ಕೊರೋನಾ ಗೆದ್ದ 13 ಮಂದಿಯ ಬಂಗಾಡಿ ಕುಟುಂಬ

By Kannadaprabha NewsFirst Published May 31, 2021, 9:33 AM IST
Highlights
  • ಬಂಗಾಡಿಯ 13 ಮಂದಿಯ ಕುಟುಂಬ ಈಗ ಕೊರೋನಾ ಸೋಂಕಿನಿಂದ ಮುಕ್ತ
  • ಲಾಕ್‌ಡೌನ್‌ಗೆ ಮೊದಲು ಸರಕಾರದ ಮಾರ್ಗಸೂಚಿ ಪ್ರಕಾರ ನಿಗದಿತ ಜನರ ಭೂತಕೋಲ ಆಯೋಜನೆ
  • ಇದಾದ ಬಳಿಕ ಎಲ್ಲರಿಗೂ ತಗುಲಿದ್ದ ಮಹಾಮಾರು -  ಸಂಪೂರ್ಣ ಕುಟುಂಬ ಗುಣಮುಖ

ಬೆಳ್ತಂಗಡಿ(ಮೇ.31):  ಇಂದಬೆಟ್ಟು ಗ್ರಾಮದ ಬಂಗಾಡಿಯ 13 ಮಂದಿಯ ಕುಟುಂಬ ಈಗ ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದು ಕೊರೋನಾ ಗೆದ್ದಿದ್ದಾರೆ.

ಬಂಗಾಡಿಯ ಪೈ ಅವರದ್ದು ಅವಿಭಕ್ತ ಕುಟುಂಬ. ಒಂದೇ ಮನೆಯಲ್ಲಿ 13 ಮಂದಿ ವಾಸಿಸುತ್ತಿದ್ದಾರೆ. ಲಾಕ್‌ಡೌನ್‌ಗೆ ಮೊದಲು ತಮ್ಮ ಮನೆಯಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ನಿಗದಿತ ಜನರ ಭೂತಕೋಲ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಮುಂಚಿತವಾಗಿ ಮುಂಬೈನಿಂದ ಆಗಮಿಸಿದ್ದ ಒಬ್ಬರಿಗೆ ಇಲ್ಲಿ ಬಂದ ಬಳಿಕ ಕೊರೋನಾ ಕಾಣಿಸಿಕೊಂಡಿತ್ತು.

ನಂತರ ಈ ಕುಟುಂಬದ ಒಬ್ಬೊಬ್ಬರಿಗೆ ಸೋಂಕು ಹರಡಿ 13 ಮಂದಿಯೂ ಕೊರೋನಾ ಪೀಡಿತರಾದರು. ಮೂರು ವರ್ಷದ ಪುಟಾಣಿ ಸಹಿತ ಕುಟುಂಬದ ಎಲ್ಲ ವಯೋಮಾನದವರಿಗೂ ಸೋಂಕು ತಗಲಿ 12 ಮಂದಿ ಐಸೋಲೇಶನ್‌ನಲ್ಲಿದ್ದು ಗುಣಮುಖರಾಗಿದ್ದಾರೆ. ಕುಟುಂಬದ 60ರ ಹರೆಯದ ಒಬ್ಬರು ಮಾತ್ರ ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಇದೀಗ ಕುಟುಂಬವನ್ನು ಸೇರಿಕೊಂಡಿದ್ದಾರೆ.

ದೇಶದಲ್ಲಿ ತಗ್ಗಿದ ಕೊರೋನಾ: ಕೊಂಚ ಸಮಾಧಾನ .

ಕುಟುಂಬ ಸದಸ್ಯರೆಲ್ಲರೂ ವೈದ್ಯರ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುವ ಜತೆ ಯಾವುದೇ ಒತ್ತಡಗಳಿಗೆ ಒಳಗಾಗದೆ ಔಷಧಿಗಳನ್ನು ಸೇವಿಸಿದ್ದು ಸಂಪೂರ್ಣ ಗುಣಮುಖರಾಗಿದ್ದಾರೆ. ಜತೆಗೆ ಮನೆಯಿಂದ ಹೊರಗೆ ಬರದೆ ಪರಿಸರದ ಇತರರಿಗೆ ಸೋಂಕು ತಗಲದಂತೆ ಹೆಚ್ಚಿನ ಮುಂಜಾಗ್ರತೆ ವಹಿಸಿದ್ದರು.ಇವರೆಲ್ಲರ ಹೋಂ ಐಸೋಲೇಷನ್‌ ಅವಧಿ ಮುಗಿದಿದ್ದು ಆರೋಗ್ಯವಂತರಾಗಿರುವ ಕುಟುಂಬ ಸದಸ್ಯರು ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಪಟ್ಟರು. ವಿಶ್ವವ್ಯಾಪ್ತಿಯಲ್ಲಿ ವ್ಯಾಪಿಸಿರುವ ಸೋಂಕು ತೊಲಗಿ, ಪ್ರತಿಯೊಬ್ಬ ಕೋವಿಡ್‌ ಪೀಡಿತರು ಇದನ್ನು ಎದುರಿಸಿ ಆರೋಗ್ಯವಂತರಾಗಿ ಸೋಂಕಿನಿಂದ ಹೊರಬರಲಿ ಎಂಬ ಆಶಯದೊಂದಿಗೆ ಕೇಕ್‌ ಕತ್ತರಿಸಿ ಕೊರೋನಾ ಎದುರಿಸಿ ಹೊರಬಂದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸ್ಥಳೀಯರು, ಗ್ರಾ.ಪಂ., ಆರೋಗ್ಯ ಕಾರ್ಯಕರ್ತರ ಸಹಿತ ಆಪ್ತರೆಲ್ಲರೂ ಉತ್ತಮ ಸಹಕಾರ, ಸಲಹೆ ನೀಡಿ ಧೈರ್ಯ ತುಂಬಿದರು. ಕುಟುಂಬದ 13 ಮಂದಿ ಸದಸ್ಯರು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ ಸೋಂಕನ್ನು ಗೆದ್ದು ಬಂದಿದ್ದೇವೆ.ಎಲ್ಲರ ಹೋಂ ಐಸೋಲೇಶನ್‌ ಅವಧಿ ಮುಗಿದಿದೆ.ಎಲ್ಲಾ ಸದಸ್ಯರು ಆರೋಗ್ಯವಂತರಾಗಿದ್ದು, ಅವರವರ ವ್ಯವಹಾರ ಕ್ಷೇತ್ರದಲ್ಲಿ ಮುಂದುವರಿಯಲಿದ್ದೇವೆ

- ಅನಿಲ್‌ ಪೈ, ಪೈ ಕುಟುಂಬ ಸದಸ್ಯ, ಬಂಗಾಡಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!