ಕೊಡಚಾದ್ರಿಗೆ ಬಂದಿದ್ದ ಬೆಂಗಳೂರಿನ ಯುವ ಚಾರಣಿಗ ಹೃದಯಾಘಾತದಿಂದ ಸಾವು: ಒಂದೇ ತಿಂಗಳಲ್ಲಿ ಎರಡನೇ ದುರಂತ!

Published : Jul 18, 2026, 01:03 PM IST
Bengaluru youth death in Kodachadri

ಸಾರಾಂಶ

ಕೊಡಚಾದ್ರಿ ಬೆಟ್ಟಕ್ಕೆ ಚಾರಣಕ್ಕೆಂದು ಬಂದಿದ್ದ ಬೆಂಗಳೂರಿನ 28 ವರ್ಷದ ಯುವಕ ಶ್ರೀಕಾಂತ್, ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೊಸನಗರದ ಸ್ನೇಹಿತರ ಮನೆಯಲ್ಲಿ ತಂಗಿದ್ದಾಗ ಈ ದುರಂತ ಸಂಭವಿಸಿದ್ದು, ತಿಂಗಳ ಅಂತರದಲ್ಲಿ ಕೊಡಚಾದ್ರಿಯಲ್ಲಿ ನಡೆದ ಎರಡನೇ ಸಾವಿನ ಘಟನೆ ಇದಾಗಿದೆ.

ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ಹಾಗೂ ಚಾರಣ ತಾಣವಾದ ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ತಡರಾತ್ರಿ ಸಂಭವಿಸಿದ ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಶ್ರೀಕಾಂತ್ (28) ಎಂದು ಗುರುತಿಸಲಾಗಿದೆ. ಕೊಡಚಾದ್ರಿ ಶಿಖರದ ಸೌಂದರ್ಯವನ್ನು ಸವಿಯಲು ಉತ್ಸಾಹದಿಂದ ಬಂದಿದ್ದ ಯುವಕನೊಬ್ಬ ಹೀಗೆ ಅರ್ಧದಲ್ಲೇ ಪ್ರಾಣ ಕಳೆದುಕೊಂಡಿರುವುದು ತೀವ್ರ ಬೇಸರ ಮೂಡಿಸಿದೆ.

ಸ್ನೇಹಿತರ ಮನೆಯಲ್ಲಿ ತಂಗಿದ್ದಾಗ ಸಂಭವಿಸಿದ ದುರಂತ

ಮೃತ ಶ್ರೀಕಾಂತ್ ಅವರು ತಮ್ಮ ಸ್ನೇಹಿತರ ತಂಡದೊಂದಿಗೆ ಜುಲೈ 17ರಂದು ಕೊಡಚಾದ್ರಿ ಶಿಖರ ವೀಕ್ಷಣೆ ಮತ್ತು ಚಾರಣದ (Trekking) ಉದ್ದೇಶದಿಂದ ಹೊಸನಗರಕ್ಕೆ ಆಗಮಿಸಿದ್ದರು. ಚಾರಣಕ್ಕೆ ತೆರಳುವ ಮುನ್ನ ಅವರು ಹೊಸನಗರ ತಾಲೂಕಿನ ಸಂಪೇಕಟ್ಟೆ ಸಮೀಪವಿರುವ ಕಟ್ಟಿನಹೊಳೆ ಗ್ರಾಮದಲ್ಲಿದ್ದ ತಮ್ಮ ಆಪ್ತ ಸ್ನೇಹಿತನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಜುಲೈ 18ರ ಮುಂಜಾನೆ ಎಲ್ಲರೂ ಒಟ್ಟಾಗಿ ಕೊಡಚಾದ್ರಿ ಶಿಖರಕ್ಕೆ ತೆರಳಿ ಚಾರಣ ಆರಂಭಿಸಬೇಕು ಎಂದು ಯೋಜಿಸಿದ್ದರು.

ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು. ಜುಲೈ 17ರ ತಡರಾತ್ರಿ ಶ್ರೀಕಾಂತ್ ಅವರ ಆರೋಗ್ಯದಲ್ಲಿ ಏಕಾಏಕಿ ತೀವ್ರ ಏರುಪೇರು ಕಾಣಿಸಿಕೊಂಡಿದೆ. ಎದೆನೋವಿನಿಂದ ಬಳಲಿದ ಅವರು, ತಂಗಿದ್ದ ಮನೆಯಲ್ಲೇ ದಿಢೀರನೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಎಚ್ಚೆತ್ತ ಸ್ನೇಹಿತರು ಮತ್ತು ಸ್ಥಳೀಯರು ಅವರನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಶ್ರೀಕಾಂತ್ ಮೃತಪಟ್ಟಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ತೀವ್ರ ಹೃದಯಾಘಾತದಿಂದಲೇ (Heart Attack) ಸಾವು ಸಂಭವಿಸಿದೆ ಎಂದು ಅಧಿಕೃತವಾಗಿ ದೃಢಪಡಿಸಿದ್ದಾರೆ.

ಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆಗೆ ಸಂಬಂಧಿಸಿದಂತೆ ಹೊಸನಗರ ತಾಲೂಕಿನ ಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಬೆಂಗಳೂರಿನಲ್ಲಿರುವ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆದಿವೆ.

ಕೊಡಚಾದ್ರಿಯಲ್ಲಿ ತಿಂಗಳೊಳಗೆ ನಡೆದ ಎರಡನೇ ಸಾವು!

ಕೊಡಚಾದ್ರಿ ಬೆಟ್ಟದ ಪರಿಸರದಲ್ಲಿ ಪ್ರವಾಸಿಗರು ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ಚಾರಣಿಗರಲ್ಲಿ ಆತಂಕ ಮೂಡಿಸಿದೆ. ಏಕೆಂದರೆ, ಕೇವಲ ಒಂದು ತಿಂಗಳ ಅಂತರದಲ್ಲಿ ಇಲ್ಲಿ ನಡೆದಿರುವ ಎರಡನೇ ದುರಂತ ಇದಾಗಿದೆ. ಇದಕ್ಕೂ ಮುನ್ನ, ಜೂನ್ 27 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಮಾಜಿ ಅಧ್ಯಕ್ಷರಾದ ಭಾ.ಮಾ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ ಕೂಡ ಕೊಡಚಾದ್ರಿ ಬೆಟ್ಟಕ್ಕೆ ಚಾರಣ ಬಂದಿದ್ದಾಗ ಇದೇ ರೀತಿ ಹಠಾತ್ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದರು. ಈ ಘಟನೆಯ ಮಾಸುವ ಮುನ್ನವೇ ಈಗ ಮತ್ತೊಬ್ಬ 28 ವರ್ಷದ ಬೆಂಗಳೂರಿನ ಯುವಕ ಬಲಿಯಾಗಿರುವುದು ಪ್ರವಾಸೋದ್ಯಮ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.

PREV
Read more Articles on
click me!

Recommended Stories

Koppal: ಪರಿಹಾರ ನೀಡದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ಡಿಪೋ ಬಸ್ ಜಪ್ತಿ
ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ತನ್ನದಲ್ಲದ ತಪ್ಪಿಗೆ ಆಸ್ಪತ್ರೆ ಸೇರಿದ ಮಹಿಳೆ!