ಲಕ್ಕುಂಡಿ ಮಣ್ಣಲ್ಲಿ ಅಡಗಿದ್ದ ಚಾಲುಕ್ಯರ ರಹಸ್ಯ ಪತ್ತೆ! 13 ಸಾಲುಗಳಲ್ಲಿ ಕನ್ನಡ ಶಾಸನ, ಜಗದೇಕಮಲ್ಲನ ಆಳ್ವಿಕೆ ಉಲ್ಲೇಖ

Published : May 26, 2026, 02:14 PM IST
inscription found in Lakkundi

ಸಾರಾಂಶ

ಗದಗದ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ, 2ನೇ ಜಗದೇಕಮಲ್ಲನ ಆಳ್ವಿಕೆಯನ್ನು ಉಲ್ಲೇಖಿಸುವ ಹೊಸ ತುಂಡು ಶಾಸನ ಪತ್ತೆಯಾಗಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವು 12ನೇ ಶತಮಾನದ ಕುಂತಳನಾಡು ಹಾಗೂ ಮಾಸವಾಡಿ ಆಡಳಿತ ಘಟಕಗಳ ಬಗ್ಗೆ ಮಾಹಿತಿ ನೀಡುತ್ತದೆ.

ಗದಗ: ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ಶಾಸನ ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರಲ್ಲಿ ಕುತೂಹಲ ಮೂಡಿಸಿದೆ. ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿರುವ ಈ ತುಂಡು ಶಾಸನವು 13 ಸಾಲುಗಳನ್ನು ಒಳಗೊಂಡಿದ್ದು, ಚಾಲುಕ್ಯ ಚಕ್ರವರ್ತಿ 2ನೇ ಜಗದೇಕಮಲ್ಲನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಶಾಸನದಲ್ಲಿ ಕುಂತಳನಾಡು ಹಾಗೂ ಮಾಸವಾಡಿ ಆಡಳಿತ ಘಟಕಗಳ ಕುರಿತು ಪ್ರಸ್ತಾಪವಿದ್ದು, ಜಗದೇಕಮಲ್ಲದೇವನ ಕಾಲದ ಒಬ್ಬ ಮಹಾಮಂಡಳೇಶ್ವರನ ಪ್ರಶಸ್ತಿಯನ್ನು ಹೊಗಳಲಾಗಿದೆ. ಆದರೆ ಶಾಸನದ ಬಹುತೇಕ ಭಾಗ ತುಂಡಾಗಿ ಹಾನಿಗೊಳಗಾಗಿರುವುದರಿಂದ ಹೆಚ್ಚಿನ ವಿವರ ಲಭ್ಯವಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಜಗದೇಕಮಲ್ಲನ ಆಳ್ವಿಕೆಯ ಅವಧಿಯೆಂದು ಶಂಕೆ

ಶಾಸನದ ಆರಂಭದಲ್ಲಿ ಶಿವಸ್ತುತಿ ಇರುವುದರಿಂದ ಇದು ಶಿವಾಲಯಕ್ಕೆ ಭೂದಾನ ನೀಡಿದ ಕುರಿತು ಇರಬಹುದೆಂದು ಅಂದಾಜಿಸಲಾಗಿದೆ. ಶಾಸನದಲ್ಲಿ ಸ್ಪಷ್ಟ ಕಾಲದ ಉಲ್ಲೇಖ ಇಲ್ಲದಿದ್ದರೂ, ಜಗದೇಕಮಲ್ಲನ ಆಳ್ವಿಕೆಯ ಅವಧಿಯಾದ ಕ್ರಿಶ 1139ರಿಂದ 1149ರ ನಡುವಿನ ಕಾಲಘಟ್ಟದಲ್ಲಿ ಇದು ರಚನೆಯಾಗಿರಬಹುದು ಎಂದು ಹೇಳಲಾಗಿದೆ. ಲಿಪಿ ಶೈಲಿಯ ಆಧಾರದ ಮೇಲೂ ಇದನ್ನು 12ನೇ ಶತಮಾನದ ಶಾಸನವೆಂದು ಗುರುತಿಸಲಾಗಿದೆ. ಬಸಪ್ಪ ಮುಸುಕಿನಬಾವಿ ಅವರು ಶಾಸನವನ್ನು ಗುರುತಿಸಿದ್ದು, ಶಾಸನವನ್ನು ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಹಾಗೂ ಶಾಸನ ಸಂಶೋಧಕ ಡಾ. ರವಿಕುಮಾರ ಕೆ. ನವಲಗುಂದ ಅವರು ಅಧ್ಯಯನ ಮಾಡಿ ವಿವರಗಳನ್ನು ನೀಡಿದ್ದಾರೆ ಎಂದು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಹಾಗೂ ಆಯುಕ್ತ ಡಾ. ಶರಣು ಗೋಗೇರಿ ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ಕಣ್ಣಮುಂದೆ ಬಂಗಾರ ಇದ್ರೂ ಮುಟ್ಟಲ್ಲ.. ಬೆಳ್ಳಿ ಕಂಡ್ರೆ ಬಿಡೋಲ್ಲ! ಬೆಂಗಳೂರಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್‌ಗೆ ಪೊಲೀಸರೇ ಶಾಕ್!
ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕೊಲೆಗಾರ ವೈದ್ಯ ಗಂಡನ ರಹಸ್ಯ ಬಯಲು ಮಾಡಿದ 6 ಸಾಕ್ಷಿಗಳಿವು!