಳ, ಸೂರ್ಯಕಾಂತಿ, ಕಡಲೆ ಬೆಳೆಯುತ್ತಿದ್ದರು. ಆ ಬೆಳೆಗಳಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿತ್ತು. ಆದರೆ ಈ ಗುಲಾಬಿ ಕೃಷಿಯಲ್ಲಿ ಖರ್ಚು ಕಡಿಮೆ ನಿರಂತರ ಆದಾಯ ಸಿಗುತ್ತಿದೆ.

ದೇವೇಂದ್ರಗೌಡ ಪರಸನಗೌಡ ಪೊಲೀಸ್‌ಪಾಟೀಲ, ಗುಲಾಬಿ ಬೆಳೆಗಾರ

ನರೇಗಾದಲ್ಲಿ ತೋಟಗಾರಿಕೆ ಹಾಗೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗುಲಾಬಿ ತೋಟ ನಿರ್ಮಾಣಕ್ಕಾಗಿ ಸಹಾಯಧನ ನೀಡಲಾಗುವುದು. ಅದನ್ನು ಬಳಸಿಕೊಂಡು ದೇವೇಂದ್ರಗೌಡ ಬಿಎ ಪದವೀಧರರಾದರೂ ಕೃಷಿಯಲ್ಲಿ ಜೀವನ ಕಂಡುಕೊಂಡಿದ್ದಾರೆ. ಇದರಂತೆ ಯುವಕರು ಕೃಷಿಯತ್ತ ಬರಬೇಕು.

ರಾಮಣ್ಣ ದೊಡ್ಮನಿ, ತಾಪಂ ಇಒ, ಕುಕನೂರು ತಾಲೂಕು

click me!