
ನವದೆಹಲಿ (ಮೇ 18) : ಈಗಾಗಲೆ ಕರ್ನಾಟಕ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ತಾವು ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದರೆ ಬಿಜೆಪಿಗೆ ಸೂಕ್ತ ಸಂಖ್ಯೆಯಲ್ಲಿ ಸ್ಥಾನಗಳು ದೊರೆಯುತ್ತಿದ್ದವು ಎಂದು ಹೇಳಿದ್ದಾರೆ.
ಪ್ರಚಾರಕ್ಕೆ ತಾವು ಆಗಮಿಸಿದ್ದರೆ ನೋಟಾ ಮತಗಳು ಬರುವುದನ್ನು ತಪ್ಪಿಸಿ ಅಗತ್ಯವಿರುವ 8 ಸ್ಥಾನಗಳನ್ನು ಗೆಲ್ಲಿಸಿ ಕೊಡುವಲ್ಲಿ ಯಶಸ್ವಿಯಾಗುತ್ತಿದ್ದೆ. ಇದರಿಂದ ಬಿಜೆಪಿಗೆ ಅಗತ್ಯ ಸ್ಥಾನಗಳು ದೊರಕಿ ಸಮಸ್ಯೆ ಇಲ್ಲದೇ ಸರ್ಕಾರ ರಚನೆ ಮಾಡಬಹುದಿತ್ತು ಎಂದಿದ್ದಾರೆ.
ಒಟ್ಟು 104 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದ್ದು, ಕರ್ನಾಟಕದಲ್ಲಿ ಬಹುಮತವಿಲ್ಲದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಿಎಸ್ ವೈ ಬಹುಮತ ಸಾಬೀತು ಪಡಿಸುವ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೂಡ 24 ಗಂಟೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದೆ.
ಬಿಜೆಪಿಯು ಸಾಕಷ್ಟು ಚುನಾವಣಾ ಪ್ರಚಾರಕರ ಮೂಲಕ ಮತದಾರರನ್ನು ಸೆಳೆಯುವ ಯತ್ನ ಮಾಡಿತ್ತು. ಆದರೂ ಕೂಡ ಸೂಕ್ತ ಸಂಖ್ಯೆಯಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಮುಖಂಡರು ಪ್ರಚಾರ ಮಾಡಿದ್ದರು.