ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ‘ನಮ್ಮ ಕ್ಲಿನಿಕ್‌’ ಲೋಕಾರ್ಪಣೆ

By Kannadaprabha NewsFirst Published Dec 15, 2022, 10:29 AM IST
Highlights

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ‘ನಮ್ಮ ಕ್ಲಿನಿಕ್‌’ ಲೋಕಾರ್ಪಣೆಯಾಗಿದೆ.  ಮಂಗಳೂರು ನಗರದ ಹಲವೆಡೆ ಸೇರಿ ಗ್ರಾಮೀಣ ಪ್ರದೇಶಗಳಲ್ಲೂ ನಮ್ಮ ಕ್ಲಿನಿಕ್‌ ತೆರೆದಿದೆ. 

ಮಂಗಳೂರು (ಡಿ.15): ರಾಜ್ಯ ಸರ್ಕಾರ ನೂತನವಾಗಿ ಆರಂಭಿಸಿರುವ ‘ನಮ್ಮ ಕ್ಲಿನಿಕ್‌’ನ್ನು ದ.ಕ. ಜಿಲ್ಲೆಯ 12 ಕಡೆಗಳಲ್ಲಿ ಬುಧವಾರ ಚಾಲನೆ ನೀಡಲಾಗಿದೆ. ಮಂಗಳೂರು ನಗರದ ಹಲವೆಡೆ ಸೇರಿ ಗ್ರಾಮೀಣ ಪ್ರದೇಶಗಳಲ್ಲೂ ನಮ್ಮ ಕ್ಲಿನಿಕ್‌ ತೆರೆದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಸೂಟರ್ಪೇಟೆಯ 6ನೇ ಅಡ್ಡ ರಸ್ತೆಯಲ್ಲಿರುವ ಸಮಾಜ ಭವನದಲ್ಲಿ ನಮ್ಮ ಕ್ಲಿನಿಕ್‌ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಪಂ ಸಿಇಒ ಡಾ.ಕುಮಾರ್‌, ಆರೋಗ್ಯದ ಬಲವರ್ಧನೆಗೆ, ಮನೆ ಬಾಗಿಲಲ್ಲಿಯೇ ಆರೋಗ್ಯ ಸೇವೆ ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದಿಂದ ಈ ರೀತಿಯ ಕ್ರಮ ವಹಿಸಲಾಗಿದೆ. ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನಿರಂತರವಾಗಿ ನೀಡಲು ರಾಜ್ಯದ 114 ನಮ್ಮ ಕ್ಲಿನಿಕ್‌ಗಳನ್ನು ಮುಖ್ಯಮಂತ್ರಿ ಏಕಕಾಲಕ್ಕೆ ಲೋಕಾರ್ಪಣೆ ಮಾಡಿದ್ದಾರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಕ್ಲಿನಿಕ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು.

368 ಆರೋಗ್ಯ ಅಧಿಕಾರಿ ನೇಮಕ: ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆಯಡಿ ಕಳೆದ ಒಂದೂವರೆ ವರ್ಷದಲ್ಲಿ ಉಪಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ನೇಮಕವಾಗಿದ್ದು, ಅವರು ಮನೆ ಬಾಗಿಲಿಗೆ ಹೋಗಿ ಆರೋಗ್ಯ ಪರಿಶೀಲಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 368 ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕವಾಗಿದ್ದು, ನಗರ ಪ್ರದೇಶಗಳಲ್ಲಿ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್‌ ಜಯಾನಂದ ಅಂಚನ್‌, ನಮ್ಮ ಕ್ಲಿನಿಕ್‌ನಲ್ಲಿ ಗರ್ಭಿಣಿಯರ ಆರೈಕೆ, ಬಾಣಂತಿ ಸೇವೆ, ನವಜಾತ ಶಿಶು ಆರೈಕೆ, ಚುಚ್ಚುಮದ್ದು ಸೇವೆ, ಮಕ್ಕಳ ಹಾಗೂ ಹದಿಹರೆಯದವರಿಗೆ ನೀಡುವ ಆರೋಗ್ಯ ಸೇವೆಗಳು, ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ, ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ರೋಗಗಳ ನಿರ್ವಹಣೆ, ಹಿರಿಯ ನಾಗರಿಕರ ಆರೈಕೆ, ಕಣ್ಣು- ದಂತ ಆರೋಗ್ಯ ಸೇವೆಗಳ ಅನುಷ್ಠಾನ, ತುರ್ತು ವೈದ್ಯಕೀಯ ಸೇವೆಗಳನ್ನು ನೀಡುವುದು, ಮಾನಸಿಕ ಆರೋಗ್ಯ ಸೇವೆಗಳು ಅಲ್ಲದೆ ನಿರ್ದಿಷ್ಟರೋಗ ನಿರ್ಣಯ ಸೇವೆಗಳನ್ನು ನೀಡಲಾಗುವುದು. ಇದರ ಸದುಪಯೋಗ ಪಡೆಯುವಂತೆ ಹೇಳಿದರು.

Namma Clinic: ಬಡವರ ಆರೋಗ್ಯ ರಕ್ಷಣೆಗೆ ನಮ್ಮ ಕ್ಲಿನಿಕ್‌: ಸಚಿವ ಸುಧಾಕರ್‌

ಉಪಮೇಯರ್‌ ಪೂರ್ಣಿಮಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್‌ ಕುಮಾರ್‌, ಸ್ಥಳೀಯ ಕಾರ್ಪೊರೇಟರ್‌ ಭರತ್‌ ಕುಮಾರ್‌, ಮಾಜಿ ಸಚೇತಕ ಸುಧೀರ್‌ ಶೆಟ್ಟಿಮಾತನಾಡಿದರು.

 

Namma Clinic: ಕಲಬುರಗಿಯಲ್ಲಿ ಬಡವರ ಆರೋಗ್ಯ ಸಂಜೀವಿನಿ 'ನಮ್ಮ‌ ಕ್ಲಿನಿಕ್‌'ಗೆ ಚಾಲನೆ

ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ತಾಲೂಕು ಆರೋಗ್ಯಾಧಾರಿ ಡಾ. ಸುಜಯ್, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿಭಾಗವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಸ್ವಾಗತಿಸಿ, ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಅವರು ನಮ್ಮ ಕ್ಲಿನಿಕ್‌ನ್ನು ಲೋಕಾರ್ಪಣೆ ಮಾಡಿದರು. ಮಂಗಳೂರಿನ ಸೂಟರ್‌ ಪೇಟೆಯಲ್ಲಿ ನಮ್ಮ ಕ್ಲಿನಿಕ್‌ ಉದ್ಘಾಟನೆ.

click me!