
ಚಿತ್ರದುರ್ಗ: ಅನ್ನ ಹಾಗೂ ಪಾಯಸ ಅತಿಯಾಗಿ ತಿಂದು ಜೀರ್ಣಿಸಿಕೊಳ್ಳಲಾಗದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದ ‘ದೇವರ ಕೋಣ’ನಿಗೆ ಪಶುವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ, ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಪಶು ಇಲಾಖೆಯ ಸಕಾಲಿಕ ಹಾಗೂ ಅತ್ಯಂತ ಜವಾಬ್ದಾರಿಯುತ ಈ ಕಾರ್ಯಕ್ಕೆ ನಾಗಸಮುದ್ರ ಗ್ರಾಮಸ್ಥರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ನಾಗಸಮುದ್ರ ಗ್ರಾಮದಲ್ಲಿ ದೇವರಿಗೆ ಬಿಟ್ಟಿದ್ದ ಕೋಣವು ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಕ್ತರು ನೀಡಿದ್ದ ಅನ್ನ ಮತ್ತು ಪಾಯಸವನ್ನು ಅತಿಯಾಗಿ ಸೇವಿಸಿತ್ತು. ಆದರೆ, ಕಳೆದ 10 ದಿನಗಳಿಂದ ಆ ಆಹಾರ ಜೀರ್ಣವಾಗದೆ ಕೋಣ ತೀವ್ರ ಅಸ್ವಸ್ಥಗೊಂಡಿತ್ತು. ಯಾವುದೇ ಆಹಾರ ಅಥವಾ ನೀರನ್ನು ತೆಗೆದುಕೊಳ್ಳಲಾಗದೆ ಕೋಣದ ಹೊಟ್ಟೆ ಉಬ್ಬರಿಸಿಕೊಂಡು, ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಹಳ್ಳಿಯ ಆಸ್ತಿಯಂತಿದ್ದ ದೇವರ ಕೋಣದ ಈ ಸ್ಥಿತಿಯನ್ನು ಕಂಡು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಕೋಣದ ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪಶುಪಾಲನಾ ಇಲಾಖೆಯ ಅಧಿಕಾರಿಗಳು ನಾಗಸಮುದ್ರ ಗ್ರಾಮಕ್ಕೆ ಧಾವಿಸಿದರು. ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ (ADA) ಡಾ. ವಿಜಯಕುಮಾರ್ ಅವರ ನೇತೃತ್ವದ ವೈದ್ಯರ ತಂಡವು ತಕ್ಷಣವೇ ಕಾರ್ಯಪ್ರವೃತ್ತವಾಯಿತು.
ಕೋಣಕ್ಕೆ ಜೀರ್ಣಾಂಗವ್ಯೂಹದ ಸಮಸ್ಯೆಯಾಗಿರುವುದನ್ನು ಪತ್ತೆಹಚ್ಚಿದ ವೈದ್ಯರು, ಅದಕ್ಕೆ ‘ರುಮಿನೊಟಮಿ’ (Ruminotomy - ಜಾನುವಾರುಗಳ ಹೊಟ್ಟೆಯ ಮೊದಲ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆರೆಯುವ ಪ್ರಕ್ರಿಯೆ) ಮಾಡಲು ನಿರ್ಧರಿಸಿದರು. ಅತ್ಯಂತ ಜಾಗರೂಕತೆಯಿಂದ ನಡೆಸಲಾದ ಈ ಶಸ್ತ್ರಚಿಕಿತ್ಸೆಯು ಸಂಪೂರ್ಣವಾಗಿ ಯಶಸ್ವಿಯಾಗಿದೆ.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪಶುವೈದ್ಯರು ಕೋಣದ ಹೊಟ್ಟೆಯನ್ನು ತೆರೆದಾಗ, ಅಲ್ಲಿ ಕಳೆದ 10 ದಿನಗಳಿಂದ ಜೀರ್ಣವಾಗದೆ ಕೊಳೆಯುತ್ತಿದ್ದ ಅನ್ನ ಮತ್ತು ಪಾಯಸದ ಮಿಶ್ರಣ ಪತ್ತೆಯಾಗಿದೆ. ವೈದ್ಯರು ಸತತ ಪ್ರಯತ್ನ ನಡೆಸಿ ಕೋಣದ ಹೊಟ್ಟೆಯಿಂದ ಬರೋಬ್ಬರಿ 6 ಬಕೆಟ್ಗಳಷ್ಟು ಜೀರ್ಣವಾಗದ ತ್ಯಾಜ್ಯ ಆಹಾರವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ಕೋಣನಿಗೆ ಅಗತ್ಯ ಔಷಧೋಪಚಾರ ಹಾಗೂ ಗ್ಲುಕೋಸ್ ನೀಡಲಾಗಿದ್ದು, ಪ್ರಸ್ತುತ ಅದರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಕೋಣವು ಪ್ರಾಣಾಪಾಯದಿಂದ ಪಾರಾಗಿದ್ದು, ಸಹಜ ಸ್ಥಿತಿಗೆ ಮರಳುತ್ತಿದೆ. ತಮ್ಮ ನೆಚ್ಚಿನ ದೇವರ ಕೋಣವನ್ನು ಕಷ್ಟದ ಪರಿಸ್ಥಿತಿಯಲ್ಲೂ ಶಸ್ತ್ರಚಿಕಿತ್ಸೆಯ ಮೂಲಕ ಬದುಕುಳಿಸಿದ ಡಾ. ವಿಜಯಕುಮಾರ್ ಹಾಗೂ ಅವರ ಪಶುವೈದ್ಯಕೀಯ ತಂಡದ ಅಸಾಧಾರಣ ಕಾರ್ಯಕ್ಕೆ ನಾಗಸಮುದ್ರದ ಹಳ್ಳಿಗರು ಭಾವುಕರಾಗಿ ಮುಕ್ತಕಂಠದಿಂದ ಕೃತಜ್ಞತೆ ಸಲ್ಲಿಸಿದ್ದಾರೆ.