Bidar: ಭಾಲ್ಕಿ ಕ್ಷೇತ್ರ ಅಭಿವೃದ್ಧಿಗೆ 24 ಕೋಟಿ: ಶಾಸಕ ಈಶ್ವರ ಖಂಡ್ರೆ

By Kannadaprabha NewsFirst Published Jan 30, 2023, 9:16 PM IST
Highlights

ಭಾಲ್ಕಿ ಪಟ್ಟಣವನ್ನು ಸುಂದರವನ್ನಾಗಿಸುವ ಗುರಿ ಹೊಂದಿದ್ದು, ಕುಡಿಯುವ ನೀರು, ರಸ್ತೆ, ಚರಂಡಿ, ಉದ್ಯಾನವನ ಅಭಿವೃದ್ಧಿ ಬೀದಿದೀಪ ಅಳವಡಿಕೆ ಸೇರಿ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. 

ಭಾಲ್ಕಿ (ಜ.30): ಭಾಲ್ಕಿ ಪಟ್ಟಣವನ್ನು ಸುಂದರವನ್ನಾಗಿಸುವ ಗುರಿ ಹೊಂದಿದ್ದು, ಕುಡಿಯುವ ನೀರು, ರಸ್ತೆ, ಚರಂಡಿ, ಉದ್ಯಾನವನ ಅಭಿವೃದ್ಧಿ ಬೀದಿದೀಪ ಅಳವಡಿಕೆ ಸೇರಿ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. ಹಳೇ ಪಟ್ಟಣದಲ್ಲಿ ವಿವಿಧ ಯೋಜನೆಯಡಿ ರು.18 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ಪಟ್ಟಣದ ಅಭಿವೃದ್ಧಿಗೆ ಪ್ರತಿವರ್ಷ 2-3 ಕೋಟಿ ರು. ಮಾತ್ರ ಅನುದಾನ ಬರುತ್ತಿತ್ತು. ಆದರೆ, ನಾನು ಪೌರಾಡಳಿತ ಸಚಿವನಾದ ಸಂದರ್ಭದಲ್ಲಿ ಬೀದರ್‌ ಜಿಲ್ಲೆಯ ಎಲ್ಲ ಪಟ್ಟಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ ಸುಮಾರು ರು.350 ಕೋಟಿ ಅನುದಾನ ಒದಗಿಸಿದ್ದೇನೆ ಎಂದರು.

ಅದರಲ್ಲಿ ಭಾಲ್ಕಿ ಪಟ್ಟಣ ಸಿಂಹಪಾಲು 110 ಕೋಟಿ ರು. ಅನುದಾನ ನೀಡಿದ್ದೇನೆ. ಆ ಕಾರಣಕ್ಕಾಗಿಯೇ ಅದೇ ಅನುದಾನದಲ್ಲಿ ಇಂದಿಗೂ ಕಾಮಗಾರಿಗಳು ನಡೆಯುತ್ತಿವೆ. ಈ ಹಿಂದೆ ಪಟ್ಟಣಕ್ಕೆ ಕೊಟ್ಟ110 ಕೋಟಿ ಅನುದಾನದಲ್ಲಿ ರು.10 ಕೋಟಿ ಉಳಿತಾಯವಾಗಿದೆ. ಹಾಗಾಗಿ ಪಟ್ಟಣದ ವಿವಿಧೆಡೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜತೆಗೆ ನಗರೋತ್ಥಾನ 4ರಲ್ಲಿ ರು.6.76 ಕೋಟಿ, ವಿವಿಧ ಯೋಜನೆಯಡಿ ರು.8 ಕೋಟಿ ಸೇರಿ ಒಟ್ಟು 24 ಕೋಟಿ ರು. ಅನುದಾನವನ್ನು ಪಟ್ಟಣದ ವಿವಿಧೆಡೆ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲು ಒದಗಿಸಲಾಗಿದೆ. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 37 ಸಾವಿರ ರೈತರಿಗಿಲ್ಲ ಪಿಎಂ ಕಿಸಾನ್‌ ನಿಧಿ!

ಅದರಲ್ಲಿ ರು.18 ಕೋಟಿ ಅನುದಾನ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಉಳಿದ ಅನುದಾನಕ್ಕೆ ಶೀಘ್ರ ಟೆಂಡರ್‌ ಮಾಡಿಸಲಾಗುವುದು ಎಂದರು. ಪುರಸಭೆ ಅಧ್ಯಕ್ಷ ಅನಿಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ್‌, ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಪುರಸಭೆ ಮುಖ್ಯಾಧಿಕಾರಿ ಸ್ವಾಮಿದಾಸ್‌, ಪುರಸಭೆ ಸದಸ್ಯರು ಇದ್ದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.

ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಯಾರೊಬ್ಬರ ಸ್ವತ್ತಲ್ಲ: ಕೆಲವರು ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವುದು ದೇಶದ ಹಿತದಿಂದ ಸರಿಯಲ್ಲ ಅಲ್ಲದೇ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಯಾರೊಬ್ಬರ ಸ್ವತ್ತಲ್ಲ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. ಅವರು ಪಟ್ಟಣದ ಟೌನ್‌ಹಾಲ್‌ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 74ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯ, ರಕ್ಷಣೆಗಾಗಿ ಹಲವರು ರಕ್ತ ಹರಿಸಿದ್ದಾರೆ, ಪ್ರಾಣ ತ್ಯಾಗ ಮಾಡಿದ್ದಾರೆ. ಅಂಥವರನ್ನು ಗೌರವಿಸುವುದು, ಸ್ಮರಿಸುವುದು ಎಲ್ಲರ ಕರ್ತವ್ಯ. ಆದರೆ, ಕೆಲವರು ಏನು ಮಾಡದೇ ಬರೀ ನಕಲಿ ದೇಶಭಕ್ತಿ ತೋರಿಸುತ್ತಿರುವುದರಿಂದ ದೇಶಕ್ಕೆ ಅಪಾಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

ನಾನು ಹಿಂದೂ ವಿರೋಧಿಯಲ್ಲ: ಬಿಜೆಪಿ, ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಭಾರತ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿರುವ ಈ ಸಂವಿಧಾನ ಎಲ್ಲ ಭಾರತೀಯರ ಆಶಯಗಳನ್ನು ಒಳಗೊಂಡಿದೆ. ಇಂತಹ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕೆಂದರು. ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. 12ನೇ ಶತಮಾನದ ಶರಣರ ಎಲ್ಲ ಆಶಯಗಳನ್ನು ಸಂವಿಧಾನದಲ್ಲಿ ಅಡಗಿವೆ. ಡಾ.ಅಂಬೇಡ್ಕರ್‌ ಅವರು ಸಾಕಷ್ಟುಅಧ್ಯಯನ ನಡೆಸಿ ದೇಶಕ್ಕೆ ಅದ್ಭುತ ಸಂವಿಧಾನ ನೀಡಿದ್ದಾರೆ. ಈ ಸಂವಿಧಾನದಲ್ಲಿ ಎಲ್ಲ ವರ್ಗದವರಿಗೂ ನ್ಯಾಯ ಕಲ್ಪಿಸಿದ್ದಾರೆ. ಇಂತಹ ಗ್ರಂಥವನ್ನು ಎಲ್ಲರೂ ಪೂಜಿಸಬೇಕು. ವಿದ್ಯಾರ್ಥಿಗಳು ರಾಷ್ಟ್ರಪ್ರೇಮ, ದೇಶಪ್ರೇಮ ಬೆಳೆಸಿಕೊಂಡು ದೇಶಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.

click me!