ಗೃಹಜ್ಯೋತಿ ಅರ್ಜಿಗೆ 20 ಬದಲು 50 ರೂ. ವಸೂಲಿ: ಸಾರ್ವಜನಿಕರ ಆಕ್ರೋಶ

By Kannadaprabha NewsFirst Published Jul 7, 2023, 9:45 PM IST
Highlights

ಗಜೇಂದ್ರಗಡ ಪಟ್ಟಣ ಸೇರಿ ತಾಲೂಕಿನ ಗ್ರಾಮ ಒನ್‌ ಹಾಗೂ ಸೇವಾ ಕೇಂದ್ರಗಳಲ್ಲಿ ಗೃಹಜ್ಯೋತಿ ಅರ್ಜಿ ಸಲ್ಲಿಸಲು ಸರ್ಕಾರ ಸಾರ್ವಜನಿಕರಿಗೆ ಅರ್ಜಿ ಶುಲ್ಕ ವಿನಾಯ್ತಿ ನೀಡಿ, ಸೇವಾ ಶುಲ್ಕ 20 ನಿಗದಿಪಡಿಸಿದೆ. ಆದರೆ ತಾಲೂಕಿನಲ್ಲಿ ಗೃಹಜ್ಯೋತಿ ಲಾಭ ಪಡೆಯಲು ಅರ್ಜಿ ಸಲ್ಲಿಸುವ ಗ್ರಾಹಕರಿಂದ 50 ಪಡೆಯುವ ಮೂಲಕ ಸೇವಾ ಕೇಂದ್ರಗಳು ಹಗಲು ದರೋಡೆಗೆ ಮುಂದಾಗಿವೆ. 

ಎಸ್‌.ಎಂ. ಸೈಯದ್‌

ಗಜೇಂದ್ರಗಡ(ಜು.07):  ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ಗ್ರಾಹಕರಿಂದ ಸೇವಾ ಶುಲ್ಕ 20 ಬದಲಾಗಿ 50 ಪಡೆಯುವ ಮೂಲಕ ಗ್ರಾಹಕರಿಂದ ಹಣ ಸುಲಿಗೆ ನಡೆಯುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣ ಸೇರಿ ತಾಲೂಕಿನ ಗ್ರಾಮ ಒನ್‌ ಹಾಗೂ ಸೇವಾ ಕೇಂದ್ರಗಳಲ್ಲಿ ಗೃಹಜ್ಯೋತಿ ಅರ್ಜಿ ಸಲ್ಲಿಸಲು ಸರ್ಕಾರ ಸಾರ್ವಜನಿಕರಿಗೆ ಅರ್ಜಿ ಶುಲ್ಕ ವಿನಾಯ್ತಿ ನೀಡಿ, ಸೇವಾ ಶುಲ್ಕ 20 ನಿಗದಿಪಡಿಸಿದೆ. ಆದರೆ ತಾಲೂಕಿನಲ್ಲಿ ಗೃಹಜ್ಯೋತಿ ಲಾಭ ಪಡೆಯಲು ಅರ್ಜಿ ಸಲ್ಲಿಸುವ ಗ್ರಾಹಕರಿಂದ 50 ಪಡೆಯುವ ಮೂಲಕ ಸೇವಾ ಕೇಂದ್ರಗಳು ಹಗಲು ದರೋಡೆಗೆ ಮುಂದಾಗಿವೆ ಎಂಬ ದೂರುಗಳು ಬಲವಾಗಿ ಕೇಳಿ ಬಂದರೂ ಸಹ ತಾಲೂಕಾಡಳಿತ ಕೈಕಟ್ಟಿಕುಳಿತಿರುವುದು ವಿಪರ್ಯಾಸ.
ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವ ಹೆಸ್ಕಾಂ ಗ್ರಾಹಕರಿಂದ .50 ಪಡೆಯುತ್ತಿದ್ದಾರೆ. ಗ್ರಾಹಕರು . 20ರ ಬದಲು . 50 ಯಾಕೆ ಎಂದು ಪ್ರಶ್ನಿಸಿದರೆ ಅರ್ಜಿ ಸಲ್ಲಿಸುವ ಮೊದಲೇ ಎಷ್ಟುಹಣ ಎಂದು ಕೇಳಬೇಕು. ಅರ್ಜಿ ಸಲ್ಲಿಸಿದ ಪ್ರಶ್ನಿಸಿದರೆ ಹೇಗೆ ಎಂದು ಮರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಸಿದ ಗ್ರಾಹಕರು ಹಿಡಿಶಾಪ ಹಾಕಿ . 50 ನೀಡುವ ದುಸ್ಥಿತಿ ತಾಲೂಕಿನಲ್ಲಿ ಬಂದೊದಗಿದೆ.

Gruha Jyothi:1 ಕೋಟಿಗೂ ಅಧಿಕ ಜನರಿಂದ ಗೃಹಜ್ಯೋತಿ‌ ಯೋಜನೆಗೆ ನೋಂದಣಿ ಪೂರ್ಣ

ಸೇವಾ ಕೇಂದ್ರಗಳಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಪಡೆಯುವುದು ಯೋಜನೆಯ ಆಶಯಕ್ಕೆ ಕೊಡಲಿ ಪೆಟ್ಟು ಹಾಕಿದಂತಾಗಿದೆ. ಪರಿಣಾಮ ಇನ್ನುಳಿದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಸುವ ಗ್ರಾಹಕರಿಂದ ಸೇವಾ ಕೇಂದ್ರಗಳು ಇನ್ನೆಷ್ಟುಹಣವನ್ನು ನಿಗದಿ ಮಾಡುತ್ತವೆ ಎಂಬುದು ಸಾರ್ವಜನಿಕರಿಗೆ ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆಯಾಗಿದೆ. ಹೀಗಾಗಿ ತಾಲೂಕಿನಲ್ಲಿ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಸಲು ನಿಗದಿತ ಶುಲ್ಕವನ್ನು ಮಾತ್ರ ಸೇವಾ ಕೇಂದ್ರಗಳು ಪಡೆಯಬೇಕು ಹಾಗೂ ಅರ್ಜಿ ಶುಲ್ಕದ ನಾಮಫಲಕವನ್ನು ಕಡ್ಡಾಯವಾಗಿ ಸೇವಾ ಕೇಂದ್ರದ ಹೊರಗೆ ಹಾಕಬೇಕು ಎಂಬ ಆದೇಶವನ್ನು ತಾಲೂಕಾಡಳಿತ ಹೊರಡಿಸಿ ರಾಜ್ಯ ಸರ್ಕಾರದ ಆಶಯವನ್ನು ಜನತೆಗೆ ತಲುಪಿಸಲು ಅಧಿಕಾರಿಗಳು ಮುಂದಾಗುತ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಗೃಹ ಜ್ಯೋತಿ ಯೋಜನೆ ಜುಲೈನಿಂದ ಅನ್ವಯ: ಸಚಿವ ಕೆ.ಜೆ.ಜಾರ್ಜ್‌

ಪಟ್ಟಣದಲ್ಲಿನ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ಗ್ರಾಹಕರಿಂದ ಅಂದರೆ ಆಧಾರ್‌ಗೆ ಪಾನ್‌ ಕಾರ್ಡ್‌ ಲಿಂಕ್‌ ಮಾಡುವಾಗ 1100, ಈಗ ಸೇವಾ ಶುಲ್ಕ  20 ಇದ್ದರೆ 50 ಪಡೆಯುವುದು ಸಾಮಾನ್ಯವಾಗಿದೆ. ಪರಿಣಾಮ ಗ್ರಾಹಕರಿಂದ ಬೇಕಾಬಿಟ್ಟಿಯಾಗಿ ಹಣವಸೂಲಿ ಮಾಡುತ್ತಿದ್ದರೂ ಸಹ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ವಿಪರ್ಯಾಸ.

ಗಣೇಶ ಗುಗಲೋತ್ತರ ಅಧ್ಯಕ್ಷ, ಕರ್ನಾಟಕ ಜನಪರ ಸೇವಾ ಸಮಿತಿ

ಸರ್ಕಾರದ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಸುವ ಗ್ರಾಹಕರಿಂದ ಗ್ರಾಮ ಒನ್‌ ಹಾಗೂ ಸೇವಾ ಕೇಂದ್ರಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವ ಮೌಖಿಕ ದೂರುಗಳು ಬಂದಿವೆ. ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಅಂತ ಗಜೇಂದ್ರಗಡ ತಹಸೀಲ್ದಾರ್‌ ರಜನಿಕಾಂತ್‌ ಕೆಂಗೇರಿ ತಿಳಿಸಿದ್ದಾರೆ. 

click me!