Temperature Drops: ವಿಜಯಪುರ, ಬೀದರ್, ಬಾಗಲಕೋಟೆ ಜಿಲ್ಲೆಗಳಲ್ಲಿ ಕುಸಿದ ಉಷ್ಣಾಂಶ!

By Ravi JanekalFirst Published Jan 12, 2023, 3:19 PM IST
Highlights

ಳೆದ ಮೂರ್ನಾಲ್ಕು ದಿನಗಳಿಂದ ವಿಜಯಪುರ ಜಿಲ್ಲೆ ಸೇರಿ ಬೀದರ್‌, ಬಾಗಲಕೋಟ ಜಿಲ್ಲೆಯಲ್ಲಿ ಚಳಿ ವಿಪರೀತವಾಗಿ ಕಾಡುತ್ತಿದೆ. ಏಕಾಏಕಿ ತಾಪಮಾನ ಕುಸಿದ ಕಾರಣ ಜನರಲ್ಲಿ ಆತಂಕ ಶುರುವಾಗಿದೆ.  10 ವರ್ಷಗಳಲ್ಲೆ ತಾಪಮಾನದಲ್ಲಿ ದಾಖಲೆಯ ಕುಸಿತ ಕಂಡಿದ್ದು,  ಕಳೆದ ಮೂರು ದಿನಗಳಲ್ಲಿ ತಾಪಮಾನ 6 ರಿಂದ 7 ಡಿಗ್ರಿ ಸೆಲ್ಸಿಯಸ್‌ ನಡುವೆ ದಾಖಲಾಗಿದೆ.

- ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜ.12) : ಕಳೆದ ಮೂರ್ನಾಲ್ಕು ದಿನಗಳಿಂದ ವಿಜಯಪುರ ಜಿಲ್ಲೆ ಸೇರಿ ಬೀದರ್‌, ಬಾಗಲಕೋಟ ಜಿಲ್ಲೆಯಲ್ಲಿ ಚಳಿ ವಿಪರೀತವಾಗಿ ಕಾಡುತ್ತಿದೆ. ಏಕಾಏಕಿ ತಾಪಮಾನ ಕುಸಿದ ಕಾರಣ ಜನರಲ್ಲಿ ಆತಂಕ ಶುರುವಾಗಿದೆ. ಕಳೆದ 10 ವರ್ಷಗಳಲ್ಲೆ ತಾಪಮಾನದಲ್ಲಿ ದಾಖಲೆಯ ಕುಸಿತ ಕಂಡಿದ್ದು,  ಕಳೆದ ಮೂರು ದಿನಗಳಲ್ಲಿ ತಾಪಮಾನ 6 ರಿಂದ 7 ಡಿಗ್ರಿ ಸೆಲ್ಸಿಯಸ್‌ ನಡುವೆ ದಾಖಲಾಗಿದ್ದು, ಜನರು ನಡುಗುವಂತಾಗಿದೆ. ಇದನ್ನ ದಶಕದಲ್ಲೆ ಅತಿ ಕಡಿಮೆ ತಾಪಮಾನ ಎನ್ನಲಾಗುತ್ತಿದೆ.

ದಶಕದಲ್ಲೇ ದಾಖಲೆ ರೀತಿ ಕುಸಿದ ತಾಪಮಾನ!

ಕಳೆದ ಮೂರನಾಲ್ಕು ದಿನಗಳಲ್ಲಿ ತಾಪಮಾನ(Temperature)ದಲ್ಲಿ ಭಾರೀ ಕುಸಿತ ಕಂಡಿದೆ. ಕನಿಷ್ಟ 6.5 ರಿಂದ 7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇದು ದಶಕದಲ್ಲೆ ದಾಖಲಾಗಿರುವ ಅತಿ ಕಡಿಮೆ ತಾಪಮಾನ ಎನ್ನಲಾಗ್ತಿದೆ. ಕಳೆದ 2018 ರಲ್ಲಿ 8.5 ರಷ್ಟು ಅತಿ ಕಡಿಮೆ ತಾಪಮಾನ ದಾಖಲಾಗಿತ್ತು. ಆದ್ರೆ ಸಧ್ಯ ದಾಖಲಾಗಿರುವ 6.5 ದಶಕದಲ್ಲೆ ಅತಿ ಕಡಿಮೆ ಉಷ್ಣಾಂಶ ಎನ್ನಲಾಗಿದೆ. ಏಕಾಏಕಿ ತಾಪಮಾನದಲ್ಲಿ ಕುಸಿತ ಕಂಡಿದ್ದರಿಂದ ಜನಜೀವನದಲ್ಲಿ ಕೊಂಚ ವ್ಯತ್ಯಾಸಗಳು ಕಂಡು ಬಂದಿವೆ.

ಕೊಡಗು ಜಿಲ್ಲೆಯಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದ ತಾಪಮಾನ: ಸ್ಥಳೀಯರ ಆತಂಕ

ಬೀದರ್‌, ಬಾಗಲಕೋಟೆಯಲ್ಲೂ ಕುಸಿದ ತಾಪಮಾನ..!

ವಿಜಯಪುರ(Vijayapur) ಜಿಲ್ಲೆ ಸೇರಿ ಉತ್ತರ ಕರ್ನಾಟಕ(Uttara karnataka)ದ ಬೀದರ್‌(Bidar), ಬಾಗಲಕೋಟೆ(Bagalkote) ಜಿಲ್ಲೆಯಲ್ಲೂ ತಾಪಮಾನ ಕನಿಷ್ಟ ಮಟ್ಟಕ್ಕೆ ಕುಸಿದಿದ್ದು, ಹವಾಮಾನ ಇಲಾಖೆ(Meteorological Department) ದಾಖಲಿಸಿಕೊಂಡಿದೆ. ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿ 6 ಡಿಗ್ರಿ ಸೆಲ್ಸಿಯಸ್‌ ನಷ್ಟು ದಾಖಲಾಗಿದೆ. ಮೂರು ಜಿಲ್ಲೆಗಳಲ್ಲಿ ಹೀಗೆ ಏಕಾಏಕಿ ತಾಪಮಾನ ಕುಸಿತದಿಂದಾಗಿ ಜನರಲ್ಲಿ ಆತಂಕದ ಜೊತೆಗೆ ಆರೋಗ್ಯದಲ್ಲಿ ವ್ಯತ್ಯಾಸಗಳು ಉಂಟಾಗುವ ಭೀತಿಯು ಶುರುವಾಗಿದೆ.

ಶೀತ ಮಾರುತಗಳ ಎಚ್ಚರಿಕೆ..!

ಹವಾಮಾನ ಇಲಾಖೆ ಶೀತ ಮಾರುತಗಳು ಬೀಸುವ ಎಚ್ಚರಿಕೆಯನ್ನ ನೀಡಿದೆ. ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಶೀತ ಮಾರುತಗಳು ಬೀಸುವ  ಬಹಳಷ್ಟು ಸಾಧ್ಯತೆ ಇದೆ.  ಮುಂದಿನ 24 ಗಂಟೆಗಳ ಅವಧಿಯಲ್ಲಿ ಕನಿಷ್ಠ ಉಷ್ಣಾಂಶವು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ  ಸಾಮಾನ್ಯಕ್ಕಿಂತ 6 ರಿಂದ 7  ಡಿಗ್ರಿ ಸೆಲ್ಸಿಯಸ್ ಕಡಿಮೆ ಹಾಗೂ ರಾಜ್ಯಾದ್ಯಂತ ಒಂದೆರಡು  ಕಡೆಗಳಲ್ಲಿ ಸಾಮಾನ್ಯಕ್ಕಿಂತ 3 ರಿಂದ 4  ಡಿಗ್ರಿ ಸೆಲ್ಷಿಯಸ್, ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿಗಳನ್ನ ನೀಡಿದೆ.

ಬೆಚ್ಚನೆಯ ಉಡುಪು, ಫೈರ್‌ ಕ್ಯಾಂಪ್‌ ಮೊರೆ ಹೋದ ಜನ..!

ಇದ್ದಕ್ಕಿದ್ದಂತೆ ತಾಪಮಾನದಲ್ಲಿ ಇಳಿಕೆ ಕಂಡಿದ್ದರಿಂದ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ಚಳಿಗಾಲದಲ್ಲಿ ಸಾಮಾನ್ಯಕ್ಕಿಂತ ಮೂರ್ನಾಲ್ಕು ಡಿಗ್ರಿಗಳಷ್ಟು ತಾಪಮಾನದಲ್ಲಿ ಕುಸಿತ ಕಂಡಿರುವುದರಿಂದ ಜನರು ಸಹಜವಾಗಿಯೆ ಸ್ವೆಟರ್‌, ರಗ್ಗು, ಕಂಬಳಿ ಸೇರಿದಂತೆ ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ.

ಕೃಷಿ ವಿದ್ಯಾಲಯದಲ್ಲೂ ಕನಿಷ್ಠ ತಾಪಮಾನ ದಾಖಲು..!

ವಿಜಯಪುರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಹವಾಮಾನ ವರದಿಯಲ್ಲಿ ಕನಿಷ್ಟ 6.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಆಗಿದ್ದು,  ಇದು  ಕಳೆದ 10 ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿ ದಾಖಲಾದ ಕನಿಷ್ಟ ತಾಪಮಾನವಾಗಿದೆ. ಇದೇ ನವೆಂಬರ್ 21ರಂದು 7.6 ಡಿಗ್ರಿ ಸೆಲ್ಷಿಯಸ್ ಕನಿಷ್ಠ ತಾಪಮಾನ ಹಾಗೂ ಗರಿಷ್ಟ 28.0 ಡಿಗ್ರಿ ತಾಪಮಾನ ದಾಖಲಾಗಿರುವದು ದಾಖಲಾಗಿತ್ತು. ಆದರೆ ಇದನ್ನು ಮೀರಿಸುವಷ್ಟು ಚಳಿ ಜನವರಿ 9 ರಂದು 6.5 ಡಿಗ್ರಿ ಸೆಲಿಯಸ್ ತಾಪಮಾನ ದಾಖಲಾಗಿದೆ.

ಏಕಾಏಕಿ ತಾಪಮಾನ ಕುಸಿತಕ್ಕೆ ಕಾರಣವೇನು?

ಈ ರೀತಿ ಏಕಾಏಕಿ ತಾಪಮಾನ ಕನಿಷ್ಟ ಡಿಗ್ರಿ ಸೆಲ್ಸಿಯಸ್ ಗೆ ಬರಲು ಬಂಗಾಳಕೊಲ್ಲಿ(Bay of Bengal)ಯಲ್ಲಿ ವಾಯುಭಾರ ಕುಸಿತಹಾಗೂ ಉತ್ತರ ಭಾರತದಲ್ಲಿ ಹೆಚ್ಚು ದಟ್ಟನೆ ಮಂಜು ಸುರಿಯುತ್ತಿರುವದು ಕಾರಣವಾಗಿದೆ. ಕಳೆದ ಮೂರು ವರ್ಷ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ತೇವಾಂಶ ಹೆಚ್ಚಳದಿಂದ ಚಳಿ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಎನ್ನುವದು ಹವಾಮಾನ ಮಾಪನ ಕೇಂದ್ರದ ಅಧಿಕಾರಿಗಳ ಅಭಿಪ್ರಾಯವಾಗಿದೆ. 

2020ರಲ್ಲಿ 58 ಮಳೆ ದಿನಗಳಲ್ಲಿ 862.2 ಮೀ. ಲಿ ಮೀಟರ್, 2021ರ 52 ಮಳೆ ದಿನಗಳಲ್ಲಿ 632.8 ಮೀ.ಮೀಟರ್ ಹಾಗೂ 2021ರ 56 ಮಳೆ ದಿನಗಳಲ್ಲಿ 793.2ಮೀ ಮೀಟರ್ ಮಳೆ ಯಾಗಿದೆ. ಒಟ್ಟು ಜಿಲ್ಲೆಯ ಸರಾಸರಿ ಮಳೆ ಪ್ರಮಾಣ ಇರುವದು 594 ಮೀ.ಮೀಟರ್ ಮೂರು ವರ್ಷದಲ್ಲಿ ಕನಿಷ್ಟ 150_200ಮೀ.ಮೀಟರ್ ಮಳೆ ಹೆಚ್ಚಾದ ಕಾರಣ ಕಳೆದ 10ವರ್ಷದಲ್ಲಿ ಚಳಿ ಕನಿಷ್ಟ ತಾಪಮಾನ 6.5 ಡಿಗ್ರಿ ಸೆಲ್ಸಿಯಸ್ ಆಗಲು ಕಾರಣವಾಗಿದೆ ಎನ್ನುವದು ತಜ್ಞರು ಅಭಿಪ್ರಾಯವಾಗಿದೆ.

ವಾರ್ಷಿಕ ಬೆಳೆಗಳಿಗೆ ಸಮಸ್ಯೆ ಇಲ್ಲ..!

ಈ ರೀತಿ ಕನಿಷ್ಟ ಚಳಿ ತಪಮಾನ‌ ದಾಖಲಾಗಿರುವ ಕಾರಣ ವಾರ್ಷಿಕ ಬೆಳೆಗಳಿಗೆ ಯಾವುದೇ ತೊಂದರೆ ಇಲ್ಲ, ಆದರೆ ತೋಟಗಾರಿಕೆ ಬೆಳೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು  ಬೆಳೆಯುಚ ದ್ರಾಕ್ಷಿಗೆ ರೋಗ ತಗಲುವ ಸಾಧ್ಯತೆಗಳಿರುವ ಕಾರಣ ದ್ರಾಕ್ಷಿ ಬೆಳೆಗಾರರು ಅಗತ್ಯ ಎಚ್ಚರಿಕೆ ವಹಿಸಬೇಕಾಗಿದೆ. ಕನಿಷ್ಟ ತಾಪಮಾನ 6.5 ಕಿಂತ ಕಡಿಮೆ ದಾಖಲಾಗುವದಿಲ್ಲ, ಇನ್ನೂ ಒಂದು ವಾರ ಕಾಲ ತಾಪಮಾನದಲ್ಲಿ ಏರುಪೇರು ಹಾಗಬಹುದು ಹೊರತು ಇದಕ್ಕಿಂತ ಕನಿಷ್ಟ ತಾಪಮಾನ ಮತ್ತಷ್ಟು ಇಳಿಯುವದಿಲ್ಲ ಎಂದು ಹವಾಮಾನ ತಜ್ಞರು ದೃಢಪಡಿಸಿದ್ದಾರೆ.

ಚಳಿಗೆ ಥರಗುಟ್ಟಿದ ಉತ್ತರ ಭಾರತ: ದೆಹಲಿಯಲ್ಲಿ 3 ಡಿಗ್ರಿ ಉಷ್ಣಾಂಶ

ಬಿಸಿ ನೀರು ಸೇವನೆಗೆ ಜಿಲ್ಲಾಧಿಕಾರಿ ದಾನಮ್ಮನವರ್ ಸಲಹೆ..!

ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ಜಿಲ್ಲೆಯ ಜನರಿಗೆ ಕೆಲ ಸಲಹೆಗಳನ್ನ ನೀಡಿದ್ದಾರೆ. ಜನರು ಬೆಚ್ಚನೆಯ ಉಡುಪುಗಳನ್ನ ಧರಿಸಬೇಕು. ಬಿಸಿ ನೀರು ಸೇವಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಜನಸಾಮಾನ್ಯರಿಗೆ ಸಲಹೆಗಳನ್ನ ನೀಡಿದ್ದಾರೆ.

click me!