Karnataka Assembly Election- 2018
ಬೆಂಗಳೂರು/ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಂದು ಹಾಗೂ ಚಿತ್ರ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಪರ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಪ್ರಚಾರ ನಡೆಸಲಿದ್ದಾರೆ.
ಇಂದು ಇಡೀ ದಿನ ಚಾಮುಂಡೇಶ್ವರಿ ಕ್ಷೇತ್ರದ ಸುಮಾರು 33 ಹಳ್ಳಿಗಳಲ್ಲಿ ಸಂಚಾರ ನಡೆಸಲಿರುವ ಚಾಲೆಜಿಂಗ್ ಸ್ಟಾರ್, ಬೆಳಗ್ಗೆ 9 ರಿಂದ ರಾತ್ರಿ 7ರ ತನಕ ಸಿದ್ದರಾಮಯ್ಯ ಪರ ಪ್ರಚಾರ ಕೈಗೊಳ್ಳಲಿದ್ದಾರೆ.
ಬೆಳಗ್ಗೆ 9ರ ವೇಳೆಗೆ ಕ್ಷೇತ್ರದ ನಾಗನಹಳ್ಳಿಯಲ್ಲಿ ಪ್ರಚಾರ ಆರಂಭಿಸುವ ದರ್ಶನ್, ಮಧ್ಯಾಹ್ನ 2.30ರ ತನಕ ಇಲವಾಲದಲ್ಲಿ ಪ್ರಚಾರ ನಡೆಸಲಿದ್ದಾರೆ. ಬಳಿಕ ಬೋಗಾದಿಯಲ್ಲಿ 3.30ರಿಂದ ಪ್ರಚಾರ ಆರಂಭಿಸಿ ರಾತ್ರಿ 7.15ಕ್ಕೆ ಶ್ರೀರಾಮಪುರದಲ್ಲಿ ಪ್ರಚಾರ ಕಾರ್ಯಕ್ಕೆ ತೆರೆ ಎಳೆಯಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ತಿಳಿಸಿದೆ.
ಅನಂತರ ಭಾನುವಾರ ದರ್ಶನ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಇಡೀ ದಿನ ಶಾಸಕ ಮುನಿರತ್ನ ಪರ ರೋಡ್ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ.