
ಬೆಂಗಳೂರು(ನ.18): ‘ಗೃಹ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ವಿವಿಧ ಪೊಲೀಸ್ ಠಾಣೆಗಳಿಂದ 1 ಲಕ್ಷ ಕೋಟಿ ಲಂಚ ವಸೂಲಿ ಮಾಡಲಾಗಿದೆ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿದರೆ ಎಂಟು ಜನರ ಹೆಸರು ಬಹಿರಂಗಗೊಳಿಸಲು ನಾನು ಸಿದ್ಧನಿದ್ದೇನೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿರುವ 188 ಪೊಲೀಸ್ ಠಾಣೆಯಲ್ಲಿನ ವರ್ಗಾವಣೆ ದಂಧೆಯಲ್ಲಿಯೇ .250 ಕೋಟಿ ವಸೂಲಿ ಮಾಡಲಾಗಿದೆ. ಈ ಬಗ್ಗೆ ಹಿರಿಯ ಪೊಲೀಶ್ ಅಧಿಕಾರಿಯೊಬ್ಬರು ರಹಸ್ಯವಾಗಿ ಮಾಹಿತಿ ನೀಡಿದ್ದು, ಈ ವಿಚಾರವಾಗಿಯೂ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 144 ಪೊಲೀಸ್ ಠಾಣೆ, 44 ಟ್ರಾಫಿಕ್ ಪೊಲೀಸ್ ಠಾಣೆ ಸೇರಿ 188 ಠಾಣೆಗಳಿವೆ. ಇವುಗಳಿಗೆ ಪೊಲೀಸ್ ವರ್ಗಾವಣೆಯಿಂದ .250 ಕೋಟಿ ವಾರ್ಷಿಕ ಆದಾಯ ಬರುತ್ತಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಹುದ್ದೆಗೆ .1.50 ಕೋಟಿ. ಉಪ್ಪಾರಪೇಟೆ ಠಾಣೆಯಲ್ಲಿ .1.25 ಕೋಟಿ, ಬಸವೇಶ್ವರ ನಗರ .1 ಕೋಟಿ ನಿಗದಿ ಮಾಡಲಾಗಿದೆ ಎಂದು ದೂರಿದರು.
ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ, ಕಾಂಗ್ರೆಸ್ ಗಂಭೀರ ಆರೋಪಕ್ಕೆ ಬಿಜೆಪಿ ತಿರುಗೇಟು
ಪೊಲೀಸ್ ಠಾಣೆಗಳಿಂದ ಪ್ರತಿನಿತ್ಯ ಆಗುತ್ತಿರುವ ವಸೂಲಿ .5 ಕೋಟಿ. ತಿಂಗಳಿಗೆ .150 ಕೋಟಿ ವಸೂಲಿ ಆಗುತ್ತಿದೆ. ಕಳೆದ ಮೂರುವರೆ ವರ್ಷಗಳಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದ ನಂತರ ಸುಮಾರು 1 ಲಕ್ಷ ಕೋಟಿ ವಸೂಲಿ ಮಾಡಲಾಗಿದೆ. ಇದು ಹಾಲಿ 6 ಸಚಿವರು ಹಾಗೂ ಇಬ್ಬರು ಆಪ್ತರ ಬಳಿಯಿದೆ. ಈ ವಿಚಾರವಾಗಿ ಹಾಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಇಡಿ ಅಥವಾ ಸಿಬಿಐ ಮೂಲಕ ತನಿಖೆ ಆದರೆ 8 ಜನರ ಹೆಸರನ್ನು ನಾನೇ ನೀಡುತ್ತೇನೆ ಎಂದು ಹೇಳಿದರು.
ಇಡಿ ಅವರು ಸಣ್ಣ ಪುಟ್ಟ ಪ್ರಕರಣ ಇಟ್ಟುಕೊಂಡು ಅವರು ಸಾಯುವವರೆಗೂ ಬಿಡುವುದಿಲ್ಲ. ನೀವು ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಿ. ಬೊಮ್ಮಾಯಿ ಅವರೇ ನಿಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದೆ. ನಿಮ್ಮ ಸುತ್ತಮುತ್ತಲಿನವರೇ ಈ 1 ಲಕ್ಷ ಕೋಟಿ ಒಡೆಯರು. ಬೊಮ್ಮಾಯಿ ಅವರೇ ನೀವು ಸಂಕಲ್ಪ ಯಾತ್ರೆ ಮಾಡಲು ಹೊರಟಿದ್ದೀರಿ. ನಿಮ್ಮ ಸಂಕಲ್ಪ ಯಾತ್ರೆಯಲ್ಲಿ 3 ಗಂಟೆ ಭಾಷಣದಲ್ಲಿ ಎರಡೂವರೆ ಗಂಟೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಬೈಯ್ಯಲು ಮೀಸಲಿಡುತ್ತೀರಿ. ಈಗ ನೀವು ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.