Udupi: 10 ಸೆಂಟ್ಸ್ ಒಳಗಿನ ಭೂಮಿ ಕೃಷಿವಲಯದಿಂದ ವಸತಿ ವಲಯಕ್ಕೆ ಮಾರ್ಪಾಟು ಅವಕಾಶ

By Gowthami KFirst Published Jan 12, 2023, 5:39 PM IST
Highlights

ಉಡುಪಿ  ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 10 ಸೆಂಟ್ಸ್ ವರೆಗೆ ಕೃಷಿಯಿಂದ ವಸತಿಗೆ ವಲಯ ಬದಲಾವಣೆಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ನೀಡಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ. 

ಉಡುಪಿ (ಜ.12): ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 10 ಸೆಂಟ್ಸ್ ವರೆಗೆ ಕೃಷಿಯಿಂದ ವಸತಿಗೆ ವಲಯ ಬದಲಾವಣೆಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ  ನೀಡಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಜನತೆಯ ಬಹು ಬೇಡಿಕೆಯ ಸಮಸ್ಯೆ ಬಗೆಹರಿಯಲಿದೆ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿ 10 ಸೆಂಟ್ಸ್ ಜಾಗ ಅಥವಾ 3000 ಚದರ ಅಡಿ ವರೆಗೆ ಕೃಷಿ ವಲಯದಲ್ಲಿ ವಾಸ್ತವ್ಯದ ಮನೆ ನಿರ್ಮಿಸುವವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದ್ದಾರೆ.

ಈ ಐತಿಹಾಸಿಕ ನಿರ್ಣಯ ಕೈಗೊಂಡ ಮುಖ್ಯಮಂತ್ರಿಯವರಾದ ಶ್ರೀಯುತ ಬಸವರಾಜ್ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಅವರಿಗೆ ಶಾಸಕರಾದ ಕೆ ರಘುಪತಿ ಭಟ್ ಅವರು ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಹಿಂದೆ ನಗರಾಭಿವೃದ್ಧಿ ಇಲಾಖೆ ವಲಯ ನಿಯಮಾವಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ದಿನಾಂಕ 11-01-2023 ರಂದು 10 ಸೆಂಟ್ಸ್ ವರೆಗಿನ ಕೃಷಿ ವಲಯದ ಜಮೀನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. 

ಈ ಆದೇಶದಲ್ಲಿ 5 ಸೆಂಟ್ಸ್ ರಿಂದ 7 ಸೆಂಟ್ಸ್ ವರೆಗೆ ಶೇಕಡಾ 45 ಹಾಗೂ 7 ಸೆಂಟ್ಸ್ ರಿಂದ 10 ಸೆಂಟ್ಸ್ ವರೆಗೆ ಶೇಕಡಾ 35 ರ ಮಿತಿಯಲ್ಲಿ ಮತ್ತು  5 ಸೆಂಟ್ಸ್ ಒಳಗಿನ ಕೃಷಿ ಜಮೀನುಗಳಿಗೆ ಯಾವುದೇ ಮಿತಿ ಇರುವುದಿಲ್ಲ ಎಂಬ ಅಂಶವನ್ನು ಅಳವಡಿಸಲಾಗಿದೆ

ಈ ಆದೇಶದಿಂದಾಗಿ ಇನ್ನು ಮುಂದೆ 10 ಸೆಂಟ್ಸ್ ವರೆಗಿನ ಕೃಷಿ ವಲಯದಲ್ಲಿ ವಾಸ್ತವ್ಯದ ಮನೆ ನಿರ್ಮಿಸುವವರಿಗೆ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆ ಮಾಡಲು ಬೆಂಗಳೂರಿಗೆ ಹೋಗದೆ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿಯೇ ವಲಯ ಬದಲಾವಣೆ ಮಾಡಬಹುದಾಗಿದೆ. ಪ್ರಸ್ತುತ ಈ ವಿಷಯದ ಸಂಬಂಧ ಸುಮಾರು 3 ಸಾವಿರಕ್ಕೂ ಅಧಿಕ ಅರ್ಜಿಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿದ್ದು, ಅರ್ಜಿದಾರರಿಗೆ ಅನುಕೂಲವಾಗಲಿದೆ.

ಹೊಲದಲ್ಲಿ ಮನೆ ನಿರ್ಮಾಣಕ್ಕೆ ಭೂಪರಿವರ್ತನೆ: ಶೀಘ್ರ ಕಾಯ್ದೆ

ಉಡುಪಿ ಜನತೆಯ ಬಹು ಬೇಡಿಕೆಯ ಈ ವಿಷಯದ ಬಗ್ಗೆ ಇಲಾಖೆ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ ಶಾಸಕ ಕೆ ರಘುಪತಿ ಭಟ್ ಅವರು ವಿಳಂಬವಾದಾಗ ಅಧಿವೇಶನದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಒತ್ತಾಯಿಸಿದಾಗ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನಗರಾಭಿವೃದ್ಧಿ ಸಚಿವರಾದ  ಭೈರತಿ ಬಸವರಾಜ್ ಅವರು ನೀಡಿದ್ದರು.

Kodagu: ವಾಣಿಜ್ಯ ಭೂಪರಿವರ್ತನೆಗೆ ಪರಿಸರವಾದಿಗಳ ವಿರೋಧ: ರದ್ದತಿಗೆ ಮನವಿ

ಅಲ್ಲದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಲಯ ನಿಯಮಾವಳಿಯಲ್ಲಿ ತಿದ್ದುಪಡಿ ತರಲು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಬಗ್ಗೆ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲೂ ಚರ್ಚಿಸಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿ 10 ಸೆಂಟ್ಸ್ ಜಾಗ ಅಥವಾ 3000 ಚದರ ಅಡಿ ವರೆಗೆ ವಾಸ್ತವ್ಯದ ಮನೆ ನಿರ್ಮಿಸುವವರಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆಗೆ ಅವಕಾಶ ಕಲ್ಪಿಸುವ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿ ತಕ್ಷಣ ಸೂಕ್ತ ಜರುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿರುತ್ತಾರೆ.

click me!