ಜನೋತ್ಸವಕ್ಕೆ ಕೋಲಾರ ಜಿಲ್ಲೆಯಿಂದ 200 ಬಸ್‌: ಸಚಿವ ಮುನಿರತ್ನ

By Govindaraj SFirst Published Aug 30, 2022, 1:22 AM IST
Highlights

ಬಿಜೆಪಿ ಸರ್ಕಾರ ಆಡಳಿತದಲ್ಲಿನ ಸಾಧನೆಯ ಜನೋತ್ಸವ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದಲ್ಲಿ ಸೆ. 8ರಂದು ಅಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ 200 ಬಸ್ಸುಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಅಗಮಿಸಿ ಯಶಸ್ವಿಗೊಳಿಸಬೇಕೆಂದು ಮುಖಂಡರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮನವಿ ಮಾಡಿದರು. 

ಕೋಲಾರ (ಆ.30): ಬಿಜೆಪಿ ಸರ್ಕಾರ ಆಡಳಿತದಲ್ಲಿನ ಸಾಧನೆಯ ಜನೋತ್ಸವ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದಲ್ಲಿ ಸೆ. 8ರಂದು ಅಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ 200 ಬಸ್ಸುಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಅಗಮಿಸಿ ಯಶಸ್ವಿಗೊಳಿಸಬೇಕೆಂದು ಮುಖಂಡರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮನವಿ ಮಾಡಿದರು. ನಗರದ ಹಾಲಿಸ್ಟಾರ್‌ ಭವನದಲ್ಲಿ ಭಾನುವಾರ ಜಿಲ್ಲಾ ಬಿಜೆಪಿ ಪಕ್ಷ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಹೊರತುಪಡಿಸಿ ಯಾರೂ ಗೆಲ್ಲಲು ಸಾಧ್ಯವಿಲ್ಲ. 

ಇತರೆ ಪಕ್ಷಗಳು ಹೊರಗಿನವರನ್ನು ಕರೆ ತಂದು ಗೆಲ್ಲುವ ಭ್ರಮೆಯಲ್ಲಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ 16 ತಿಂಗಳು ಶ್ರಮಿಸಿ ಜನಪರ ಕಾರ್ಯ ನಿರ್ವಹಿಸಿದ್ದರೆ ಇಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು. ಲೋಕಸಭಾ ಸದಸ್ಯ ಎಸ್‌. ಮುನಿಸ್ವಾಮಿ ಮಾತನಾಡಿ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತಲಾ 2 ಸಾವಿರ ರು, ಗುಂಡು, ತುಂಡು ನೀಡಿ ಕರೆದು ಕೊಂಡು ಹೋದರು. ಅದರೆ ಬಿಜೆಪಿಯ ಜನೋತ್ಸವ ಕಾರ್ಯಕ್ರಮಕ್ಕೆ ಇದು ಯಾವೂದೂ ಇಲ್ಲ. ಸ್ವಯಂ ಪ್ರೇರಿತರಾಗಿ ಪಕ್ಷದ ಕಾರ್ಯಕರ್ತರು, ಸದಸ್ಯರು, ಅಭಿಮಾನಿಗಳು ಅಗಮಿಸಲಿದ್ದಾರೆ ಎಂದರು.

ಕೈ ಮುಗೀತೇನೆ, ನನ್ನ ವಿರುದ್ಧ ಕೇಸ್‌ ಹಾಕಿ: ಕೆಂಪಣ್ಣ

ಸಿದ್ದು ಹೆಜ್ಜೆ ಇಟ್ಟಲ್ಲಿ ಹುಲ್ಲು ಬೆಳೆಯೊಲ್ಲ: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆ ತಂದರೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಸೋತು, ಕಾಂಗ್ರೇಸ್‌ ಗೆಲ್ಲಲಿದೆ ಎಂಬುವುದು ಕಾಂಗ್ರೇಸ್‌ ಮುಖಂಡರ ಭ್ರಮೆ. ಸಿದ್ದರಾಮಯ್ಯ ಹೆಜ್ಜೆ ಇಟ್ಟಕಡೆ ಹುಲ್ಲುಗರಿಕೆಯೂ ಬೆಳೆಯುವುದಿಲ್ಲ. ಖರ್ಗೆ, ಪರಮೇಶ್‌, ಕೆ.ಎಚ್‌.ಮುನಿಯಪ್ಪ ಸೇರಿದಂತೆ ಎಲ್ಲಾ ನಾಯಕರು ಚುನಾವಣೆಯಲ್ಲಿ ಸೋಲಲು ಸಿದ್ದರಾಮಯ್ಯನವರ ಕುತಂತ್ರಗಳೇ ಕಾರಣ ಎಂದರು.

ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ಡಾ. ಕೆ.ಎನ್‌. ವೇಣುಗೋಪಾಲ್‌, ರಾಜ್ಯ ಬಿಜೆಪಿ ಕಾರ್ಯದರ್ಶಿ ಕೇಶವ ಪ್ರಸಾದ್‌ ಮಾತನಾಡಿದರು. ಮಾಜಿ ಸಚಿವ ವರ್ತೂರು ಪ್ರಕಾಶ್‌, ಮಾಜಿ ಶಾಸಕ ವೈ. ಸಂಪಂಗಿ, ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್‌, ಜಿಲ್ಲಾ ಪ್ರಭಾರಿ ಜಯಚಂದ್ರರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ಕೃಷ್ಣಮೂರ್ತಿ, ಕೂಡಾ ಅಧ್ಯಕ್ಷ ವಿಜಯಕುಮಾರ್‌, ಜಿಲ್ಲಾ ಯುವ ಮೋರ್ಚಾ ಬಾಲಾಜಿ, ಮುಂತಾದವರು ಉಪಸ್ಥಿತರಿದ್ದರು.

ಕಮಿಷನ್ ಆರೋಪ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ತಮ್ಮ ವಿರುದ್ಧ ಕಮಿಷನ್ ಆರೋಪ ಮಾಡಿರುವುದಕ್ಕೆ ಸಚಿವ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನೋತ್ಸವ  ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಆಗಮಿಸಿದ ಸಚಿವ ಮುನಿರತ್ನ,ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಅವರು,  ಜಿಲ್ಲೆಯ ಡಿಸಿಸಿ ಬ್ಯಾಂಕ್ ನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ಧವೂ ತನಿಖೆ ನಡೆಯಲಿದೆ. ನನ್ನ ವಿರುದ್ಧ ಕಮಿಷನ್ ಆರೋಪ  ಮಾಡಿರುವ ಗುತ್ತಿಗೆದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆಯಾಗಿದೆ ಎಂದರು.

ಕಮಿಷನ್‌ ಆರೋಪ: ಕೆಂಪಣ್ಣ ಮೇಲೆ 50 ಕೋಟಿ ಮಾನನಷ್ಟ ಕೇಸ್‌ ಹಾಕುವೆ, ಮುನಿರತ್ನ

ನೋಟಿಸ್ ತಲುಪಿದ 8 ದಿನಗಳ ಬಳಿಕ ಗುತ್ತಿಗೆದಾರರು ಏನೂ ಪ್ರತಿಕ್ರಿಯೆ ನೀಡುತ್ತಾರೆ ಎಂದು ಗಮನಿಸಿ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ ಎಂದು ಹೇಳಿದರು. ಇನ್ನು ಅವರ ವಿರುದ್ಧ ಕೇವಲ ಮಾನನಷ್ಟ ಮೊಕದ್ದಮೆ ಮಾತ್ರವಲ್ಲದೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲು ತೀರ್ಮಾನಿಸಲಾಗಿದೆ. ಅಲ್ಲದೇ ಕೋಲಾರದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಮುಂದಿನ ವಾರದಿಂದ ಕಾಮಗಾರಿ ಪರಿಶೀಲನೆ ಚಟುವಟಿಕೆಯು ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರಲ್ಲದೇ,ಡಿಸಿಸಿ ಬ್ಯಾಂಕ್ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಪರೋಕ್ಷವಾಗಿ ಕೆಲವರಿಗೆ ಎಚ್ಚರಿಕೆ ನೀಡಿದ್ರು.

click me!