3 ದಿನ ಕಳೆದರೂ ಪತ್ತೆಯಾಗದ ಚಿರತೆ: ಅರಣ್ಯ ಸಿಬ್ಬಂದಿಯಿಂದ ತೀವ್ರ ಶೋಧ

By Suvarna NewsFirst Published Aug 7, 2022, 3:29 PM IST
Highlights

ಕಳೆದ ಎರಡು ದಿನಗಳ ಹಿಂದೆ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕ ಸಿದರಾಯಿ ಮೇಲೆ ದಾಳಿ ಮಾಡಿದ್ದ ಚಿರತೆ ಇನ್ನೂ ಪತ್ತೆಯಾಗದೇ ಇರುವುದು ಬೆಳಗಾವಿ ಜನರಲ್ಲಿ ಆತಂಕವನ್ನು ಮೂಡಿಸಿದೆ. 

ಬೆಳಗಾವಿ: ಕಳೆದ ಎರಡು ದಿನಗಳ ಹಿಂದೆ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕ ಸಿದರಾಯಿ ಮೇಲೆ ದಾಳಿ ಮಾಡಿದ್ದ ಚಿರತೆ ಇನ್ನೂ ಪತ್ತೆಯಾಗಿಲ್ಲ. ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿ ಪೊದೆಯಲ್ಲಿ ಮರೆಯಾಗಿದ್ದ ಚಿರತೆ ಶೋಧಕ್ಕಾಗಿ ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆದಿತ್ತು. ಸಾರ್ವಜನಿಕರು ರಾತ್ರಿ ವೇಳೆ ಮನೆಯಿಂದ ಹೊರ ಬರಬಾರದು, ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಹಾಗೂ ಬೆಳಗ್ಗೆ ವಾಯುವಿಹಾರಕ್ಕೆ ತೆರಳುವರು ಜಾಗರೂಕತೆ ವಹಿಸಬೇಕೆಂದು‌ ಪೊಲೀಸರು ಮೈಕ್‌ನಲ್ಲಿ ಅನೌನ್ಸ್ ಮಾಡುವುದಷ್ಟೇ ಅಲ್ಲದೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಚಿರತೆ ಪ್ರತ್ಯಕ್ಷವಾಗಿ ಮೂರು ದಿನಗಳು ಕಳೆಯುತ್ತಾ ಬಂದರೂ ಚಿರತೆಯ ಪತ್ತೆಯೇ ಇಲ್ಲ ಹೀಗಾಗಿ ಸಾರ್ವಜನಿಕರು ಆತಂಕದಲ್ಲಿ ಇದ್ದಾರೆ.

ಗಾಲ್ಫ್ ಮೈದಾನಕ್ಕೆ ಚಿರತೆ ನುಗ್ಗಿರುವ ಶಂಕೆ

ಇನ್ನು ಚಿರತೆ ಸೆರೆಗೆ ಮೊನ್ನೆಯೇ ಗದಗ ಹಾಗೂ ಭೀಮಗಡ ಅರಣ್ಯ ವಲಯ ವ್ಯಾಪ್ತಿಯ ತಜ್ಞ ಸಿಬ್ಬಂದಿ ಬೆಳಗಾವಿಗೆ ಆಗಮಿಸಿದ್ದಾರೆ. ಚಿರತೆ ಪ್ರತ್ಯಕ್ಷವಾದ ಜಾಧವ ನಗರದಲ್ಲಿ ಬೋನು ಹಾಗೂ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಬೋನಿನಲ್ಲಿ ನಾಯಿ ಇಟ್ಟು ಎರಡು ದಿನಗಳೇ ಕಳೆದರೂ ಚಿರತೆ ಪತ್ತೆಯಾಗದ ಹಿನ್ನೆಲೆ ಒಂದು ಕಿಮೀ ಅಂತರದಲ್ಲಿ ಇರುವ ಗಾಲ್ಫ್ ಮೈದಾನಕ್ಕೆ ಚಿರತೆ ನುಗ್ಗಿರುವ ಶಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜಾಧವ ನಗರದಲ್ಲಿ ಅಳವಡಿಕೆ ಮಾಡಿದ್ದ ಬೋನನ್ನು ಗಾಲ್ಫ್ ಮೈದಾನಕ್ಕೆ ಸ್ಥಳಾಂತರ ಮಾಡಿದ್ದಾರೆ. ಅಲ್ಲದೇ ಮತ್ತೆ ಮೂರು ಬೋನುಗಳನ್ನು ಗಾಲ್ಫ್ ಮೈದಾನದಲ್ಲಿ ಇರಿಸಿದ್ದು ಇನ್ನು ಮೂರು ಬೋನುಗಳನ್ನು ತಂದು ಗಾಲ್ಫ್ ಮೈದಾನದಲ್ಲಿ ಅಳವಡಿಕೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. 

ಚಿಕ್ಕಬಳ್ಳಾಪುರ: ಚಿರತೆ ಕಾಟದಿಂದ ಬೇಸತ್ತ ರೈತರು, ಆತಂಕದಲ್ಲಿ ಜನತೆ

ರಕ್ಷಣಾ ಇಲಾಖೆಗೆ ಸೇರಿದ 250 ಎಕರೆ ಅರಣ್ಯ ಪ್ರದೇಶದಲ್ಲಿ ಗಾಲ್ಫ್ ಮೈದಾನ ಇದ್ದು ಇದರ ಸುತ್ತಲೂ ವಸತಿ ಪ್ರದೇಶ ಇದೆ. ಹೀಗಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಕಳೆದ ವರ್ಷವೂ ಇದೇ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷವಾದ ವದಂತಿ ಹಬ್ಬಿತ್ತು. ಬಳಿಕ ಎರಡು ಬೋನುಗಳನ್ನು ಇರಿಸಿ ಚಿರತೆ ಸೆರೆಗೆ ಶೋಧ ನಡೆಸಿದಾಗ ಕಾಡು ಬೆಕ್ಕು ಪತ್ತೆಯಾಗಿತ್ತು. ಜಾಧವ ನಗರದಲ್ಲೂ ಕಾರ್ಮಿಕನ ಮೇಲೆ ದಾಳಿ ಮಾಡಿದ್ದು ಚಿರತೆ ಅನ್ನೋದು ಕನ್ಫರ್ಮ್ ಆಗಿಲ್ಲ ಅಂತಾ ಬೆಳಗಾವಿ ವಲಯ ಆರ್‌ಎಫ್‌ಒ ರಾಕೇಶ್ ಅರ್ಜುನವಾಡ ತಿಳಿಸಿದ್ದರು.

ಬೆಳಗಾವಿ ಜಿಲ್ಲಾಡಳಿತ ವಿರುದ್ಧ ಕುಂದಾನಗರಿ ಜನರ ತೀವ್ರ ಆಕ್ರೋಶ

ಇನ್ನು ಮೂರು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಿದರೂ ಚಿರತೆ ಪ್ರತ್ಯಕ್ಷವಾಗದ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಜಾಧವ ನಗರ ನಿವಾಸಿ ವಕೀಲ ದಿನಕರ ಶೆಟ್ಟಿ, ಜಾಧವ ನಗರದಲ್ಲಿ ನಾನು 20 ವರ್ಷಗಳಿಂದ ವಾಸವಿದ್ದೇವೆ. ಎನ್‌ಎ ಆಗದ ಪ್ಲಾಟ್‌ನಲ್ಲಿ ಮನೆಗಳನ್ನು ಕಟ್ಟಿದ್ದಾರೆ. ತಮಗೆ ಹೇಗೆ ಬೇಕು ಹಾಗೇ ಕಟ್ಟಿಕೊಂಡು ಬಿಟ್ಟು ಬಿಡ್ತಾರೆ. ಖುಲ್ಲಾ ಜಾಗದಲ್ಲಿ ಗಿಡ ಕಂಟಿ ಬೆಳೆದಿವೆ. ಎದುರುಗಡೆ ಶಾಲೆ ಇದ್ದು ಅಪಾರ್ಟ್ ಮೆಂಟ್ ಸಹ ಇದೆ. ಮಕ್ಕಳು ಹೊರಗೆ ಅಡ್ಡಾಡುತ್ತಿದ್ದಾರೆ. ಈಗ ಇಲ್ಲಿ ಜಾಧವ ನಗರದಲ್ಲಿ ಯಾವ ಅರಣ್ಯ ಇಲಾಖೆ ಸಿಬ್ಬಂದಿ ಇಲ್ಲ. ಕಳೆದ ಬಾರಿ ಗಾಲ್ಫ್ ಮೈದಾನದಲ್ಲಿ ಕಾಡು ಬೆಕ್ಕು ಪ್ರತ್ಯಕ್ಷವಾಗಿತ್ತು.

Shivamogga: ಜೋರಾಗಿ ಹಾರ್ನ್‌ ಬಾರಿಸಿ ಚಿರತೆ ಓಡಿಸಿದ ಪುರೋಹಿತ

ಡ್ರೋನ್ ಕ್ಯಾಮರಾ ಹಾಕಿ ಚಿರತೆಗೆ ಶೋಧ ಕಾರ್ಯಾಚರಣೆ ನಡೆಸಬೇಕು ಜನರ ಆತಂಕ ನಿವಾರಿಸಬೇಕು. ಈ ವಿಚಾರದಲ್ಲಿ ಬೆಳಗಾವಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ' ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿದ್ದು ಚಿರತೆಯೋ ಅಥವಾ ಕಾಡು ಬೆಕ್ಕು ಎಂಬುದು ಖಚಿತವಾಗಿಲ್ಲ. ಆದರೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ ದೃಶ್ಯ ನೋಡಿದ್ರೆ ಚಿರತೆಯಂತೆಯೇ ಕಾಣುತ್ತಿದ್ದು ಆದಷ್ಟು ಬೇಗ ಅದನ್ನ ಪತ್ತೆ ಹಚ್ಚಿ ಆತಂಕ ದೂರ ಮಾಡಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. 
 

click me!