ಕಾಂಗ್ರೆಸ್ ಬಿಡುಗಡೆ ಮಾಡಿರುವುದು ನಕಲಿ ಆಡಿಯೋ

First Published May 19, 2018, 8:57 AM IST
Highlights

ವಿಶ್ವಾಸಮತ ಯಾಚನೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್ ನವರು ಅನವಶ್ಯಕವಾಗಿ ನನ್ನ ಹೆಸರಿನ ನಕಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಬೆಂಗಳೂರು : ವಿಶ್ವಾಸಮತ ಯಾಚನೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್ ನವರು ಅನವಶ್ಯಕವಾಗಿ ನನ್ನ ಹೆಸರಿನ ನಕಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ರಾಯಚೂರು ಗ್ರಾಮಾಂತರ ಕಾಂಗ್ರೆಸ್ ಶಾಸಕ ಬಸನಗೌಡ ಅವರಿಗೆ ಜನಾರ್ದನ ರೆಡ್ಡಿ ಕರೆ ಮಾಡಿ, ಪಕ್ಷಕ್ಕೆ ಬರುವ ಬಗ್ಗೆ  ಆಮಿಷ ವೊಡ್ಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆ ಮಾಡಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ ಮೂಲಕ ಸ್ಪಷ್ಟನೆ ನೀಡಿರುವ ಜನಾರ್ದನ ರೆಡ್ಡಿ, ಕಾಂಗ್ರೆಸ್ ನಾಯಕರು ಸತ್ಯ ಹರಿಶ್ಚಂದ್ರನ ವಂಶಸ್ಥರು ಎಂಬಂತೆ ನಾಟಕ ಮಾಡುತ್ತಿದ್ದಾರೆ. ಕಳೆದ ಆರು ದಶಕಗಳಿಂದ ಕಾಂಗ್ರೆಸ್ ಸಂವಿಧಾನವನ್ನು ಎಷ್ಟು ಬಾರಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ದೇಶದ ಜನತೆಗೆ ಗೊತ್ತಿದೆ. 

ಈಗಲೂ  ಅದೇ ಹಾದಿಯಲ್ಲಿ ಜನರನ್ನು ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.  ವಿಶ್ವಾಸ ಮತ ಯಾಚನೆ ಯಲ್ಲಿ ಸೋಲಿನ ಭೀತಿಯಿಂದ ನಕಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ನನಗೆ ಮತ್ತು ಬಿಜೆಪಿಗೆ ಕೆಟ್ಟ ಹೆಸರು ತರುವ ಷಡ್ಯಂತ್ರ ಇದಾಗಿದೆ. ನಾಡಿನ ಜನತೆಗೆ ಗೊತ್ತಿದೆ ಇವರ ಬಣ್ಣ ಆಡಿಯೋದಲ್ಲಿ ಇರುವ ಧ್ವನಿಯನ್ನು ನನ್ನ ಹಾಗೆ ಮಾತನಾಡುವ ರೀತಿ ಆಧುನಿಕ ತಂತ್ರಜ್ಞಾನದಿಂದ ಸಿದ್ಧಪಡಿಸಿದ್ದಾರೆ. ನಕಲಿ ಆಡಿಯೋ ಬಿಡುಗಡೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. 

click me!